'ಇವತ್ತು ನಾನೇ ಸಿಎಂ ಆಗಿದ್ದಿದ್ದರೆ ರೈತರಿಗೆ ಐದು ಸಾವಿರ ಕೋಟಿ ಪ್ಯಾಕೇಜ್ ಕೊಡುತ್ತಿದ್ದೆ'
60 ಸಾವಿರ ಬಡ ಕುಟುಂಬಗಳಿಗೆ ಜೆಡಿಎಸ್ ಪಕ್ಷದ ವತಿಯಿಂದ ಉಚಿತ ಆಹಾರ ಕಿಟ್| ರಾಮನಗರ, ಚನ್ನಪಟ್ಟಣದ ಕ್ಷೇತ್ರದ ನಗರ ಗ್ರಾಮಾಂತರ ಪ್ರದೇಶದಲ್ಲಿ ಹಂಚಿಕೆ ಸಿದ್ಧತೆ: ಮಾಜಿ ಸಿಎಂ ಕುಮಾರಸ್ವಾಮಿ| ರೈತನ ಕಾಪಾಡೋದು, ಜನರ ಕಾಪಾಡೋದು ಹೇಗೆ ಅಂತ ಇವರಿಂದ ಹೇಳಿಸಿಕೊಳ್ಳ ಬೇಕಿಲ್ಲ|
ರಾಮನಗರ(ಏ.23): ಲಾಕ್ಡೌನ್ ಹಿನ್ನೆಲೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣದ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ಪ್ರದೇಶದ 60 ಸಾವಿರ ಬಡ ಕುಟುಂಬಗಳಿಗೆ ಪಕ್ಷದ ವತಿಯಿಂದ ಉಚಿತವಾಗಿ ಆಹಾರ ಕಿಟ್ ನೀಡಲು ಉದ್ದೇಶಿಸಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಟ್ನಲ್ಲಿ 10ಕೆಜಿ ಅಕ್ಕಿ, 1 ಕೆಜಿ ಸಕ್ಕರೆ ಬೇಳೆ, 2 ಕೇಜಿ ಈರಳ್ಳಿ ಇರಲಿದ್ದು, ಪ್ರತಿ ಮನೆಗೆ ತಲುಪಲಿದೆ ಎಂದರು.
ತಬ್ಲಿಘಿಗಳಿಂದ ಕರ್ನಾಟಕದ ಮತ್ತೊಂದು ಜಿಲ್ಲೆಗೆ ತಗುಲಿದ ಕೊರೋನಾ ನಂಜು..!
ಮಣ್ಣಿನ ಮಕ್ಕಳು ಕೊಡುಗೆ ಅವರಿಂದ ನಾನು ಹೇಳಿಸಿಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ಮಣ್ಣಿನ ಮಕ್ಕಳ ಕೊಡುಗೆ ಬಗ್ಗೆ ನಾನು ಅವರಿಂದ ಹೇಳಿಸಿಕೊಳ್ಳ ಬೇಕಿಲ್ಲ ಅವರು ಏನು ಕೊಡುಗೆ ಕೊಟ್ಟಿದ್ದಾರೆ ಅನ್ನೋದು ನನಗೆ ಗೊತ್ತಿದೆ ಎಂದು ತಮ್ಮ ವಿರೋಧಿಗಳಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.
ಪಾಪ ನನ್ನ ಸ್ನೇಹಿತರು ಹೇಳಿದ್ದಾರೆ ಅವರು ಅವರ ನಾಯಕರು ಏನು ಕೊಟ್ಟಿದ್ದಾರೆ ಅಂತ. ಸಣ್ಣತನ ಬೇಡ ನಾನು ಯಾರನ್ನು ಟೀಕೆ ಮಾಡಲು ಹೋಗುವುದಿಲ್ಲ. ಯಾವುದೋ ಹೊಲಕ್ಕೆ ಹೋಗಿ ತರಕಾರಿ ಖರೀದಿ ಮಾಡ್ತಿದ್ದಾರೆ. ರೈತ ಬೀದಿಗೆ ಬಂದಿದ್ದ ಅಂತಾರೆ. ಒಂದು ಹೊಲದಲ್ಲಿ ನಿಂತು ಎಷ್ಟುಟನ್ ತರಕಾರಿ ಖರೀದಿ ಮಾಡಿದ್ದಾರೆ. ಹತ್ತು ಟನ್ ಟೊಮೋಟೊ ಖರೀದಿ ಮಾಡಿ ಜನಕ್ಕೆ ಕೊಡುತ್ತೇವೆ ಎನ್ನುವವರು ಹತ್ತು ಟನ್ಗೂ ಕೇಜಿಗೆ ಎರಡು ರುಪಾಯಿ ಅಂದರೂ 20 ಸಾವಿರ ಆಗುತ್ತದೆ. ಇಪ್ಪತ್ತು ಸಾವಿರ ಖರ್ಚು ಮಾಡಿ ಇಷ್ಟುದೊಡ್ಡ ಪ್ರಚಾರ ಪಡೆಯುತ್ತಾರೆ ಎಂದು ಟೀಕಿಸಿದರು.
ನಾನು ಐದು ಕೋಟಿ ರು. ಖರ್ಚು ಮಾಡಿ ಸಾಮಗ್ರಿ ಕೊಡುತ್ತಿದ್ದೇನೆ. 50 ಸಾವಿರಕ್ಕೆ ಕಲ್ಲಂಗಡಿ ಕೊಟ್ಟು ಇಷ್ಟು ಮಾತನಾಡುತ್ತಾರೆ. ನಾನು ಇವರಿಂದ ಕಲಿತು ಬದುಕುವ ಜೀವನ ನಮ್ಮದಲ್ಲ. ಮಣ್ಣಿನ ಮಕ್ಕಳ ಕೆಲಸ ಕಲಿಯಬೇಕಿಲ್ಲ. ಮಣ್ಣಿನ ಮಕ್ಕಳು ಅನ್ನೋದು ನಾವು ಹಾಕಿಕೊಂಡ ಬಿರುದಲ್ಲ. ನಾಡಿನ ಜನತೆ, ಅಭಿಮಾನಿಗಳು ಕೊಟ್ಟಿರೋದು ಎಂದು ಹೇಳಿದರು.
ಬಿಜೆಪಿ ಸೋಷಿಯಲ್ ಮೀಡಿಯಾದವರು ರಾಮನಗರದಲ್ಲಿ ನನ್ನ ಕುಟುಂಬದ ಮದುವೆ ಮಾಡಲು ಹೋದಾಗ ಟೀಕೆ ಮಾಡಿದ್ದರು. ರೆಡ್ ಝೋನ್ನಲ್ಲಿರುವ ಬೆಂಗಳೂರಿಗರನ್ನು ರಾಮನಗರಕ್ಕೆ ಕರೆತರುತ್ತಿದ್ದಾರೆ. ಇದರ ಬಗ್ಗೆ ಏಕೆ ಯಾರು ಪ್ರಶ್ನೆ ಮಾಡುತ್ತಿಲ್ಲ. ಸದ್ಯ ನಾನು ಟೀಕೆ ಮಾಡಬಾರದು ಅಂತ ಸುಮ್ಮನೆ ಇದ್ದೀನಿ. ಇವತ್ತು ನಾನೇ ಮುಖ್ಯಮಂತ್ರಿ ಆಗಿದ್ದಿದ್ದರೆ ರೈತರಿಗೆ ಐದು ಸಾವಿರ ಕೋಟಿ ಪ್ಯಾಕೇಜ್ ಕೊಡುತ್ತಿದ್ದೆ ಎಂದು ಹೇಳಿದರು.
ನಾನು 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದವನು. ರೈತನ ಕಾಪಾಡೋದು, ಜನರ ಕಾಪಾಡೋದು ಹೇಗೆ ಅಂತ ಇವರಿಂದ ಹೇಳಿಸಿಕೊಳ್ಳ ಬೇಕಿಲ್ಲ. ಇದು ಟೀಕೆ ಮಾಡುವ ಸಮಯ ಅಲ್ಲ. ಎಲ್ಲರು ಸೇರಿ ಜನರಿಗೆ ಸಹಾಯ ಮಾಡೋಣ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ವೇಳೆ ಜೆಡಿಎಸ್ ಮುಖಂಡರಾದ ರಾಜಶೇಖರ್, ಪ್ರಕಾಶ್, ಉಮೇಶ್ ಮತ್ತಿತರರು ಹಾಜರಿದ್ದರು.