Asianet Suvarna News Asianet Suvarna News

Uttara Kannada: ಕುಮಟಾ ಬಳಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ: ಹೆಚ್ಚಿದ ಆತಂಕ

*  ಅಪಘಾತದಲ್ಲಿ ವಿದ್ಯುತ್‌ ಕಂಬಗಳು ಧರೆಗೆ, ಗುಡಿಸಲಿಗೆ ಹಾನಿ
*  ಅಕ್ಕಪಕ್ಕದ ಮನೆಗಳಿಂದ ಜನರ ತೆರವು
*  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ದಿನಕರ ಶೆಟ್ಟಿ
 

Gas Tanker Overturn Near Kumta in Uttara Kannada grg
Author
Bengaluru, First Published Jan 26, 2022, 4:10 AM IST

ಕುಮಟಾ(ಜ.26):  ಪಟ್ಟಣದ ಹೊನ್ಮಾಂವ್‌ ಕ್ರಾಸ್‌ ಬಳಿ ಮಂಗಳವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್‌ ಟ್ಯಾಂಕರ್‌(Gas Tanker) ಪಲ್ಟಿಯಾಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಹಿಂದುಸ್ತಾನ್‌ ಪೆಟ್ರೋಲಿಯಂ(Hindustan Petroleum)  ಕಂಪನಿಗೆ ಒಳಪಟ್ಟ ಗ್ಯಾಸ್‌ ಟ್ಯಾಂಕರ್‌ (ಕೆಎ 01, ಎಎ 0205) ಹೊನ್ಮಾಂವ್‌ ಬಳಿ ರಾ.ಹೆ. 66ರ ಏರು ತಿರುವಿನಲ್ಲಿ ಸಾಗುವಾಗ ಘಟನೆ ನಡೆದಿದೆ. ಟ್ಯಾಂಕರ್‌ ಕ್ಯಾಪ್ಸೂಲ್‌ (ಹಿಂಭಾಗ) ರಸ್ತೆಯ ತೀರಾ ಅಂಚಿಗೆ ಹೋಗಿ ಪಲ್ಟಿಯಾಗಿದ್ದರಿಂದ ರಸ್ತೆಯಂಚಿನ ವಿದ್ಯುತ್‌ ಕಂಬಗಳು ಧರಾಶಾಯಿಯಾಗಿದ್ದು ಗುಡಿಸಲೊಂದು ಹಾನಿಗೀಡಾಗಿದೆ.

ಘಟನೆಯಲ್ಲಿ ಅದೃಷ್ಟವಶಾತ್‌ ಯಾರಿಗೂ ಪೆಟ್ಟಾಗಿಲ್ಲ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ( Fire Deapartment) ಹಾಗೂ ಪೊಲೀಸರು(Police) ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಆಸುಪಾಸಿನ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಾಲೂಕಾಡಳಿತಕ್ಕೆ ಸೂಚಿಸಿದ್ದಾರೆ.

Accident ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಹಿರಿಯ ಪತ್ರಕರ್ತ ಸಾವು

ಆಸುಪಾಸಿನ ಮನೆಗಳನ್ನು ತೆರವುಗೊಳಿಸಲಾಗಿದ್ದು ಹೊನ್ಮಾಂವ್‌, ಪೈರಗದ್ದೆ, ನಾಗದೇವಿ ರಸ್ತೆ, ಗುಜರಗಲ್ಲಿ, ದೇವರಹಕ್ಕಲ, ಎಪಿಎಂಸಿ ಇನ್ನಿತರ ಪ್ರದೇಶಗಳ ಜನರಿಗೆ ಕೊಂಕಣ ಎಜ್ಯುಕೇಶನ್‌ ಟ್ರಸ್ಟಿನ ಶಾಲೆಗಳಲ್ಲಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊಂಕಣ ಟ್ರಸ್ಟಿನ ಶಿಕ್ಷಣ ಸಂಸ್ಥೆಯೂ ಸೇರಿ ಸುತ್ತಮುತ್ತಲ ಹಲವು ಶಾಲೆಗಳಿಂದ(Schools) ಮಕ್ಕಳನ್ನು(Children) ಮನೆಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಮಸ್ಯೆ ಸೃಷ್ಟಿಯಾಗಿದ್ದರಿಂದ ಹೊನ್ನಾವರ ಹಾಗೂ ಕುಮಟಾ ನಡುವೆ ಚಂದಾವರದ ಮೂಲಕ ಬದಲಿ ಮಾರ್ಗಗಳನ್ನು ನಿಗದಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ರಾಜ್ಯ ಸಾರಿಗೆ ಬಸ್‌ ಹಾಗೂ ಇತರ ತುರ್ತು ಅಗತ್ಯದ ವಾಹನಗಳನ್ನು ಅಳ್ವೆಕೋಡಿ ಕ್ರಾಸ್‌ ಮೂಲಕ ಪಟ್ಟಣದ ಒಳರಸ್ತೆಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟರು. ಇದರಿಂದ ಬಸ್ತಿಪೇಟೆ, ಕೋರ್ಟ್‌ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್‌ಜಾಮ್‌ ಸೃಷ್ಟಿಯಾದರೂ ಬಳಿಕ ಸಂಚಾರ ಸುಗಮಗೊಂಡಿತು. ಘಟನಾ ಸ್ಥಳಕ್ಕೆ ಮಂಗಳೂರಿನಿಂದ ತಜ್ಞರ ತಂಡ ಆಗಮಿಸಿದ್ದು ಟ್ಯಾಂಕರ್‌ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ನಮ್ಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿಘಟನೆಗಳು ಪದೇ ಪದೇ ನಡೆಯುತ್ತಿರುವುದಕ್ಕೆ ಚತುಷ್ಪಥದ ಅವೈಜ್ಞಾನಿಕ ಕಾಮಗಾರಿ ನಿರ್ವಹಣೆಯೇ ಕಾರಣ. ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ಎರಡು ವರ್ಷದಿಂದ ಟೋಲ್‌ ವಸೂಲಿ ಮಾಡುತ್ತಿದೆ. ಆದರೆ ಇನ್ನೂ ಕೆಲಸ ಮುಗಿಸದೇ ಅರೆಬರೆ ಮಾಡಿ, ಮಾರ್ಗದುದ್ದಕ್ಕೂ ಅಲ್ಲಲ್ಲಿ ವಾಹನ ಚಾಲಕರು ಗೊಂದಲದಿಂದ ಅಪಾಯವನ್ನು ಎದುರಿಸುವಂತೆ ಮಾಡುತ್ತಿದ್ದಾರೆ. ಇಷ್ಟೊಂದು ಅಪಘಾತಗಳು ನಡೆಯುತ್ತಿದ್ದರೂ ಶಾಸಕರು ಮತ್ತು ಜಿಲ್ಲಾಡಳಿತ ಐಆರ್‌ಬಿ ಕುರಿತು ಮೃದುಧೋರಣೆ ತಾಳಿರುವುದು ವಿಪರ್ಯಾಸ ಅಂತ ಜೆಡಿಎಸ್‌ ಮುಖಂಡ ಸೂರಜ ನಾಯ್ಕ ತಿಳಿಸಿದ್ದಾರೆ.  

Hubballi: ಕುಡುಕ ಚಾಲಕನ ಅವಾಂತರ, ಫ್ಲೈಓವರ್‌ನಿಂದ ಕೆಳಗೆ ಬಿದ್ದ ಆ್ಯಂಬುಲೆನ್ಸ್‌..!

ಹದಗೆಟ್ಟ ರಸ್ತೆ: ವಾಹನ ಸಂಚಾರಕ್ಕೆ ತೊಂದರೆ

ಕುಷ್ಟಗಿ: ತಾಲೂಕು ಕೇಂದ್ರದಿಂದ ಹನುಮಸಾಗರಕ್ಕೆ ಹೋಗುವ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ತಾಲೂಕು ಕೇಂದ್ರದಿಂದ ನಿಡಶೇಸಿ ಗ್ರಾಮದ ವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತೆ ಆಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಕಂಡು ಕಾಣದಂತಿದ್ದಾರೆ. ಮುಂಬರುವ ದಿನಗಳಲ್ಲಿ ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗಜೇಂದ್ರಗಡಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿಯೂ ರಸ್ತೆ ಹಾಳಾಗಿದ್ದು ಇದರ ದುರಸ್ತಿಗೆ ಮುಂದಾಗಬೇಕು. ಒಟ್ಟಿನಲ್ಲಿ ತಾಲೂಕಿನ ಕೆಲ ಪ್ರಮುಖ ರಸ್ತೆಗಳು ಅಲ್ಲಲ್ಲಿ ಹದಗೆಟ್ಟಿದ್ದು, ಅವುಗಳ ದುರಸ್ತಿಗೆ ಸಂಬಂಧಿಸಿದ ಇಲಾಖೆ ಶೀಘ್ರ ಕ್ರಮಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
 

Follow Us:
Download App:
  • android
  • ios