ಹಲವಾರು ವರ್ಷಗಳಿಂದ ತಮ್ಮ ಸ್ವತ್ತಿನ ಹೆಸರು ತಿದ್ದುಪಡಿ, ಅಳತೆಯಲ್ಲಿನ ವ್ಯತ್ಯಾಸ, ಜನನ, ಮರಣ ಪತ್ರದಲ್ಲಿ ದಿನಾಂಕ, ಹೆಸರು ತಿದ್ದುಪಡಿ, ನಲ್ಲಿ, ಮನೆ ಕಂದಾಯ, ಯುಜಿಡಿ ಸಂಪರ್ಕ ಸೇರಿದಂತೆ ಹಲವು ಸೇವೆಯನ್ನು ತ್ವರಿತವಾಗಿ ಜನರಿಗೆ ಒದಗಿಸುವ ಉದ್ದೇಶದಿಂದ ಪಾಲಿಕೆ ವತಿಯಿಂದ ತ್ವರಿತ ಸೇವೆ ಆಭಿಯಾನವನ್ನು ಪಾಲಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಆಯುಕ್ತ ಆಶ್ವಿಜ ತಿಳಿಸಿದ್ದಾರೆ.

ತುಮಕೂರು : ಹಲವಾರು ವರ್ಷಗಳಿಂದ ತಮ್ಮ ಸ್ವತ್ತಿನ ಹೆಸರು ತಿದ್ದುಪಡಿ, ಅಳತೆಯಲ್ಲಿನ ವ್ಯತ್ಯಾಸ, ಜನನ, ಮರಣ ಪತ್ರದಲ್ಲಿ ದಿನಾಂಕ, ಹೆಸರು ತಿದ್ದುಪಡಿ, ನಲ್ಲಿ, ಮನೆ ಕಂದಾಯ, ಯುಜಿಡಿ ಸಂಪರ್ಕ ಸೇರಿದಂತೆ ಹಲವು ಸೇವೆಯನ್ನು ತ್ವರಿತವಾಗಿ ಜನರಿಗೆ ಒದಗಿಸುವ ಉದ್ದೇಶದಿಂದ ಪಾಲಿಕೆ ವತಿಯಿಂದ ತ್ವರಿತ ಸೇವೆ ಆಭಿಯಾನವನ್ನು ಪಾಲಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಆಯುಕ್ತ ಆಶ್ವಿಜ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಭಿಯಾನದ ಮೇಲುಸ್ತುವಾರಿ ವಹಿಸಿಕೊಂಡು ಸ್ಥಳದಲ್ಲಿಯೇ ಹಾಜರಿದ್ದು ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದ ಆಯುಕ್ತರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಹತ್ತಾರು ವರ್ಷಗಳಿಂದ ತಮ್ಮ ಆಸ್ತಿ, ಜನನ, ಮರಣ ಪತ್ರಗಳಲ್ಲಿ ಆಗಿರುವ ಸಣ್ಣ, ಪುಟ್ಟ ತಪ್ಪುಗಳಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತಿದ್ದಾರೆ. ಇಂತಹವರಿಗೆ ಅನುಕೂಲವಾಗಲೆಂದು ಈ ಅಭಿಯಾನ ಆಯೋಜಿಸಲಾಗಿದೆ ಎಂದರು.

ಪಾಲಿಕೆಯ ಆವರಣದಲ್ಲಿ 6 ಕೌಂಟರ್‌ ತೆರೆದು, ಜನನ, ಮರಣ, ಅಳತೆಯಲ್ಲಿನ ವ್ಯತ್ಯಾಸ, ಮತದಾರರ ನೊಂದಣಿ, ನಲ್ಲಿ ಮತ್ತು ಯುಜಿಡಿ ಸಮಪರ್ಕ, ಟ್ರೇಡ್‌ ಲೈಸನ್ಸ್‌ ಗೆ ಸಂಬಂಧಿಸಿದಂತೆ ದಾಖಲೆಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಹಿರಿಯ ನಾಗರಿಕರಿಗೆ ಪ್ರತ್ಯೇಕ ಲೈನ್ ಮಾಡಿ, ತ್ವರಿತ ಕೆಲಸ ಪೂರೈಸಿ ಕೊಡಲಾಗುತ್ತಿದೆ. ಮರು ಪರಿಶೀಲನೆ ಇರುವ ಕೆಲಸ ನಿಗಧಿತ ಅವಧಿಯೊಳಗೆ ಪೂರೈಸಲು ಎಲ್ಲ ಕ್ರಮ ಪಾಲಿಕೆಯಿಂದ ತೆಗೆದು ಕೊಳ್ಳಲಾಗುವುದು.

ಪ್ರತಿತಿಂಗಳ 2 ಮತ್ತು 4 ನೇ ಶುಕ್ರವಾರ ನಡೆಸುವಂತೆ ಸಾರ್ವಜನಿಕರು ಮನವಿ ಮಾಡಿದ್ದು,ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ, ಆಯುಕ್ತರು ಮತ್ತು ಅಧಿಕಾರಿಗಳ ಜೊತೆ ನಡೆಸಿದ ಚರ್ಚೆಯಂತೆ ಪಾಲಿಕೆಯಲ್ಲಿ ತ್ವರಿತ ಸೇವೆ ಆಭಿಯಾನ ಆಯೋಜಿಸಲಾಗಿದೆ. ಬೆಳಗ್ಗೆಯಿಂದ ನೂರಾರು ಜನರು ಕ್ಯೂನಲ್ಲಿ ನಿಂತು ತಮ್ಮ ದಾಖಲಾತಿ ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಾರೆ.

ಯಾವ ವಿಚಾರದ ಬಗ್ಗೆ ಹೆಚ್ಚಿನ ಅರ್ಜಿಗಳು ಬರುತ್ತಿವೆ ಎಂಬುದನ್ನು ಮನಗಂಡು ಮುಂದಿನ ದಿನಗಳಲ್ಲಿ ಐದು ವಾರ್ಡುಗಳಿಗೆ ಒಂದು ದಿನ ಇಂತಹ ಅದಾಲತ್‌ಗಳನ್ನು ಆಯೋಜಿಸಲು ಚಿಂತನೆ ನಡೆಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.

ಈ ವೇಳೆ ಪಾಲಿಕೆಯ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆಯ ಸದಸ್ಯರುಗಳು ಉಪಸ್ಥಿತರಿದ್ದರು.