ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರಿನ ಗೋಪಾಲಕೃಷ್ಣ ಗೋಶಾಲೆಯು ಅನುದಾನ ಕೊರತೆಯಿಂದ ಗೋವು ಪಾಲನೆಗೆ ಕಷ್ಟ ಪಡುತ್ತಿದೆ. ಮೇವು ಖರೀದಿಗೂ -ಹಣ ಇಲ್ಲದ ಕಾರಣ ಹಸುಗಳು ಸೊರಗುತ್ತಿವೆ. 

ಭರತ್‌ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

Add Asianetnews Kannada as a Preferred SourcegooglePreferred

ಕಾರವಾರ(ಜ.22): ಸರಕಾರ ಗೋಶಾಲೆಗಳಿಗೆ ಪ್ರೋತ್ಸಾಹ ಹಾಗೂ ಅನುದಾನ ನೀಡುವುದಾಗಿ ಕೇವಲ ದಾಖಲೆಗಳಲ್ಲಿ ಮಾತ್ರ ಘೋಷಣೆ ಮಾಡಿದ ಕಾರಣ ಇಂದಿಗೂ ರಾಜ್ಯದ ಹಲವು ಗೋಶಾಲೆಗಳು ಸಂಕಷ್ಟ ಎದುರಿಸುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರಿನ ಗೋಪಾಲಕೃಷ್ಣ ಗೋಶಾಲೆಯು ಅನುದಾನ ಕೊರತೆಯಿಂದ ಗೋವು ಪಾಲನೆಗೆ ಕಷ್ಟ ಪಡುತ್ತಿದೆ. ಮೇವು ಖರೀದಿಗೂ -ಹಣ ಇಲ್ಲದ ಕಾರಣ ಹಸುಗಳು ಸೊರಗುತ್ತಿವೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ....

ಹೌದು, ರಸ್ತೆಯಲ್ಲಿ ತಿರುಗುವ ಬಿಡಾಡಿ ದನಗಳಿಗೆ ಹಾಗೂ ಕಸಾಯಿಖಾನೆಗೆ ಸಾಗಿಸುವಾಗ ಸಿಕ್ಕಿಬಿದ್ದ ದನಗಳಿಗೆ ಆಶ್ರಯ ತಾಣವಾಗಿದೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರಿನ ಗೋಪಾಲಕೃಷ್ಣ ಗೋಶಾಲೆ. 2016ರಲ್ಲಿ ಗೋಪಾಲಕೃಷ್ಣ ಗೋಶಾಲಾ ಟ್ರಸ್ಟ್ ಆರಂಭಿಸಿದ್ದ ಈ ಗೋಶಾಲೆಯು ದಾನಿಗಳ ಸಹಕಾರದೊಂದಿಗೆ ನಿರ್ವಹಣೆ ಆಗುತ್ತಿತ್ತು. ಆದರೆ, ಇತ್ತೀಚೆಗೆ ಗೋ ಪೋಷಣೆಗೆ ಅಗತ್ಯವಾದ ಹಿಂಡಿ, ಹುಲ್ಲು ಸೇರಿದಂತೆ ಮೇವು ಪದಾರ್ಥಗಳನ್ನು ಖರೀದಿಸಲು ಕೂಡಾ ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ. ಗೋಶಾಲೆಯಲ್ಲಿ ಇರುವ ಅಂದಾಜು 65 ಕ್ಕೂ ಹೆಚ್ಚು ಗೋವುಗಳು ಮೇವು ಹಿಂಡಿ ಸರಿಯಾಗಿ ಸಿಗದೇ ಹಸಿವಿನಿಂದ ಬಳಲುವಂತಾಗಿದೆ. ಈ ಹಸುಗಳಿಂದ ಹಾಲಿನ ಇಳುವರಿ ಕಡಿಮೆಯಿದ್ದು, ಪ್ರತಿದಿನ 750ರೂ. ಮಾತ್ರ.

ASSEMBLY ELECTION: ದೇಶದ ಏಳಿಗೆಗೆ ಮೋದಿ ಪರ ನಿಲ್ಲಿ; ರೂಪಾಲಿ ನಾಯ್ಕ್

ಆದಾಯ ದೊರಕುತ್ತಿದೆ. ಆದರೆ, ಇವುಗಳಿಗೆ ಮೇವು ಹಿಂಡಿ ಸೇರಿದಂತೆ ಅಂದಾಜು ಮೂರು ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಗೋವು ಪಾಲನೆಗಾಗಿ 1 ಲಕ್ಷ ರೂ. ಅನುದಾನ ನೀಡಿತ್ತು. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರು ಈ ಗೋಶಾಲೆಯ ಬಗ್ಗೆ ಸಮೀಕ್ಷೆ ನಡೆಸಿ ಅಂದಾಜು 75 ಸಾವಿರ ರೂ‌. ಅನುದಾನ ಬಿಡುಗಡೆ ಮಾಡಿದ್ದರು. ಅದರ ಹೊರತಾಗಿ ಬೇರೆ ನೆರವು ಸರ್ಕಾರದಿಂದ ಬಂದಿಲ್ಲ ಎನ್ನುತ್ತಾರೆ ಗೋಶಾಲೆ ನಿರ್ವಹಿಸುತ್ತಿರುವ ಸಿಬ್ಬಂದಿ.

ಅಂದಹಾಗೆ, ಗೋ ಕಳ್ಳತನ ಮಾಡುವವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗಲೂ ಅವರ ವಶದಲ್ಲಿದ್ದ ಗೋವುಗಳನ್ನು ಪೊಲೀಸರು ಇದೇ ಗೋಶಾಲೆಯಲ್ಲಿ ಬಿಟ್ಟು ತೆರಳುತ್ತಾರೆ. ಆದರೆ, ಗೋವುಗಳ ಪಾಲನೆಗೆ ಯಾವುದೇ ಸಹಾಯವಿಲ್ಲದ ಕಾರಣ ಅವುಗಳ ಹೊಟ್ಟೆ ತುಂಬಿಸಲು ಕೂಡಾ ಕಷ್ಟವಾಗುತ್ತಿದೆ. ಜನಪ್ರತಿನಿಧಿಗಳು ಸರಕಾರ ಅನುದಾನ ಘೋಷಣೆ ಮಾಡುತ್ತಿದೆ ಎಂದು ಹೇಳಿಕೆ ನೀಡುತ್ತಾರೆ ಹೊರತು ಸರಕಾರದ ಘೋಷಣೆಗಳು ದಾಖಲೆಗಳಿಗೆ ಮಾತ್ರ ಸೀಮಿತವಾಗಿವೆ. ಈ ಕಾರಣದಿಂದ ಗೋಪಾಲಕೃಷ್ಣ ಗೋಶಾಲೆಗಳಂತೆ ಹಲವು ಗೋಶಾಲೆಗಳು ಕೂಡಾ ಬಹಳಷ್ಟು ಕಷ್ಟದಲ್ಲೇ ನಡೆಯುತ್ತಿದೆ. ಈ ಕಾರಣದಿಂದ ಪುಣ್ಯಕೋಟಿ ನಿಧಿಯಡಿ ಸರ್ಕಾರ ಈ ಗೋಶಾಲೆಯನ್ನು ಪರಿಗಣಿಸಿ ತಕ್ಷಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಗೋಪಾಲಕೃಷ್ಣ ಗೋಶಾಲಾ ಟ್ರಸ್ಟ್‌ನ ಅಧ್ಯಕ್ಷ ವಿಷ್ಣು ನಾಯ್ಕ ವಿನಂತಿಸಿದ್ದಾರೆ.

ಒಟ್ಟಿನಲ್ಲಿ ಗೋಶಾಲೆಗಳು ಅನುದಾನಗಳ ಕೊರತೆಯಿಂದ ಸಾಕಷ್ಟು ಸಮಸ್ಯೆಯಲ್ಲಿದ್ದು, ಸರಕಾರದ ನಿರ್ಲಕ್ಷ್ಯಕ್ಕೊಳಗಾಗಿವೆ. ಚುನಾವಣೆಯ ಮುನ್ನವೇ ಸರಕಾರ ಎಚ್ಚೆತ್ತು ಗೋಶಾಲೆಗಳಿಗೆ ಅನುದಾನ‌ ನೀಡುವ ಮೂಲಕ ಗೋವುಗಳನ್ನು ರಕ್ಷಿಸಬೇಕಿದೆ.