Asianet Suvarna News Asianet Suvarna News

ಗಣಿಗಾರಿಕೆ: 'ಅಡಿಪಾಯಕ್ಕೆ ಧಕ್ಕೆಯಾದ್ರೆ KRS ಕುಸಿದು ಬೀಳುವ ಅಪಾಯ'

* ಮೇಲ್ಭಾಗ ಭದ್ರವಾಗಿದ್ದರೆ ಸಾಲದು ಅಡಿಪಾಯದ ಸುರಕ್ಷತೆಯೂ ಮುಖ್ಯ
* ಶಿಲಾಪದರಗಳ ಬದಲಾವಣೆಯಿಂದ ಅಣೆಕಟ್ಟೆಗೆ ಅಪಾಯ
* ಅಡಿಪಾಯಕ್ಕೆ ಧಕ್ಕೆಯಾದರೆ ಅಣೆಕಟ್ಟು ಕುಸಿದುಬೀಳುವ ಅಪಾಯ 
 

Geological Experts Talks Over KRS Dam grg
Author
Bengaluru, First Published Jul 17, 2021, 7:46 AM IST

ಮಂಡ್ಯ ಮಂಜುನಾಥ

ಮಂಡ್ಯ(ಜು.17): ಕಾವೇರಿ ಕಣಿವೆ ಪ್ರದೇಶದ ರೈತರ ಕಣ್ಮಣಿ ಆಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಯ ಮೇಲ್ಭಾಗದಲ್ಲಿ ಮಾತ್ರ ಸುಸ್ಥಿತಿ ಕಾಯ್ದುಕೊಂಡರೆ ಸಾಲದು. ಅಡಿಪಾಯವನ್ನು ಅದಕ್ಕಿಂತಲೂ ಹೆಚ್ಚಿನ ರೀತಿ ಸುಭದ್ರವಾಗಿ ಕಾಪಾಡಿಕೊಳ್ಳಬೇಕು. ಅಡಿಪಾಯವೇ ಅಲುಗಾಡಿದರೆ ಏನೂ ಉಳಿಯಲ್ಲ. ಈ ವೈಜ್ಞಾನಿಕ ಸತ್ಯವನ್ನು ಎಲ್ಲರೂ ಅರಿಯಬೇಕಿದೆ. ಗಣಿಗಾರಿಕೆಗಾಗಿ ನಡೆಸುವ ಸ್ಫೋಟಕಗಳು ಭೂಮಿಯೊಳಗಿನ ಪದರಗಳಲ್ಲಿ ಕಂಪನ ಸೃಷ್ಟಿಸುತ್ತಿರುವುದರಿಂದ ಅಣೆಕಟ್ಟೆಯ ಅಡಿಪಾಯಕ್ಕೇ ಅಪಾಯ ತಂದೊಡ್ಡುವ ಆತಂಕವಿದೆ.

ಕೆಆರ್‌ಎಸ್‌ ಸುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಯ ಅಡಿಪಾಯಕ್ಕೆ ಅಪಾಯ ಎದುರಾಗಿರುವುದು ವಾಸ್ತವ ಸತ್ಯ. ಈ ಸಮಯದಲ್ಲಿ ವೈಜ್ಞಾನಿಕವಾಗಿ ಅಣೆಕಟ್ಟನ್ನು ಸಂರಕ್ಷಣೆ ಮಾಡುವುದು ಅಗತ್ಯ ಮತ್ತು ಅನಿವಾರ್ಯ. 80 ವರ್ಷಗಳಿಂದ ಅಣೆಕಟ್ಟೆಯ ಮೇಲ್ಭಾಗವನ್ನು ಕಾಲದಿಂದ ಕಾಲಕ್ಕೆ ಪುನಶ್ಚೇತನಗೊಳಿಸುತ್ತಾ ಬರಲಾಗುತ್ತಿದೆ. ಇದರಿಂದ ಅಣೆಕಟ್ಟೆಯ ಆಯಸ್ಸನ್ನು ಇನ್ನೂ ನೂರು ವರ್ಷ ಹೆಚ್ಚಿಸಲು ಸಾಧ್ಯವಿದೆ. ಆದರೆ, ಅಡಿಪಾಯಕ್ಕೆ ಗಂಡಾಂತರ ಎದುರಾದರೆ ಮೇಲ್ಭಾಗ ಎಷ್ಟು ಸುಭದ್ರ ಸ್ಥಿತಿಯಲ್ಲಿದ್ದು ಪ್ರಯೋಜನವೇನು ಎನ್ನುವುದು ಭೂಗರ್ಭ ತಜ್ಞರ ಮಾತು.

ಅಣೆಕಟ್ಟೆಯ ಮೇಲ್ಭಾಗವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬಲವರ್ಧನೆಗೊಳಿಸಲಾಗಿದೆ. ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಲ್ಲಿ ಸಿಡಿಯುತ್ತಿರುವ ಸ್ಫೋಟಕಗಳು ಭೂಮಿಯೊಳಗಿನ ಪದರಗಳಲ್ಲಿ ಕಂಪನ ಸೃಷ್ಟಿಸುತ್ತಿರುವುದರಿಂದ ಅಣೆಕಟ್ಟೆಯ ಅಡಿಪಾಯಕ್ಕೇ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಶಿಲಾಪದರಗಳಲ್ಲಿ ಆಗಬಹುದಾದ ವ್ಯತ್ಯಾಸಗಳು ಅಣೆಕಟ್ಟೆಯ ಭದ್ರತೆಗೆ ಆಪತ್ತು ಸೃಷ್ಟಿಸಬಹುದು. ಇದರಿಂದ ಮೇಲ್ಭಾಗ ಎಷ್ಟೇ ಸುಭದ್ರ ಸ್ಥಿತಿಯಲ್ಲಿದ್ದರೂ ಅಡಿಪಾಯಕ್ಕೆ ಧಕ್ಕೆಯಾದರೆ ಅಣೆಕಟ್ಟು ಕುಸಿದುಬೀಳುವ ಅಪಾಯವಿದೆ. ಹೀಗಾಗಿ ಅಣೆಕಟ್ಟಿನಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ.

ಗಣಿಗಾರಿಕೆಗೆ ಕೆಆರ್‌ಎಸ್‌ ಬಳಿಯೇ ಸ್ಫೋಟಕ ಸಾಗಣೆ..!

ಬಿರುಕು ತಡೆಗೆ ಸುರ್ಕಿಗಾರೆ: 

ಕೆಆರ್‌ಎಸ್‌ ಅಣೆಕಟ್ಟೆಯನ್ನು ಸಣ್ಣ ಸಣ್ಣ ಮುರುಡು ಕಲ್ಲುಗಳಿಗೆ ಸುರ್ಕಿಗಾರೆ ಸೇರಿಸಿ ಕಟ್ಟಲಾಗಿದೆ. ಅಣೆಕಟ್ಟೆ ಪ್ರದೇಶದ ಏರಿಯ ಹಿಂಭಾಗ ಮತ್ತು ಮುಂಭಾಗದ ಮೇಲ್ಮೈಗೆ ಒರಟಾಗಿ ಕೆತ್ತಿದ ದೊಡ್ಡ ದೊಡ್ಡ ಕಲ್ಲುಗಳನ್ನು ಅವಶ್ಯವಾದ ಗಾತ್ರ ಬರುವ ಪ್ರಮಾಣದಲ್ಲಿ ಸಮ ಪ್ರಮಾಣವಾಗಿ ಜೋಡಿಸಿ ಕಲ್ಲು ಕಲ್ಲಿಗೂ ಮಧ್ಯದಲ್ಲಿ ಸುರ್ಕಿಗಾರೆಯನ್ನು ಲೇಪಿಸಲಾಗಿದೆ. ಏರಿಯುದ್ದಕ್ಕೂ ಹಿಂಭಾಗ ಮತ್ತು ಮುಂಭಾಗಗಳ ಮಧ್ಯದಲ್ಲಿ ಸುರ್ಕಿ ಗಾರೆಯನ್ನು ನಾನಾ ಪ್ರಮಾಣದಲ್ಲಿ ಮುರುಡುಕಲ್ಲುಗಳನ್ನು ತುಂಬಿ ಭರ್ತಿ ಮಾಡಲಾಗಿದೆ. ಗಟ್ಟಿ ಜಾತಿಯ ಗ್ರಾನೈಟ್‌ ಕಟ್ಟಡ ಕಲ್ಲುಗಳನ್ನು ಅಣೆಕಟ್ಟೆ ನಿರ್ಮಾಣಕ್ಕೆ ಉಪಯೋಗಿಸಲಾಗಿದೆ. ಈ ಸುರ್ಕಿಗಾರೆಯು ಸಿಮೆಂಟ್‌ ಗಾರೆಗಿಂತಲೂ ಉತ್ಕೃಷ್ಟವಾದ ಗುಣ ಹೊಂದಿದೆ. ಅದು ಬಿರಿಗೊಂಡು ಗಟ್ಟಿಯಾಗುವಾಗ ಉಷ್ಣಾಂಶವು ಅಲ್ಪಸ್ವಲ್ಪವಾಗಿ ಏರುವ ಕಾರಣ ಅದನ್ನು ಉಪಯೋಗಿಸಿದ ಕಟ್ಟಡಗಳು ಮತ್ತು ಏರಿಗಳು ಬಿರುಕುಬಿಡದಂತೆ ಸುರ್ಕಿ ಗಾರೆಯನ್ನು ಉಪಯೋಗಿಸಲಾಗಿದೆ.

ಸುರ್ಕಿಗಾರೆ ಎಂದರೇನು?

ಒಂದು ಭಾಗ ಸುಣ್ಣದ ಪುಡಿಗೆ ನಾಲ್ಕು ಭಾಗ ಇಟ್ಟಿಗೆ ಪುಡಿಯನ್ನು ಸೇರಿಸಿ ನಯವಾಗಿ ಮತ್ತು ಮಂದವಾಗಿ ಅರೆದು ತಯಾರು ಮಾಡುವ ಪ್ರಕ್ರಿಯೆಗೆ ಸುರ್ಕಿಗಾರೆ ಎನ್ನುವರು. ಅಣೆಕಟ್ಟು ಪ್ರದೇಶದಲ್ಲಿ ದೊರೆತ ಸುಣ್ಣ ಕಲ್ಲನ್ನು ಸುಟ್ಟು ತಯಾರಿಸಿದ ಸುಣ್ಣವನ್ನು ಮತ್ತು ಸ್ಥಳದಲ್ಲೇ ದೊರೆತ ಜೇಡಿಮಣ್ಣಿನಿಂದ ತಯಾರಿಸಿದ ಇಟ್ಟಿಗೆ ಪುಡಿಯನ್ನು ಬಳಸಿಕೊಂಡು ಈ ವಿಶೇಷ ವಿಧದ ಗಾರೆಯನ್ನು 1889ರಲ್ಲಿ ಮೈಸೂರು ಸಂಸ್ಥಾನದ ಇಂಜಿನಿಯರ್‌ಗಳು ಮೊದಲು ತಯಾರಿಸಿದರು. ಅದನ್ನು ಮಾರಿಕಣಿವೆ ಬಳಿಯ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಶ್ರೀ ವಾಣಿವಿಲಾಸ ಸಾಗರ ಅಣೆಕಟ್ಟೆಯ ಏರಿ ಕಟ್ಟುವುದಕ್ಕೂ ಉಪಯೋಗಿಸಲಾಯಿತು. ಆ ನಂತರ ಈ ಗಾರೆಯನ್ನು ಇನ್ನು ಹಸನು ರೀತಿಯಲ್ಲಿ ತಯಾರಿಸಿಕೊಳ್ಳುವುದನ್ನು ಕೆಆರ್‌ಎಸ್‌ ಅಣೆಕಟ್ಟೆಯ ಕಾಮಗಾರಿ ಸಂಬಂಧ ಕಂಡುಹಿಡಿದು ಪ್ರಯೋಜನ ಹೊಂದಲಾಯಿತು. ಈ ವಿಶೇಷ ವಿಧದ ಸುರ್ಕಿಗಾರೆಯನ್ನು ನಾನಾ ಅಣೆಕಟ್ಟುಗಳನ್ನು ಕಟ್ಟುವುದಕ್ಕೆ ಬಳಸಲಾಯಿತು.
 

Follow Us:
Download App:
  • android
  • ios