ಪೋಷಕರ ಅತಿ ಭದ್ರತೆ, ಬೆಂಕಿಗಾಹುತಿಯಾದ ಬೆಂಗಳೂರಿನ ಮುದ್ದು ಕಂದಮ್ಮಗಳು
ಪ್ರತಿಯೊಬ್ಬ ಪೋಷಕರಿಗೂ ಎಚ್ಚರಿಕೆ ನೀಡುವ ಸುದ್ದಿ. ನಿಮ್ಮ ಮಕ್ಕಳನ್ನು ಅತಿಯಾದ ಭದ್ರತೆಗೆ ದೂಡಿದರೆ ಯಾವ ರೀತಿ ಅಪಾಯ ಎದುರಿಸಬೇಕಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಬೆಂಗಳೂರಿನ ಈ ಘಟನೆ ನಿಜಕ್ಕೂ ಕಣ್ಣಲ್ಲಿ ನೀರು ತರಿಸುತ್ತದೆ.
ಬೆಂಗಳೂರು[ನ.11] ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದ ಉಂಟಾದ ಹೊಗೆಯಲ್ಲಿ ಉಸಿರುಕಟ್ಟಿ ಎರಡು ಕಂದಮ್ಮಗಳು ಸಾವಿಗೀಡಾದ ಹೃದಯವಿದ್ರಾವಕ ಘಟನೆ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಹೊಟ್ಟೆಪಾಡಿಗಾಗೀ ದೂರದ ನೇಪಾಳದಿಂದ ಬಂದಿದ್ದ ದೇವೆಂದ್ರ ಮತ್ತು ರೂಪಸಿ ದಂಪತಿಗಳ ಸೃಜನ್(5) ಮತ್ತು ಲಕ್ಷ್ಮಿ(2) ಮೃತ ದುದೈರ್ವಿ ಮಕ್ಕಳು.
ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಾ ಶೆಡ್ ಒಂದರಲ್ಲಿ ವಾಸವಿದ್ದ ನೇಪಾಳ ದಂಪತಿಗಳು ಕೂಲಿ ಕೆಲಸ ಮಾಡಿಕೊಂಡಿದ್ದರು, ಇಂದು ಬೆಳಿಗ್ಗೆ ದೇವೇಂದ್ರ ದಂಪತಿ ಶೆಡ್ ಒಳಗೆ ಮಕ್ಕಳನ್ನು ಬಿಟ್ಟು ಹೊರಗಿನಿಂದ ಚಿಲಕ ಹಾಕಿ ಕೆಲಸಕ್ಕೆ ಹೋಗಿದ್ದು ಸಂದರ್ಭದಲ್ಲಿ ಮಕ್ಕಳು ಬೆಂಕಿ ಪೊಟ್ಟಣದಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದ್ದು ಇದರಿಂದ ಉಂಟಾದ ಹೊಗೆಯಿಂದ ಮಕ್ಕಳು ಉಸಿರುಗಟ್ಟಿ ಸಾವನಪ್ಪಿದ್ದಾರೆ.
ಪೋಷಕರು ಕೆಲಸದಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ . ಇನ್ನು ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಯವಿಟ್ಟು ಮಕ್ಕಳ ಮೇಲೆ ನಿಗಾ ಇರುವುದರೊಂದಿಗೆ ಈ ರೀತಿಯ ಬೇಜವಾಬ್ದಾರಿ ವರ್ತನೆ ಮಾಡಬೇಡಿ ಎಂದಷ್ಟೆ ಕೇಳಿಕೊಳ್ಳುವುದು ಉಳಿದಿದೆ.