ಈಗ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿರುವವರು, ಕರ್ನಾಟಕ ಏಕೀಕರಣವಾದಾಗ ಹುಟ್ಟೇ ಇರಲಿಲ್ಲ. ಅಖಂಡ ರಾಜ್ಯಕ್ಕಾಗಿ ಶ್ರಮಿಸಿದವರ ಬೆಲೆ ಗೊತ್ತಿಲ್ಲದವರು ಇಂದು ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ.

ಗದಗ: 'ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ ನಡೆಯಬೇಕು. ಇದಕ್ಕೆ ಜಗದೀಶ ಶೆಟ್ಟರ್ ಹಾಗೂ ಎಚ್.ಕೆ.ಪಾಟೀಲ್ ಕೂಡಲೇ ಸಭೆ ಕರೆಯಬೇಕು,' ಎಂದು ಮಾಜಿ ಸಚಿವ ಹಿರಿಯ ರಾಜಕೀಯ ಮುತ್ಸದ್ಧಿ ಎಸ್.ಎಸ್.ಪಾಟೀಲ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

'ತಕ್ಷಣವೇ ಸಭೆ ಕರೆದಲ್ಲಿ ಆ ಸಭೆಗೆ ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರನ್ನು ಆ ಸಭೆಗೆ ಕರೆತುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. 
ಏಕೀಕರಣ ಮಾಡಬೇಕಾದಲ್ಲಿ ಸಾಕಷ್ಟು ಶ್ರಮವಹಿಸಿದ್ದೇವೆ. ಈಗ ಅಭಿವೃದ್ಧಿ ಮಾನದಂಡ ಇಟ್ಟುಕೊಂಡು ಒಡಕಿನ ಮಾತಾಡುವುದು ಒಳ್ಳೆಯ ಬೆಳವಣಿಗೆಯಲ್ಲ,' ಎಂದು ಅಭಿಪ್ರಾಯಪಟ್ಟಿದ್ದಾರೆ. 

'ಕರ್ನಾಟಕ ಅಖಂಡವಾಗಿರಬೇಕು. ಇಂದು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವ ಯಾರೊಬ್ಬರೂ ಏಕೀಕರಣದ ವೇಳೆಯಲ್ಲಿ ಹುಟ್ಟಿರಲೇ ಇಲ್ಲ. ಇಂದು ಬಂದು ಒಡಕಿನ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ಪ್ರತ್ಯೇಕತೆ ಬಗ್ಗೆ ಮಾತನಾಡುವವರ ವಿರುದ್ದ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಅವರು ಇದನ್ನೆಲ್ಲಾ ತಕ್ಷಣವೇ ನಿಲ್ಲಿಸಬೇಕು. ಅದರಲ್ಲಿಯೂ ದಿಂಗಾಲೇಶ್ವರ ಶ್ರೀಗಳಂತಾ ಮಠಾಧೀಶರು ಒಡಕಿನ ಮಾತು ಹೇಳಬಾರದು,' ಎಂದು ಆಗ್ರಹಿಸಿದ್ದಾರೆ.

ಎಚ್ಡಿಕೆ ಅಳಕೂಡದು....
'ಕುಮಾರಸ್ವಾಮಿ ತಾಳ್ಮೆಯಿಂದ ವರ್ತಿಸಬೇಕು. ಈ ಹಿಂದೆ 20 ತಿಂಗಳು ಅಧಿಕಾರ ನಡೆಸಿದ ವೇಳೆಯಲ್ಲಿ ಕೆಲಸ ಮಾಡಿದಂತೆ ಮಾಡಬೇಕು. ಕುಮಾರಸ್ವಾಮಿಗೆ ಒಳಗೂ ಹೊರಗೂ ಒತ್ತಡವಿದೆ. ಹಾಗಾಗಿ ಅಳುತ್ತಿದ್ದಾರೆ. ಧೈರ್ಯ ಗೆಡಬಾರದು. ಕುಮಾರಸ್ವಾಮಿ ಸಾಲ ಮನ್ನಾದಂಥ ವಿಷಯದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡು ಸಮಸ್ಯೆ ಎದುರಿಸುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡುವುದರಿಂದ ರೈತರ ಬದುಕು ಹಸನಾಗುವುದಿಲ್ಲ. ರೈತರ ಆತ್ಮ‌ಹತ್ಯೆಗಳು ನಿಲ್ಲುವುದಿಲ್ಲ,' ಎಂದರು. 

ಅನ್ನ ಭಾಗ್ಯದಿಂದ ರೈತರು ಸೋಮಾರಿಗಳಾಗಿದ್ದಾರೆ..

'ರಾಜ್ಯ ಮತ್ತು ಕೇಂದ್ರ ಸರ್ಕಾರದ ಎನ್‌ಆರ್‌ಜಿಎ, ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್‌ನಂಥ ಯೋಜನೆಗಳಿಂದ ರೈತರು ಸೋಮಾರಿಗಳಾಗಿದ್ದಾರೆ. ಸಮ್ಮಿಶ್ರ ಸರ್ಕಾರ 5 ವರ್ಷ ನಡೆಯಬೇಕು, ಆ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಿರಿಯರು ಗಮನ ನೀಡಬೇಕು. ಒಂದು ಸರ್ಕಾರ ಬೀಳಿಸಿಕೊಂಡು ಚುನಾವಣೆಗೆ ಹೋದಲ್ಲಿ ನಿಮ್ಮ ಠೇವಣಿ ಉಳಿಯುವುದಿಲ್ಲ, ಇದಕ್ಕೆ ನಾವೇ ಉತ್ತಮ ಉದಾಹರಣೆ,' ಎಂದರು.

'ಪಕ್ಷ ಕಟ್ಟಿ ಗೊತ್ತಿಲ್ಲದ ಕಾಂಗ್ರೆಸ್‌ ನೆಹರು ಇಂದಿರಾ ಹೆಸರಿನಲ್ಲಿ ಮತ ಪಡೆಯುತ್ತಲೇ ಬಂದಿದೆ. ಇನ್ನಾದರೂ ಪಕ್ಷ ಕಟ್ಟುವತ್ತ ಗಮನ ಕೊಡಿ,' ಎಂದು ಪಕ್ಷಕ್ಕೆ ಕಿವಿ ಮಾತು ಹೇಳಿದ್ದಾರೆ ಮಾಜಿ ಅರಣ್ಯ ಮತ್ತು ಸಹಕಾರಿ ಸಚಿವ ಎಸ್.ಎಸ್.ಪಾಟೀಲ್.