ಉಚ್ಚಾಟಿತರಾದ ಇಬ್ಬರು ಕಾಂಗ್ರೆಸ್ ಹಾಗೂ ಮೂವರು ಜೆಡಿಎಸ್ ಮುಖಂಡರಿಗೆ ಸ್ಥಾನ ಸಿಕ್ಕಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಬೆಂಗಳೂರು [ಜ.19]: ಪಕ್ಷ ವಿರೋಧಿ ಚಟುವಟಿಕೆ ಅರೋಪದ ಹಿನ್ನೆಲೆಯಲ್ಲಿ ಉಚ್ಛಾಟಿತಗೊಂಡ ಕಾಂಗ್ರೆಸ್‌ನ ಇಬ್ಬರು, ಜೆಡಿಎಸ್‌ನ ಮೂರು ಮಂದಿ ಪಾಲಿಕೆ ಸದಸ್ಯರಿಗೆ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟಿತಗೊಂಡ ಹೇರೋಹಳ್ಳಿ ವಾರ್ಡ್‌ನ ರಾಜಣ್ಣ ಅವರು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಆಯ್ಕೆಯಾದರೆ, ವಾರ್ಡ್‌ಮಟ್ಟದ ಸಾರ್ವಜನಿಕ ಕಾಮಗಾರಿ ಸಮಿತಿಗೆ ಯಶವಂತಪುರ ವಾರ್ಡ್‌ನ ಜಿ.ಕೆ.ವೆಂಕಟೇಶ್‌ (ಎನ್‌.ಟಿ.ಆರ್‌) ಆಯ್ಕೆಯಾಗಿದ್ದಾರೆ. 

ಸ್ಥಾಯಿ ಸಮಿತಿ ಸ್ಥಾನ ಮಿಸ್; ಕಣ್ಣೀರಿಟ್ಟ BJP ಮಹಿಳಾ ಕಾರ್ಪೋರೇಟರ್‌ಗಳು...

ಇನ್ನು ಜೆಡಿಎಸ್‌ನಿಂದ ಉಚ್ಚಾಟಿತಗೊಂಡ ಲಗ್ಗೆರೆ ವಾರ್ಡ್‌ನ ಮಂಜುಳಾ ಎನ್‌.ಸ್ವಾಮಿಗೆ ಅವರಿಗೆ ಶಿಕ್ಷಣ ಸ್ಥಾಯಿ ಸಮಿತಿ, ಬಿಟಿಎಂ ಬಡಾವಣೆ ವಾರ್ಡ್‌ನ ಕೆ.ದೇವದಾಸ್‌ಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಮಾರಪ್ಪನ ಪಾಳ್ಯ ವಾರ್ಡ್‌ನ ಎಂ.ಮಹಾದೇವ ಅವರಿಗೆ ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.

ಈ ಪೈಕಿ ಮಂಜುಳಾ ಎನ್‌. ಸ್ವಾಮಿ ಶಿಕ್ಷಣ ಸ್ಥಾಯಿ ಸಮಿತಿಗೆ, ಹಾಗೂ ಜಿ.ಕೆ.ವೆಂಕಟೇಶ್‌ ಅವರು ವಾರ್ಡ್‌ ಮಟ್ಟದ ಸಾರ್ವಜನಿಕ ಸ್ಥಾಯಿ ಸಮಿತಿಗೆ ಅಧ್ಯಕ್ಷ ಸ್ಥಾನ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.