ಬೆಂಕಿಯಿಂದ ಕಾಡನ್ನ ರಕ್ಷಿಸಲು ಅರಣ್ಯ ಇಲಾಖೆ ಹತ್ತಾರು ಕ್ರಮಕೈಗೊಂಡ್ರೂ ಬೆಂಕಿಯಿಂದ ಕಾಡನ್ನ ರಕ್ಷಿಸಲು ಆಗ್ತಿಲ್ಲ, ದೇಶ ಹಾಗೂ ರಾಜ್ಯದ ಹೆಮ್ಮೆ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ, ನೂರಾರು ಬೆಂಕಿಯ ಕೆನ್ನಾಲಿಗೆಗೆ ನೂರಾರು ಪ್ರಾಣಿ-ಪಕ್ಷಿಗಳು ಉಸಿರು ಚೆಲ್ಲಿವೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು(ಮಾ.10): ದೇಶದ ಪಶ್ಚಿಮ ಘಟ್ಟಗಳ ಪೈಕಿ ರಾಜ್ಯದ ಚಾರ್ಮಾಡಿ ಘಾಟ್‍ಗೆ ಅಗ್ರಸ್ಥಾನ. ಅತ್ಯಂತ ಸೂಕ್ಷ್ಮ ಅರಣ್ಯ ಪ್ರದೇಶ. ಪ್ರವಾಸಿಗರ ಹಾಟ್‍ಸ್ಪಾಟ್. ಆದ್ರೀಗ, ಈ ಪ್ರದೇಶಲ್ಲಿ ಬಿಸಿಲ ಧಗೆಗೆ ಬೆಂಕಿಯ ರುದ್ರನರ್ತನ ಆರಂಭವಾಗಿದೆ. ಕಳೆದೊಂದು ವಾರದಿಂದ ಪ್ರಕೃತಿ ಸೌಂದರ್ಯ ಸೇರಿದಂತೆ ವನ್ಯಜೀವಿ ತಾಣವೂ ಬೆಂಕಿಯ ಕೆನ್ನಾಲಿಗೆಯಿಂದ ಹೊತ್ತಿ ಉರಿಯುತ್ತಿದೆ. 

ಅತ್ಯಮೂಲ್ಯ ಸಸ್ಯ ಸಂಪತ್ತು ನಾಶ : 

ನೂರಾರೂ ವರ್ಷಗಳಿಂದ ಬೆಳೆದು ನಿಂತಿದ್ದ ಅತ್ಯಮೂಲ್ಯ ಸಸ್ಯ ಸಂಪತ್ತು ನಾಶವಾಗ್ತಿದೆ. ವಿಶ್ವದಾದ್ಯಂತ ಮತ್ತೆಲ್ಲೂ ಸಿಗದ ಅಪರೂಪದ ಔಷಧಿ ಸಸ್ಯ, ಬಿದಿರು, ಅಪರೂಪದ ಕಾಡು ಜಾತಿಯ ಮರಗಳು ಸುಟ್ಟು ಕರುಕಲಾಗುತ್ತಿವೆ. ಬೆಂಕಿಯ ಕೆನ್ನಾಲಿಗೆಗೆ ವನ್ಯಜೀವಿಗಳು ನಾಡಿನತ್ತ ಹೆಜ್ಜೆ ಹಾಕ್ತಿವೆ. ಬೆಟ್ಟ-ಗುಡ್ಡಗಳಲ್ಲಿ ಕಳೆದ ಮೂರು ದಿನಗಳಿಂದ ಅರಣ್ಯ ಪ್ರದೇಶ ನಿರಂತರವಾಗಿ ಹೊತ್ತಿ ಉರಿಯುತ್ತಿರುವುದರಿಂದ ನೂರು ಎಕರೆಗೂ ಅಧಿಕ ಅರಣ್ಯ ಪ್ರದೇಶ ನಾಶವಾಗಿದೆ. ಸಾವಿರಾರು ಪ್ರಾಣಿಪಕ್ಷಿಗಳು ಬೆಂಕಿಯಲ್ಲಿ ಬೆಂದು ಉಸಿರು ಚೆಲ್ಲಿವೆ ಎಂದು ಅಂದಾಜಿಸಲಾಗಿದೆ. ಬೆಟ್ಟ-ಗುಡ್ಡಗಳ ತುದಿಯಲ್ಲಿ ಬೆಂಕಿ ಉರಿಯುತ್ತಿದ್ದು ಅಲ್ಲಿಗೆ ಅಗ್ನಿಶಾಮಕ ವಾಹನ ಕೂಡ ಹೋಗಲಾಗದೆ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿದೆ. ಈ ಮಧ್ಯೆ, ಅರಣ್ಯ ಇಲಾಖೆಯ ಸೂಕ್ತ ಸಿಬ್ಬಂದಿಗಳ ಕೊರತೆ ಕೂಡ ಬೆಂಕಿ ಸೂಕ್ತ ಸಮಯದಲ್ಲಿ ಬೆಂಕಿಯನ್ನ ನಂಧಿಸಲು ಸಾಧ್ಯವಾಗ್ತಿಲ್ಲ ಎಂಬ ಮಾತುಗಳು ಇವೆ. 

ವಿವಾದಿತ ದತ್ತಪೀಠದಲ್ಲಿ ಜಿಲ್ಲಾಡಳಿತದಿಂದ ಉರುಸ್ ಆಚರಣೆಗೆ ಮುಸ್ಲಿಂ ಮುಖಂಡರ ವಿರೋಧ

ಕಾಳಿಂಗ ಸರ್ಪಗಳು ನಾಡಿನತ್ತ ಮುಖ : 

ಇಷ್ಟೆ ಅಲ್ಲದೆ, ಮೂಡಿಗೆರೆಯ ಚಾರ್ಮಾಡಿ ಘಾಟ್, ಚಿಕ್ಕಮಗಳೂರು ತಾಲೂಕಿನ ಚುರ್ಚೆಗುಡ್ಡ ಮೀಸಲು ಅರಣ್ಯ, ಮುಳ್ಳಯ್ಯನಗಿರಿ ಬೆಟ್ಟ, ಸಿಂದಿಗೆರೆ ಮೀಸಲು ಅರಣ್ಯ, ಎನ್.ಆರ್.ಪುರದ ಬಸವನಕೋಟೆ ಕಾಡು ಸೇರಿದಂತೆ ಜಿಲ್ಲೆಯಲ್ಲಿ ನೂರಾರು ಎಕರೆ ಅರಣ್ಯ ಬೆಂಕಿಗೆ ಬಲಿಯಾಗಿದೆ. ಅರಣ್ಯಕ್ಕೆ ಬೆಂಕಿ ಬೀಳುತ್ತಿದ್ದು ಭೂಮಿಯ ತಾಪ ಹೆಚ್ಚಾಗಿ ಪ್ರಾಣಿಪಕ್ಷಿಗಳು ನಾಡಿನತ್ತ ಮುಖ ಮಾಡಿವೆ. ಮರದಪೊಟರೆ, ಭೂಮಿಯೊಳಗೆ ವಾಸ ಮಾಡುವ ಕಾಳಿಂಗ ಸರ್ಪಗಳು ನಾಡಿನತ್ತ ಮುಖ ಮಾಡಿವೆ. ಚಾರ್ಮಾಡಿಗೆ ಅಂಟಿಕೊಂಡಂತಿರೋ ತುರುವೆ ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪ ಬದುಕುಳಿಯಲು ಹವಣಿಸುತ್ತಿದ್ದಾಗ ಸೆರೆಯಾಗಿದೆ. ಇನ್ನು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಅರಣ್ಯಕ್ಕೆ ಬೆಂಕಿ ಕೊಡುತ್ತಿದ್ದ ವ್ಯಕ್ತಿಯೂ ಬಂಧನವಾಗಿದ್ದಾನೆ. ಆದ್ರೆ, ಕಾಡ್ಗಿಚ್ಚು, ಬೆಂಕಿ ಹಚ್ಚುವ ಸ್ಥಳಿಯರ ಹುಚ್ಚನಿಂದ ಜಿಲ್ಲೆಯಲ್ಲಿ ಸಾವಿರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಮಲೆನಾಡಲ್ಲಿ ಭಾರೀ ಮಳೆ ಬಿದ್ದರು, ಈ ಬಾರಿ ಬಿಸಿಲ ಧಗೆಗೆ ಕಾಡು ಸುಟ್ಟು ಕರಕಲಾಗ್ತಿದೆ. ಒಟ್ಟಾರೆ, ಪ್ರತಿ ವರ್ಷವೂ ನಮ್ಮ ಅಪರೂದ ವನ್ಯ ಜೀವಿತಾಣ ಬೆಂಕಿಯ ನರ್ತನದಿಂದ ವಿನಾಶಕ್ಕೆ ಕಾರಣವಾಗ್ತಿದೆ. ಆದ್ರೆ, ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

ಒಂದೆಡೆ ಒಂದು ಕಡೆ ಕಾಡು ಬೆಳೆಸಿ ನಾಡು ಉಳಿಸಿ ಅಂತಾ ಬೊಬ್ಬೆ ಹೊಡೆಯೋ ಅರಣ್ಯ ಇಲಾಖೆ ಮತ್ತೊಂದೆಡೆ ಇಡೀ ಕಾಡಿಗೆ ಕಾಡೇ ಹೊತ್ತಿ ಉರಿಯುತ್ತಿದ್ರು ಕಚೇರಿಯಲೇ ತಣ್ಣಗೆ ಕೂತಿರ್ತಾರೆ. ಮತ್ತೊಂದೆಡೆ ಸೂಕ್ತ ಸಿಬ್ಬಂದಿಗಳು, ಆಧುನಿಕ ಸೌಲಭ್ಯಗಳು ಇಲ್ಲದಿರೋದು ಮತ್ತೊಂದು ಕಾರಣವಾಗಿದೆ.