ಪಬ್‌ಜಿ ನಿಷೇಧ| ನರೇಂದ್ರ ಮೋದಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹರ್ಷ ವ್ಯಕ್ತಪಡಿಸಿದ ರೈತ ದಂಪತಿ| ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಆಶಿಹಾಳ ತಾಂಡದ ರೈತ ದಂಪತಿಗಳಾದ ಲಕ್ಷ್ಮಣ ನಾಯಕ, ಲಕ್ಷ್ಮೀಬಾಯಿ ಲಕ್ಷ್ಮಣ ನಾಯಕರಿಂದ ಅಭಿನಂದನೆ|  

ಲಿಂಗಸುಗೂರು(ಸೆ.04): ಡ್ರ್ಯಾಗನ್‌ ಚೀನಿ ಆಪ್‌ ಪಬ್‌ಜಿಯನ್ನು ನಿಷೇಧ ಮಾಡಿರುವುದರಿಂದ ಖುಷಿಗೊಂಡ ರೈತ ದಂಪತಿಯು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. 

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಆಶಿಹಾಳ ತಾಂಡದ ರೈತ ದಂಪತಿಗಳಾದ ಲಕ್ಷ್ಮಣ ನಾಯಕ, ಲಕ್ಷ್ಮೀಬಾಯಿ ಲಕ್ಷ್ಮಣ ನಾಯಕ ದೇಶದಲ್ಲಿ ಪಬ್‌ಜಿ ಆಟದಿಂದ ಯುವಕರು ಮಾನಸಿಕ ಖಿನ್ನತೆಗೆ ಒಳಗಾಗುವುದಲ್ಲದೆ ಮೊಬೈಲ್‌ನಲ್ಲಿ ರಾತ್ರಿಯಿಡಿ ಪಬ್‌ಜಿ ಆಟದಲ್ಲಿ ತಲ್ಲೀನರಾಗುತ್ತಿದ್ದರು. ಪರಿಣಾಮ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವೇ ಮೊಟಕುಗೊಂಡಿತ್ತು. ಪರಿಣಾಮ ಜನರು ಪಬ್‌ಜಿ ಯಾಕಾದ್ರೂ ಬಂದಿದೆ ಎಂದು ಆಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. 

ಟಿಕ್ ಟಾಕ್ ಹೋಯ್ತು, ಪಬ್‌ಜಿನೂ ಹೋಯ್ತು..ಇನ್ನು ಇರೋದ್ಯಾವುದು?

ಇತ್ತೀಚೆಗೆ ಭಾರತ ಮತ್ತು ಚೀನಾದ ಸಂಬಂಧ ಹಳಸಿದ್ದರಿಂದ ಕೇಂದ್ರ ಸರ್ಕಾರ ಚೀನಾದ ನೂರಾರು ಮೊಬೈಲ್‌ ಆ್ಯಪ್‌ಗಳನ್ನು ನಿಷೇಧ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕ್ರಮ ಜರುಗಿಸಿದ್ದರು ಅದರ ಮುಂದುವರೆದ ಭಾಗವಾಗಿ ಇದೀಗ ಪಬ್‌ಜಿ ನಿಷೇಧ ಮಾಡುವುದಾಗಿ ಮೋದಿ ಘೋಷಣೆ ಮಾಡಿ ಕ್ರಮಕ್ಕೆ ಮುಂದಾಗಿರುವುದರಿಂದ ತಾಂಡಾದ ರೈತರು ಪ್ರಧಾನಮಂತ್ರಿ ಮೋದಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಸರ್ಕಾರದ ನಿರ್ಧಾರ ಬೆಂಬಲಿಸಿದ್ದಾರೆ.