Asianet Suvarna News Asianet Suvarna News

ಗಂಡ ಹೆಂಡಿರ ಜಗಳ: ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಪಾಪಿ ತಂದೆ

ಮಕ್ಕಳಿಗೆ ಕೈಯ್ಯಾರ ವಿಷ ಕುಡಿಸಿ ರೈಲಿಗೆ ತಲೆ ಕೊಟ್ಟ ತಂದೆ| ಚಿಂಚೋಳಿ ಭೈರಂಪಳ್ಳಿ ತಾಂಡಾದಲ್ಲಿ ಹೃದಯ ವಿದ್ರಾವಕ ಘಟನೆ| ಮಕ್ಕಳನ್ನು ಕೊಂದ ಬಳಿಕ ರೈಲು ಹಳಿಗೆ ತಲೆಕೊಟ್ಟ ಪಾಪಿ ತಂದೆ|ಕೂಲ್‌ಡ್ರಿಂಕ್ಸ್‌ನಲ್ಲಿ ವಿಷ ಬೆರೆಸಿ ಕೊಲೆ|

Father Murder his Daughters in Chincholi in Kalaburagi District
Author
Bengaluru, First Published Jan 4, 2020, 12:39 PM IST

ಕಲಬುರಗಿ(ಜ.04): ತನ್ನ ಕರುಳ ಕುಡಿಗಳಿಗೆ ಕೈಯ್ಯಾರೆ ವಿಷ ಕುಡಿಸಿ ಪ್ರಾಣ ತೆಗೆದ ತಂದೆ ಬಳಿಕ ತಾನೂ ರೈಲಿಗೆ ತಲೆ ಕೊಟ್ಟು ದಾರುಣವಾಗಿ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಭೈರಂಪಳ್ಳಿ ತಾಂಡಾದಲ್ಲಿ ಸಂಭವಿಸಿದೆ. 

ತೆಲಂಗಾಣ ಗಡಿಯಲ್ಲಿರುವ ಬೈರಂಪಳ್ಳಿ ತಾಂಡಾದ ನಿವಾಸಿ ಸಂಜೀವಕುಮಾರ್ ಕುಮಲಾ ನಾಯಕ ರಾಠೋಡ್ (35) ಈತನೇ ತನ್ನಿಬ್ಬರು ಮಕ್ಕಳಿಗೆ ತಾನೇ ಕೂಲ್ ಡ್ರಿಂಕ್ಸ್‌ನಲ್ಲಿ ವಿಷ ಬೆರೆಸಿ ಕುಡಿಯಲು ಕೊಟ್ಟು ಮಕ್ಕಳು ಪ್ರಾಣ ಬಿಟ್ಟ ನಂತರ, ನಂತರ ತಾನೂ ಹೋಗಿ ರೈಲಿಗೆ ತಲೆ ಕೊಟ್ಟು ದಾರುಣ ಅಂತ್ಯ ಕಂಡಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದುರಂತ ಘಟನೆಯಲ್ಲಿ ಸಾವಿಗೀಡಾದ ಕಂದಮ್ಮಗಳನ್ನು ರೋಹಿತಾ (5) ಹಾಗೂ ಪೂರ್ವಿಕಾ (3) ಎಂದು ಗುರುತಿಸಲಾಗಿದೆ. ಭೈರಂಪಳ್ಳಿಯ ಸಂಜೀವಕುಮಾರ್ ರಾಠೋಡ್ ಗುರುವಾರ ಸಂಜೆ ತಾಂಡಾದ ಸಮೀಪದಲ್ಲಿ ಇರುವ ತೊಗರಿ ಹೊಲಕ್ಕೆ ತನ್ನಿಬ್ಬರು ಪುತ್ರಿಯರೊಂದಿಗೆ ಹೋಗಿದ್ದಾನೆ. ಅಲ್ಲಿಗೆ ಹೋದವನೇ ಬೇಕರಿಯಿಂದ ತಾನೇ ಖರೀದಿಸಿ ತಂದಿದ್ದ ತಿಂಡಿ, ತಿನಿಸು ನೀಡಿದ್ದಾನೆ. ಜೊತೆಗೇ ವಿಷ ಬೆರೆಸಿದಂತಹ ತಂಪು ಪಾನೀಯ ಕುಡಿಯಲು ನೀಡಿದ್ದಾನೆ. ವಿಷ ಬೆರೆತ ತಂಪು ಪಾನೀಯ ಸೇವಿಸಿರುವ ಪುಟಾಣಿ ಕಂದಮ್ಮಗಳು ಹೊಲದಲ್ಲೇ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿವೆ. 

ತಂದೆ ತನ್ನ ಕರುಳ ಕುಡಿಗಳಿಬ್ಬರೂ ಸಾವಿಗೀಡಾಗಿದನ್ನ ತಾನೇ ನೋಡಿ ಖಾತರಿಪಡಿಸಿಕೊಂಡಿದ್ದಾನೆ. ಇದೇ ಸಂದರ್ಭದಲ್ಲಿ ಸಂಬಂಧಿಕರಿಗೆ ಮೊಬೈಲ್ ವಾಟ್ಸಪ್ ಸಂದೇಶ ರವವಾನಿಸಿ ಮಕ್ಕಳು ಸತ್ತಿದ್ದಾರೆ. ತಾನೂ ವಿಷ ಸೇವಿಸಿ ಸಾಯುತ್ತಿರುವ ಸಂದೇಶ ರವಾನಿಸಿದ್ದಾನೆ. ಈ ಸಂದೇಶ ಓದಿದದವರೇ ಬಂಧುಗಳು ಓಡೋಡಿ ಹೊಲಕ್ಕೆ ಹೋಗುವಷ್ಟರಲ್ಲಿ ಮೃತಪಟ್ಟಿರುವ ಮಕ್ಕಳನ್ನು ಬಿಟ್ಟು ಸಂಜೀವಕುಮಾರ್ ಕಾಣದಂತೆ ಪರಾರಿಯಾಗಿ ರೋದು ಗೊತ್ತಾಗಿದೆ. 
ಗುರುವಾರ ಇಡೀ ರಾತ್ರಿ ಆತನನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ನಡೆಸಿದ್ದರೂ ಆತನ ಸುಳಿವು ಪತ್ತೆಯಾಗಿಲ್ಲ. ಆದರೆ ಶುಕ್ರವಾರ ಮುಂಜಾನೆ ತೆಲಂಗಾಣ ರಾಜ್ಯದ ತಾಂಡೂರ ಸಮೀಪ ರೈಲ್ವೆ ಹಳಿ ಮೇಲೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಗೊತ್ತಾಗಿ ಪೊಲೀಸರು ಅಲ್ಲಿಗೆ ಹೋಗಿ ಪರಿಶೀಲಿಸಿದ್ದಾರೆ. ಈತನೇ ಮಕ್ಕಳ ಕೊಂದ ಆರೋಪಿ ತಂದೆ ಸಂಜೀವಕುಮಾರ್ ಎಂದು ದೃಢವಾಗಿದೆ. 

ಈತನ ಗುರುತು ಚೀಟಿ, ಅಂಗಿ, ಬಟ್ಟೆಬರೆ ಎಲ್ಲವನ್ನು ಗಮನಿಸಿ ಪೊಲೀಸರು ರೈಲು ಹಳಿಯಲ್ಲಿ ಸಾವಿಗೀಡಾರುವಾತ ಮಕ್ಕಳನ್ನು ವಿಷ ಕೊಟ್ಟು ಕೊಲೆ ಮಾಡಿದ ಪಾಪಿ ತಂದೆ ಎಂಬುದನ್ನು ಸಿಪಿಐ ಮಹಾಂತೇಶ ಪಾಟೀಲ ದೃಢಪಡಿಸಿದ್ದಾರೆ. 
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮತ್ತು ಡಿವೈಎಸ್ಪಿ ಕೆ. ಬಸವರಾಜ, ಸಿಪಿಐ ಮಹಾಂತೇಶ ಪಾಟೀಲ್, ಪಿಎಸ್‌ಐ ರಾಜ ಶೇಖರ ರಾಠೋಡ್, ಪಿಎಸ್‌ಐ ಸಂತೋಷ್ ರಾಠೋಡ, ವಿಜಯಕುಮಾರ ರಾಠೋಡ್, ಪ್ರೊಬೆಷನರಿ ಪಿಎಸ್‌ಐ ಉಪೇಂದ್ರಕುಮಾರ್ ಭೇಟಿ ನೀಡಿ ಪರಿ ಶೀಲಿಸಿದರು. ಮೃತ ಸಂಜೀವಕುಮಾರ ರಾಠೋಡ್ ಹಾಗೂ ಇಬ್ಬರು ಹೆಣ್ಣು ಮಕ್ಕಳ ಶವ ಸಂಸ್ಕಾರ ಭೈರಂಪಳ್ಳಿ ತಾಂಡಾದಲ್ಲಿ ನಡೆಯಿತು.

ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಸಂಜೀವಕುಮಾರ್ 

ಕುಮಲಾನಾಯಕ ರಾಠೋಡ್ ಈತ ಆಟೋ ಮೊಬೈಲ್ ಎಂಜನಿಯರ್ ಆಗಿದ್ದಾತ, ತನ್ನ ಎಂಜಿನಿಯರಿಂಗ್ ಪದವಿಯ ನಂತರ ಹೈದ್ರಾಬಾದಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಸಿದ್ದಾಪೂರ ತಾಂಡಾ(ಚಿಮ್ಮನಚೋಡ) ತಾಂಡಾದ ಯುವತಿ ನಿರ್ಮಲಾಬಾಯಿಯೊಂದಿಗೆ ಕಳೆದ 7 ವರ್ಷಗಳ ಹಿಂದೆ ಮದುವೆಯಾಗಿತ್ತು. 

ಸಂಜೀವಕುಮಾರ್ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿದ್ದ, ಆದರೆ ಈತ ವಿವಾಹಿತ, ಮಕ್ಕಳ ತಂದೆ ಆದರೂ ಅವಕಾಶ ಸಿಕ್ಕಾಗೆಲ್ಲ ಆಗಾಗ ಹೆಂಡತಿಯೊಂದಿಗೆ ಅನೇಕ ಕಾರಣಗಳಿಂದಾಗಿ ಜಗಳ ಮಾಡುತ್ತಿದ್ದನು. ಹಣ ತರುವಂತೆ ಪೀಡಿಸಿ, ಕಿರುಕುಳ ನೀಡಿ ಹೊಡೆ ಬಡಿ ಮಾಡುತ್ತಿದ್ದನು ಎಂಬುದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ. 

ಹೊಸ ವರ್ಷಾಚರಣೆ ಮಾಡಲು ತನ್ನ ಭೈರಂಪಳ್ಳಿ ತಾಂಡಾಕ್ಕೆ ಹೆಂಡತಿ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದಿದ್ದನು. ಗುರುವಾರ ಸಂಜೆ ಹೆಂಡತಿಯೊಂದಿಗೆ ಜಗಳ ಮಾಡಿ ಹೊಡೆದಿದ್ದಾನೆ. ಆಕೆ ಪ್ರಜ್ಞೆ ತಪ್ಪಿದ ನಂತರ ಮಕ್ಕಳನ್ನು ಕರೆದುಕೊಂಡು ಹೊರಗೆ ಹೋಗಿ ಕೂಲ್‌ಡ್ರಿಂಕ್ಸ್‌ನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾನೆ ಎಂದು ನಿರ್ಮಲಾಬಾಯಿ ಚಿಕ್ಕಪ್ಪ ದಿ. ಕೆ. ಚವ್ಹಾಣ ತಿಳಿಸಿದ್ದಾರೆ. ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios