ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕೈಯಲ್ಲಿ ಶೌಚಾಲಯ ಸ್ವಚ್ಛತೆ ಮಾಡಿಸಿದ್ದರಿಂದ ಉಸಿರುಗಟ್ಟಿ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ನಡೆದಿದೆ. 

ಮಾಗಡಿ (ಅ.07): ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕೈಯಲ್ಲಿ ಶೌಚಾಲಯ ಸ್ವಚ್ಛತೆ ಮಾಡಿಸಿದ್ದರಿಂದ ಉಸಿರುಗಟ್ಟಿ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ನಡೆದಿದೆ. ತಾಲೂಕಿನ ತೂಬಿನಕೆರೆಯ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ಹೇಮಲತಾ ಎಂಬ ವಿದ್ಯಾರ್ಥಿನಿ ಕೈಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸಿದ್ದಲಿಂಗಯ್ಯ, ಸಹಶಿಕ್ಷಕ ಬಸವರಾಜು ಬ್ಲಿಚಿಂಗ್ ಪೌಡರ್ ಹಾಗೂ ಆಸಿಡ್ ಅನ್ನು ಕೊಟ್ಟು ಸ್ವಚ್ಛತೆ ಮಾಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಶಾಲೆಯಿಂದ ಮನೆಗೆ ತೆರಳಿದ ಹೇಮಲತಾಗೆ ಉಸಿರಾಡಲು ಸಮಸ್ಯೆಯಾಗಿದ್ದು, ಪೋಷಕರು ಕೇಳಿದಾಗ ಶಾಲೆಯಲ್ಲಿ ನಡೆದ ಘಟನೆ ತಿಳಿಸಿದ್ದಾರೆ. ತಕ್ಷಣವೇ ವಿದ್ಯಾರ್ಥಿನಿಯನ್ನು ಮಾಗಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೋಷಕರ ಆಕ್ರೋಶ: ನಾವು ಮಕ್ಕಳ ಕೈಯಲ್ಲಿ ಮನೆಯಲ್ಲೇ ಕೆಲಸ ಮಾಡಿಸುವುದಿಲ್ಲ ಅಂತದ್ದು, ಶಾಲೆಯಲ್ಲಿ ಶಿಕ್ಷಕರೇ ಈ ರೀತಿ ಶೌಚಾಲಯ ಸ್ವಚ್ಛ ಮಾಡಿಸುವುದು ಸರಿಯೇ. ಅದರಲ್ಲೂ ಹಾನಿಕಾರಕ ಆ್ಯಸಿಡ್ ಹಾಗೂ ಬ್ಲೀಚಿಂಗ್ ಪೌಡರ್ ಕೊಟ್ಟಿದ್ದಾರೆ. ಇದರಿಂದ ಅವಳ ಪ್ರಾಣಕ್ಕೇ ಅಪಾಯಕಾರಿಯಾಗಿದೆ.

ಕಾಂಗ್ರೆಸ್‌ ಗ್ಯಾರಂಟಿಯಿಂದ ಯಾವುದೇ ಯೋಜನೆಗೆ ಹಣ ಇಲ್ಲ: ರಾಜೀವ್‌ ಚಂದ್ರಶೇಖರ್

ಇದುವರೆಗೂ ಯಾವ ಶಿಕ್ಷಕರು ಕೂಡ ಆಸ್ಪತ್ರೆಗೆ ಬಂದು ನೋಡಿಲ್ಲ. ಶಿಕ್ಷಣ ಇಲಾಖೆ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಮಲತಾತಂದೆ ಚಿಕ್ಕಹನುಮಯ್ಯ ಆಗ್ರಹಿಸಿದ್ದಾರೆ. ತೂಬಿನಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು ಮಾತನಾಡಿ, ಪ್ರತಿದಿನ ಶಿಕ್ಷಕರು ವಿದ್ಯಾರ್ಥಿಗಳ ಕೈಯಲ್ಲೇ ಕಸ ಗುಡಿಸುವುದು, ಶೌಚಾಲಯ ಸ್ವಚ್ಛತೆ ಮಾಡಿಸುತ್ತಿದ್ದು, ಕೂಡಲೇ ಬಿಇಒ ಶಾಲೆಗೆ ಭೇಟಿ ನೀಡಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.