ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಉತ್ಖನನ ಸ್ಥಳಕ್ಕೆ ಸಂಸದ ಪಿ.ಸಿ. ಗದ್ದಿಗೌಡರ್ ಭೇಟಿ ನೀಡಿ ಪರಿಶೀಲಿಸಿದರು. ನಿಧಿ ಒಪ್ಪಿಸಿದ ಗಿರಿಜವ್ವ ಕುಟುಂಬಕ್ಕೆ ಸಾಂತ್ವನ ಹೇಳಿ, ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದರು. ಅಲ್ಲದೆ, ಜಾತ್ರೆ ನಡೆಸುವ ಕುರಿತು ಗ್ರಾಮಸ್ಥರ ಮನವಿಗೆ ಸ್ಪಂದಿಸಿದರು.
ಗದಗ (ಫೆ.05): ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ಇಡೀ ರಾಜ್ಯದ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ. ಗದ್ದಿಗೌಡರ್ ಅವರು ಗುರುವಾರ ಉತ್ಖನನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕಿದ್ದ ಬಂಗಾರದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ಕುಟುಂಬವನ್ನು ಭೇಟಿ ಮಾಡಿ 'ನೀವು ನಿಧಿ ನೀಡಿದ್ದೀರಿ, ಮರುಗಬೇಡಿ ಎಂಬ ಭಾವನಾತ್ಮಕ ಬೆಂಬಲ' ನೀಡಿದ್ದಾರೆ.
18ನೇ ದಿನದ ಉತ್ಖನನ ವೀಕ್ಷಣೆ
ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ನಂತರ ಇದೇ ಮೊದಲ ಬಾರಿಗೆ ಸಂಸದರು ಭೇಟಿ ನೀಡಿದ್ದು ವಿಶೇಷವಾಗಿತ್ತು. 18ನೇ ದಿನದ ಉತ್ಖನನ ಕಾರ್ಯ ಪ್ರಗತಿಯಲ್ಲಿದ್ದ ಸಂದರ್ಭದಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಜಾಗಕ್ಕೆ ಭೇಟಿ ನೀಡಿದ ಅವರು, ಪುರಾತತ್ವ ಇಲಾಖೆಯು ನಡೆಸುತ್ತಿರುವ ಸಂಶೋಧನಾ ಕಾರ್ಯವನ್ನು ಹತ್ತಿರದಿಂದ ವೀಕ್ಷಿಸಿದರು. ಈ ಸಂದರ್ಭದಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶರಣು ಗೋಗೇರಿ ಅವರು ಸಂಸದರಿಗೆ ಉತ್ಖನನದ ಪ್ರಗತಿ ಮತ್ತು ಪತ್ತೆಯಾದ ಪುರಾತನ ಕುರುಹುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಗಿರಿಜವ್ವ ಕುಟುಂಬಕ್ಕೆ ಸಾಂತ್ವನ ಮತ್ತು ಶ್ಲಾಘನೆ
ಉತ್ಖನನದ ವೇಳೆ ತಮಗೆ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಗಿರಿಜವ್ವ ಅವರ ಕುಟುಂಬವನ್ನು ಸಂಸದರು ಭೇಟಿ ಮಾಡಿದರು. ಈ ವೇಳೆ ಗಿರಿಜವ್ವ ಅವರೊಂದಿಗೆ ಮಾತನಾಡಿದ ಸಂಸದರು, 'ನಿಧಿ ಕೊಟ್ಟಿದ್ದಕ್ಕೆ ನೀವು ಮರುಗಬೇಡಿ, ನಿಮ್ಮ ಈ ಪ್ರಾಮಾಣಿಕ ನಿರ್ಧಾರದಿಂದ ನಿಮ್ಮ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಇಂದಿನ ಕಾಲದಲ್ಲೂ ನಿಮ್ಮಂತಹ ಪ್ರಾಮಾಣಿಕರು ಇದ್ದಾರೆ ಎಂಬುದು ಜನರಿಗೆ ತಿಳಿಯುವಂತಾಗಿದೆ' ಎಂದು ಶ್ಲಾಘಿಸಿದರು.
ಇದೇ ವೇಳೆ ಗಿರಿಜವ್ವ ಅವರು ತಮಗೆ ಸಿಕ್ಕ ನಿಧಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡುವಂತೆ ಬೇಡಿಕೆ ಇಟ್ಟರು. ಇದಕ್ಕೆ ಸ್ಪಂದಿಸಿದ ಸಂಸದರು, ಸರ್ಕಾರದಿಂದ ನಿಮಗೆ ಸಿಗಬೇಕಾದ ಎಲ್ಲ ಸಹಾಯ ಮತ್ತು ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಜಾತ್ರೆ ನಡೆಸಲು ಗ್ರಾಮಸ್ಥರ ಮನವಿ
ಮಾರ್ಚ್ 30 ಮತ್ತು 31 ರಂದು ಲಕ್ಕುಂಡಿಯ ಪ್ರಸಿದ್ಧ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆ ನಡೆಯಬೇಕಿದೆ. ಆದರೆ ದೇವಸ್ಥಾನದ ಅಂಗಳದಲ್ಲೇ ಉತ್ಖನನ ನಡೆಯುತ್ತಿರುವುದರಿಂದ ಜಾತ್ರೆಗೆ ಅಡ್ಡಿಯಾಗುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಸದ ಗದ್ದಿಗೌಡರ್ ಅವರಿಗೆ ಮನವಿ ಸಲ್ಲಿಸಿ, 'ಆದಷ್ಟು ಬೇಗ ಉತ್ಖನನ ಪ್ರಕ್ರಿಯೆಯನ್ನು ಮುಗಿಸಿಕೊಡಿ ಅಥವಾ ಜಾತ್ರೆ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ' ಎಂದು ವಿನಂತಿಸಿದರು. ಗ್ರಾಮಸ್ಥರ ಮನವಿಯನ್ನು ಆಲಿಸಿದ ಸಂಸದರು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಲಕ್ಕುಂಡಿ ಗ್ರಾಮವು ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ, ಈ ಐತಿಹಾಸಿಕ ತಾಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಸಂಸದರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.


