Asianet Suvarna News Asianet Suvarna News

ಕೈ ಕೊಟ್ಟ ಮಳೆರಾಯ: ಕಾದು ಕೂತಿದ್ದ ರೈತ​ರಿಗೆ ‘ಅನ್ಯಾಯ’

ಭೂಮಿಯನ್ನು ಹಸನುಗೊಳಿಸಿ, ಬಿತ್ತನೆಗಾಗಿ ಕಾಯ್ದಿರುವ ರೈತರು ಮಳೆಗಾಗಿ ಚಡಪಡಿಸುತ್ತಿದ್ದಾರೆ. ಶಹಾಪುರ ತಾಲೂಕಿನ 73398, ವಡಗೇರಾ ತಾಲೂಕಿನ 52160 ಹೆಕ್ಟೇರ್‌ ಕೃಷಿ ಸಾಗುವಳಿ ಭೂಮಿಯಿದ್ದು, ಕೇವಲ ಶೇಕಡ 55 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ.

Farmers Faces Problems For Monsoon Rain Delay in Yadgir grg
Author
First Published Jun 21, 2023, 11:30 PM IST

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ(ಜೂ.21):  ಮುಂಗಾರು ಹಂಗಾಮು ಬಿತ್ತನೆಗೆ ಸಜ್ಜಾಗಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮುಂಗಾರು ನಿರೀಕ್ಷೆಯಷ್ಟು ಸುರಿಯದೇ ಇರುವುದು ರೈತರನ್ನು ಹೈರಾಣು ಮಾಡಿದೆ. ಭೂಮಿಯನ್ನು ಹಸನುಗೊಳಿಸಿ, ಬಿತ್ತನೆಗಾಗಿ ಕಾಯ್ದಿರುವ ರೈತರು ಮಳೆಗಾಗಿ ಚಡಪಡಿಸುತ್ತಿದ್ದಾರೆ. ಶಹಾಪುರ ತಾಲೂಕಿನ 73398, ವಡಗೇರಾ ತಾಲೂಕಿನ 52160 ಹೆಕ್ಟೇರ್‌ ಕೃಷಿ ಸಾಗುವಳಿ ಭೂಮಿಯಿದ್ದು, ಕೇವಲ ಶೇಕಡ 55 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ.
ತಾಲೂಕಿನಲ್ಲಿ ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಕೃಷಿ ಕೂಲಿಕಾರ ಕುಟುಂಬಗಳು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ರೈತಾಪಿ ವರ್ಗ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಬಿತ್ತನಗೆ ಅಣಿಮಾಡಿಕೊಂಡು ವರುಣ ದೇವನ ಕೃಪೆಗಾಗಿ ಮುಗಿಲು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶಹಾಪುರ ತಾಲೂಕಿನಲ್ಲಿ 73,398 ಹೆಕ್ಟೇರ್‌ ಕೃಷಿ ಸಾಗುವಳಿ ಭೂಮಿಯಿದ್ದು, 30,409 ಹೆಕ್ಟೇರ್‌ ನೀರಾವರಿ ಜಮೀನಿದೆ. 46,989 ಹೆಕ್ಟರ್‌ ಮಳೆಯಾತ ಒಣಭೂಮಿಯಿದೆ.

YADGIRI: ಕಳೆದು ಹೋದ ಹಣ ವಾರಸುದಾರರಿಗೆ ಮರಳಿಸಿದ ಪೋಲಿಸ್ ಕಾನ್ಸ್ ಟೇಬಲ್, ಸಾರ್ವಜನಿಕರಿಂದ ಮೆಚ್ಚುಗೆ

ಮಳೆ ವಿವರ: 45.9 ರಷ್ಟು ಮಳೆ ಕುಂಠಿತ

2023ರ ಜೂನ್‌ ಆರಂಭದಿಂದ ಈವರೆಗೆ ಶಹಾಪುರ ತಾಲೂಕಿನಲ್ಲಿ ವಾಡಿಕೆ ಮಳೆ 73.1 ಮಿ.ಮೀ. ಇದ್ದು ಸರಾಸರಿ 33.6 ಮಿ.ಮೀ. ರಷ್ಟುಮಳೆಯಾಗಿದೆ. 45.9 ರಷ್ಟುಮಳೆ ಕೊರತೆಯಾಗಿದೆ. ತಾಲೂಕಿನಲ್ಲಿ ಹತ್ತಿ ಬಿತ್ತನೆಗೆ 38,798 ಹೆಕ್ಟರ್‌ ಗುರಿ ಹೊಂದಲಾ​ಗಿ​ದ್ದು, ಇದರಲ್ಲಿ ಕೇವಲ 30 ಹೆಕ್ಚೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ತೊಗರಿ 14,000 ಹೆಕ್ಟೇರ್‌ ಗುರಿ ಹೊಂದಿದ್ದು, ಕೇವಲ 15 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇನ್ನು ಹೆಸರು 3140 ಹೆಕ್ಟೇರ್‌ ಪ್ರದೇಶ ಗುರಿ ಹೊಂದಿದ್ದು, ಕೇವಲ 10 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ತೇವಾಂಶ ಕೊರತೆ :

ಸುಮಾರು 40 ಡಿಗ್ರಿಗೂ ಹೆಚ್ಚಿನ ಪ್ರಮಾಣದ ಸುಡಬಿಸಿಲಿನ ತಾಪಮಾನಕ್ಕೆ ಭೂಮಿಕಾದ ಕಬ್ಬಿಣದಂತಾಗಿದೆ. ಕೆಲ ದಿನಗಳ ಹಿಂದೆ ಸುರಿದ ಅಲ್ಪ ಪ್ರಮಾಣದ ಮಳೆ ಭೂಮಿ ತಂಪಾ​ಗಿ​ಸಿ​ಲ್ಲ. ಬಿಸಿಲಿನ ತಾಪಮಾನಕ್ಕೆ ಭೂಮಿ ತತ್ತರಿಸಿದೆ. ಕೆಲ ರೈತರು ಮಳೆ ಬರಬಹುದೆಂಬ ನಂಬಿಕೆಯಿಂದಾಗಿ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದಾರೆ.

ಸಾಲದ ಚಿಂತೆ :

ಕಳೆದ ವರ್ಷ ಸಹ ಮಳೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬೆಳೆ ಕೈಗೆ ಬಾರದೆ ಬಿತ್ತನೆ ಬೀಜ, ಗೊಬ್ಬರ ಮತ್ತು ಕೃಷಿ ಕಾರ್ಮಿಕರಿಗಾಗಿ ವಿವಿಧೆಡೆ ಮಾಡಿದ ಸಾಲ ಮರುಪಾವತಿ ಮಾಡಲು ಹರಸಾಹಸ ಪಡುವ ಸ್ಥಿತಿಯಿತ್ತು. ಒಡವೆ ಗಿರವಿ ಇಟ್ಟು ಪಡೆದ ಸಾಲದ ಬಡ್ಡಿಯನ್ನು ಸಹ ತೀರಿಸಲು ಸಾಧ್ಯವಾಗದೆ ಪರದಾಡುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಈ ಸಲ ಮಳೆರಾಯ ಕೈಕೊಟ್ಟಿದ್ದರಿಂದ ರೈತರು ಇನ್ನಷ್ಟುಸಂಕಷ್ಟಕ್ಕೆ ಗುರಿ ಮಾಡಿದ್ದಾನೆ ಎನ್ನುತ್ತಾನೆ ನಾಗನಟಿಗಿ ಗ್ರಾಮದ ರೈತ ಮರಿಲಿಂಗಪ್ಪ.

ಈ ಸಲ ಮುಂಗಾರು ಮಳೆ ವಾಡಿಕೆ ಗಿಂತ ಕಡಿಮೆ ಪ್ರಮಾಣದಲ್ಲಿ ಬಂದಿರುವುದರಿಂದ ಬಿತ್ತನೆಯ ಕಾರ್ಯ ವಿಳಂಬವಾಗುತ್ತಿದೆ. ಬೆಳಗಳ ಬೆಳವಣಿಗೆ ಮತ್ತು ಇಳುವರಿಯಲ್ಲಿ ವ್ಯತ್ಯಾಸ ಆಗುವ ಸಂಭವವಿದೆ ಅಂತ ಶಹಾಪುರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. 

ಒಂದೇ ದಿನದಲ್ಲಿ ನಿರ್ಮಾಣವಾಯ್ತು ಯಾದಗಿರಿಯ ಸೂಲಧಿರೇಶ್ವರ ದೇವಸ್ಥಾನ

ರೈತರ ಪಾಲಿಗೆ ಹೆಸರು ಒಂದು ರೀತಿಯಲ್ಲಿ ಆಪತ್ಬಾಂಧವ ಇದ್ದಂತೆ. ಮುಂಗಾರು ಮಳೆ ಸಕಾಲಕ್ಕೆ ಬಂದಿದ್ದರೆ ಹೆಸರು ಬೆಳೆದುಕೊಳ್ಳಬಹುದಾಗಿತ್ತು. ರೈತರು ಮುಂದಿನ ಬೆಳೆ ಬೆಳೆದುಕೊಳ್ಳಲು ಇದು ನೆರವಾಗುತ್ತಿತ್ತು. ಈಗಾಗಲೇ ಸಾಲ ಶೂಲ ಮಾಡಿ ಬೀಜ ತಂದಿಟ್ಟಿದ್ದೇವೆ. ಹೊಲ ಎಲ್ಲಾ ಹದ ಮಾಡಿ ಇಟ್ಟುಕೊಂಡಿದ್ದೇವೆ. ಮಳೆರಾಯ ಕೈಕೊಟ್ಟಿದ್ದರಿಂದ ದಿಕ್ಕು ಕಾಣದಂತಾಗಿದೆ ಅಂತ ಕನ್ಯಾಕೋಳೂರ ಗ್ರಾಮದ ರೈತ ಸಿದ್ದಪ್ಪ ಪೂಜಾರಿ ಹೇಳಿದ್ದಾರೆ.

ಸದ್ಯ ಮಳೆ ಬಂದರೆ ಹೆಸರು ಬಿತ್ತಲು ಅನುಕೂಲವಾಗುತ್ತದೆ. ಹತ್ತಿ, ತೊಗರಿ ಜೂನ್‌ ತಿಂಗಳ ಕೊನೆಯವರೆಗೂ ಬಿತ್ತಲು ಬರುತ್ತದೆ. ಆದರೆ ಒಣ ಬೇಸಾಯ ಮಾಡುವ ರೈತರಿಗೆ ತುಂಬಾ ತೊಂದರೆಯಾಗುತ್ತದೆ. ನಾನು 10 ಎಕರೆ ಹತ್ತಿ, ತೊಗರಿ ಬಿತ್ತಲು ಭೂಮಿ ಹದ ಮಾಡಿಕೊಂಡು ಕುಳಿತಿದ್ದೇನೆ. ಮಳೆ ಬಂದ ತಕ್ಷಣ ಬಿತ್ತುತ್ತೇನೆ. ನೀರಾವರಿ ಜಮೀನಿರುವ ರೈತ​ರಿ​ಗೆ ಯಾವ ತೊಂದರೆ ಆಗದು ಅಂತ ಮುಡಬೂಳ ಗ್ರಾಮದ ರೈತ ಶಾಂತಗೌಡ ಪಾಟೀಲ್‌ ತಿಳಿಸಿದ್ದಾರೆ. 

Follow Us:
Download App:
  • android
  • ios