ಖಾಲಿ ಹುದ್ದೆಗಳ ಭರ್ತಿಗೆ ಕ್ರಮ| ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಸಮಾರೋಪದಲ್ಲಿ ಸಚಿವ ಜಗದೀಶ ಶೆಟ್ಟರ್‌|ನೌಕರರು ಸರ್ಕಾರದ ನರನಾಡಿ ಇದ್ದಂತೆ| ನೌಕರರ ಕಾರ್ಯ ಶೈಲಿ, ಸಾರ್ವಜನಿಕ ಸ್ಪಂದನೆಯಿಂದ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯ|

ಧಾರವಾಡ[ಮಾ.02]: ರಾಜ್ಯದಲ್ಲಿ 2.40 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಗುತ್ತಿಗೆ ಮೂಲಕ ಸರಿದೂಗಿಸದೇ ಖಾಯಂ ಹುದ್ದೆಗಳ ನೇಮಕಾತಿಗೆ ಸರ್ಕಾರ ಮುಂದಾಗಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಆರ್‌.ಎನ್‌. ಶೆಟ್ಟಿಕ್ರೀಡಾಂಗಣದಲ್ಲಿ ಇಂದು ಅವರು ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೌಕರರು ಸರ್ಕಾರದ ನರನಾಡಿ ಇದ್ದಂತೆ. ನೌಕರರ ಕಾರ್ಯ ಶೈಲಿ, ಸಾರ್ವಜನಿಕ ಸ್ಪಂದನೆಯಿಂದ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯ. ಖಾಸಗಿ, ಕಾರ್ಪೊರೇಟ್‌ ಕಂಪೆನಿಗಳ ಮಾದರಿಯ ಮೂಲಭೂತ ಸೌಕರ್ಯಗಳು ಎಲ್ಲ ಸರ್ಕಾರಿ ಕಚೇರಿಗಳಿಗೂ ಒದಗಿಸುವ ಆಶಯ ಇದೆ. ಬರುವ ದಿನಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲು ಶ್ರಮಿಸಲಾಗುವುದು ಎಂದರು.

ಸರ್ಕಾರಿ ನೌಕರರು ಮೂರು ದಿನಗಳ ಕಾಲ ಸಂತಸದಿಂದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಧಾರವಾಡ ಪೇಡೆಯ ಸಿಹಿ ನೆನಪುಗಳ ನೌಕರರ ಮನಗಳಲ್ಲಿ ಸದಾಕಾಲ ನೆಲೆಸಲಿ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಮಾತನಾಡಿ, ರಾಜ್ಯದಲ್ಲಿ 6 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದೇವೆ. 2 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ನೌಕರರ ಮೇಲಿನ ಅಧಿಕ ಹೊರೆ, ಒತ್ತಡ ಕಡಿಮೆ ಮಾಡಲು ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಇದಕ್ಕೂ ಮುಂಚೆ ಪ್ರಾಸ್ತಾವಿಕ ಭಾಷಣದಲ್ಲಿ ಒತ್ತಾಯಿಸಿದರು.

ನೌಕರರ ಸಂಘ ಕ್ರಿಯಾಶೀಲವಾಗಿ ನೌಕರರ ಹಿತಕ್ಕಾಗಿ ನ್ಯಾಯಯುತವಾಗಿ ಹೋರಾಡುತ್ತಿದೆ. ಕೇಂದ್ರಕ್ಕೆ ಸಮಾನವಾದ ವೇತನ ನೀತಿ, ನೂತನ ಪಿಂಚಣಿ ಯೋಜನೆ ರದ್ಧತಿ, ನಿಮೃತ್ತರಿಗೂ ಆರೋಗ್ಯ ಸೌಕರ್ಯಗಳನ್ನು ಒದಗಿಸಲು ಸಂಘಟನೆಯು ಸರ್ಕಾರದೊಂದಿಗೆ ಸೌಹಾರ್ದ ಸಂಪರ್ಕ ಸಾಧಿಸಿ ಬೇಡಿಕೆ ಈಡೇರಿಸಿಕೊಳ್ಳಲಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಾಕೀರ್‌ ಅಹ್ಮದ್‌ ತೋಂಡಿಖಾನ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ, ಗೌರವಾಧ್ಯಕ್ಷ ಶಿವರುದ್ರಯ್ಯ,ಕೋಶಾಧ್ಯಕ್ಷ ಶ್ರೀನಿವಾಸ, ಬಸವರಾಜ ಗುರಿಕಾರ ಇದ್ದರು. ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಎಫ್‌. ಸಿದ್ದನಗೌಡರ ಸ್ವಾಗತಿಸಿದರು.