ಕದ್ದ ಚಿನ್ನ ಪಡೆದ ಆಟ್ಟಿಕಾ ಕಂಪನಿ ವ್ಯವಸ್ಥಾಪಕನ ಸೆರೆ
ಕದ್ದ ಚಿನ್ನವನ್ನು ಕೊಂಡ ಹಿನ್ನೆಲೆಯಲ್ಲಿ ಅಟ್ಟಿಕಾ ಕಂಪನಿ ವ್ಯವಸ್ಥಾಪಕರನ್ನು ಬಂಧಿಸಲಾಗಿದೆ. ಜೊತೆಗೆ ಕಳ್ಳನನ್ನು ಬಂಧಿಸಲಾಗಿದೆ.
ಬೆಂಗಳೂರು [ಆ.22] : ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚುತ್ತಿದ್ದ ವೃತ್ತಿಪರ ಕಳ್ಳನೊಬ್ಬನನ್ನು ಬಂಧಿಸಿದ ಬಾಗಲಗುಂಟೆ ಠಾಣೆ ಪೊಲೀಸರು, ಆತನಿಂದ ಒಂದು ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ.
ನಾಗಸಂದ್ರದ ಚನ್ನನಾಯಕನ ಪಾಳ್ಯದ ಎಚ್.ಡಿ.ಯೋಗೀಶ್ ಅಲಿಯಾಸ್ ಮೈಲಾರಿ ಬಂಧಿನಾಗಿದ್ದು, ಆತನಿಂದ 1.13 ಕೆ.ಜಿ. ಚಿನ್ನಾಭರಣ, 250 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಎರಡು ಬೈಕ್ಗಳು ಸೇರಿದಂತೆ 39 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇನ್ನು ಕಳ್ಳತನ ಮಾಲು ಸ್ವೀಕರಿಸಿದ ಆರೋಪದ ಮೇರೆಗೆ ಬೊಮ್ಮನಹಳ್ಳಿಯ ಅಟ್ಟಿಕಾ ಗೋಲ್ಡ್ ಕಂಪನಿಯ ವ್ಯವಸ್ಥಾಪಕ ಧನದೇವೇಂದ್ರ ಬಾಬು ಅಲಿಯಾಸ್ ದೇವರಾಜನನ್ನು ಸಹ ಬಂಧಿಸಲಾಗಿದೆ.
ಕೆಲ ದಿನಗಳ ಹಿಂದೆ ಮಹೇಶ್ವರಿ ನಗರದ ಆದಿ ನಾರಾಯಣ ಅವರು, ಮನೆಗೆ ಬೀಗ ಹಾಕಿಕೊಂಡು ಹೂವಿನ ಹಡಗಲಿ ತಾಲೂಕಿನ ಶ್ರೀ ಮೈಲಾರ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಹೋಗಿದ್ದಾಗ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕೆ ಮೇರೆಗೆ ಯೋಗೀಶ್ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಕೃತ್ಯಗಳು ಬಯಲಾಗಿವೆ. ಕದ್ದ ವಸ್ತುಗಳನ್ನು ಅಟ್ಟಿಕಾ ಗೋಲ್ಡ್ ಕಂಪನಿಗೆ ಮಾರಾಟ ಮಾಡಿ ಆತ ಹಣ ಸಂಪಾದಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.