ಕಿತ್ತಾಡಿಕೊಂಡ ಬಿಜೆಪಿ ಸಂಸದರು: ನೋಡಿ ಮುಸಿ-ಮುಸಿ ನಕ್ಕ ಸತೀಶ್ ಜಾರಕಿಹೊಳಿ
ಹಾದಿ ಬೀದಿಯಲ್ಲಿಯೇ ಇಬ್ಬರು ಬಿಜೆಪಿ ಸಂಸದರು ಪರಸ್ಪರ ಕಿತ್ತಾಡಿಕೊಂಡ ಘಟನೆ ಗಡಿ ಜಿಲ್ಲೆ ಬೆಳಗಾವಿಯಲ್ಲಿಯೇ ನಡೆದಿದ್ದು, ಈ ಬಿಜೆಪಿ ಎಂಪಿಗಳ ಜಗಳವನ್ನು ನೋಡಿ ಕಾಂಗ್ರೆಸ್ ಸಚಿವ ನಕ್ಕು ಮೌನಕ್ಕೆ ಶರಣಾಗಿದ್ದಾರೆ.
ಬೆಳಗಾವಿ, [ಡಿ.25]: ಬೆಳಗಾವಿ ಸಂಸದ ಸುರೇಶ್ ಅಂಗಡಿ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಕಿತ್ತಾಡಿಕೊಂಡಿರುವ ಪ್ರಸಂಗ ನಡೆದಿದೆ.
ಬೆಳಗಾವಿಯ ಬೋಗಾರೆಸ್ ಕ್ರಾಸ್ ಬಳಿಯ ರೇಲ್ವೆ ಓವರ್ ಬ್ರಿಡ್ಜ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಬಹಿರಂಗವಾಗಿಯೇ ಇಬ್ಬರು ಬಿಜೆಪಿ ನಾಯಕರು ಕಿತ್ತಾಡಿಕೊಂಡಿದ್ದಾರೆ.
ಬೆಳಗಾವಿ, ಹುಬ್ಬಳ್ಳಿ ಏರ್ ಪೋರ್ಟ್ಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು
ಕಾರ್ಯಕ್ರಮದ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದಕ್ಕೆ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕ್ರಮದ ವೇದಿಕೆಗೆ ಬನ್ನಿ ಎಂದು ಸುರೇಶ್ ಅಂಗಡಿ ಕರೆಯಲು ಬಂದಾಗ ಸಿಡಿಮಿಡಿಗೊಂಡ ಪ್ರಭಾಕರ್ ಕೋರೆ ಏರು ಧ್ವನಿಯಲ್ಲಿಯೇ ತರಾಟೆಗೆ ತೆಗೆದುಕೊಂಡರು.
ನನ್ನ ಹೆಸರು ಇಲ್ಲ ನಾನು ಬರಲ್ಲ. ನಾನು ಈ ಭಾಗದ ರಾಜ್ಯಸಭಾ ಸದಸ್ಯ ಇದ್ದೀನಿ. ನನ್ನ ಹೆಸರು ಇಲ್ಲ. ನಾನು ವೇದಿಕೆಗೆ ಬರಲ್ಲ. ಕಾರ್ಯಕ್ರಮಕ್ಕೆ ಬಂದಿನಿ. ಇಲ್ಲೇ ಕೆಳಗೆ ಕುಳಿತಿರುತ್ತೀನಿ ಎಂದರು.
ಅಲ್ಲದೆ, ಸಂಸದ ಸುರೇಶ ಅಂಗಡಿಗೆ ದಾದಾಗಿರಿ ಮಾಡಬ್ಯಾಡರಿ ಇದು ಸರಿಯಲ್ಲ ಎಂದು ತಿರುಗೇಟು ಕೊಟ್ಟರು ಅಲ್ಲದೆ, ವೇದಿಕೆ ಮೇಲೆ ಬರಲ್ಲ. ಇದು ನಮ್ಮ ಕಾರ್ಯಕ್ರಮ ಅಂತಾನೆ ನಾನು ಬಂದಿನಿ ಎಂದು ಸಮಜಾಯಿಸಿ ನೀಡಿದರು.
ಇನ್ನು ಬಿಜೆಪಿ ಸಂಸದರ ಬೀದಿ ರಂಪಾಟವನ್ನು ಕಾಂಗ್ರೆಸ್ ನೂತನ ಸಚಿವ ಸತೀಶ ಜಾರಕಿಹೊಳಿ ನೋಡಿ ನಕ್ಕು ಮೌನಕ್ಕೆ ಶರಣಾದರು.