* ಕೋವಿಡ್‌ನಿಂದ ವ್ಯಕ್ತಿ ಸಾವು* ವೀರಶೈವ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ* ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದ ಘಟನೆ

ಬ್ಯಾಡಗಿ(ಮೇ.10): ಕೊರೋನಾದಿಂದ ಸಾವಿಗೀಡಾದ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲು ಹಿಂಜರಿದಿದ್ದ ಕುಟುಂಬದ ಸದಸ್ಯರ ಮನವೊಲಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಯು ಅಂಜುಮನ್‌ ಸಮಿತಿ ಸಹಕಾರದೊಂದಿಗೆ ಕೊನೆಗೆ ಅವರಿಂದಲೇ ಅಂತ್ಯಕ್ರಿಯೆ ನಡೆಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಪಟ್ಟಣದ ಸಂಗಮೇಶ್ವರ ನಗರ ನಿವಾಸಿಯೊಬ್ಬರು ಕೊರೋನಾ ಚಿಕಿತ್ಸೆ ಫಲಕಾರಿಯಾಗದೇ, ರಾಣಿಬೆನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ವ್ಯಕ್ತಿಯ ಮೃತದೇಹ ಮನೆಯ ಮುಂಭಾಗಕ್ಕೆ ಆ್ಯಂಬುಲೆನ್ಸ್‌ ಮೂಲಕ ಬಂದಿದೆ. ಆದರೆ ಕೊರೋನಾ ಸೋಂಕಿತ ಮೃತವ್ಯಕ್ತಿ ಅಂತ್ಯಸಂಸ್ಕಾರ ನಡೆಸಿದಲ್ಲಿ ವೈರಸ್‌ ನಮಗೂ ಹರಡುತ್ತದೆ ಎಂಬ ಭೀತಿಯಿಂದ ಅಂತ್ಯಸಂಸ್ಕಾರ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಟುಂಬದವರು ಹಿಂದೇಟು ಹಾಕಿದ್ದರೆನ್ನಲಾಗುತ್ತಿದೆ.

'ಜನತೆಯ ಗಮನ ಬೇರೆ ಕಡೆ ಸೆಳೆಯಲು ತೇಜಸ್ವಿ ಸೂರ್ಯ ಪ್ರಚೋದನಾತ್ಮಕ ಹೇಳಿಕೆ'

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಆರೋಗ್ಯ ಇಲಾಖೆಯ ಎಂ.ಎನ್‌. ಕಂಬಳಿ ಹಾಗೂ ಇತರರು ಕುಟುಂಬದವರ ಮನವೊಲಿಕೆಗೆ ಮುಂದಾದರು. ಅಲ್ಲದೇ ಮೃತದೇಹದ ಅಂತ್ಯಕ್ರಿಯೆಯು ನಡೆಸಲು ಪಟ್ಟಣದ ಅಂಜುಮನ್‌ ಕಮಿಟಿಯ ಸದಸ್ಯರ ಸಹಕಾರ ನೀಡಿದರು. ಮನೆಯ ಇನ್ನಿತರ ಸದಸ್ಯರು ಮತ್ತು ಅಂಜುಮನ್‌ ಸಮಿತಿ ತಲಾ ಮೂವರು ಸದಸ್ಯರು ಸೇರಿದಂತೆ ಒಟ್ಟು ಆರು ಜನರು ಸೇರಿ ಮೃತವ್ಯಕ್ತಿಯ ಪಟ್ಟಣದ ವೀರಶೈವ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona