'ಆಂಧ್ರದ ಮಹಿಳಾ ಅಧಿಕಾರಿಗೆ ಮಣೆ : ಹಿಂದಿನ ಮರ್ಮವೇನು..?'
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶರತ್ ವರ್ಗಾವಣೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗಿದೆ
ಮೈಸೂರು (ಅ.01): ಬಿ. ಶರತ್ ಅವರ ವರ್ಗಾವಣೆಯ ಹಿಂದೆ ರಾಜಕೀಯ ಲಾಭಿ ಅಡಗಿದೆ ಎಂದು ಮಾಜಿ ಮೇಯರ್ ವಿ. ಶೈಲೇಂದ್ರ ಭೀಮರಾವ್ ಆರೋಪಿಸಿದರು.
ದಸರಾ ಮಹೋತ್ಸವಕ್ಕೆ ಕೆಲವೇ ದಿನ ಬಾಕಿ ಇರುವಾಗ ಈ ವರ್ಗಾವಣೆ ಅಗತ್ಯವಿರಲಿಲ್ಲ. ಓರ್ವ ದಲಿತ ಜನಾಂಗಕ್ಕೆ ಸೇರಿದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಧಿಕಾರಿ ಮೈಸೂರಿನ ಜನತೆಗೆ ಬೇಡವಾಯಿತೆ? ಇದು ಓರ್ವ ದಕ್ಷ ಅಧಿಕಾರಿಗೆ ಮಾಡಿದ ಅಪಮಾನ. ಕನ್ನಡಿಗ ಅಧಿಕಾರಿ ಬಿ. ಶರತ್ ಅವರನ್ನು ವರ್ಗಾಯಿಸಿ ಆಂಧ್ರ ಮೂಲದ ಮಹಿಳಾ ಅಧಿಕಾರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವ ಮರ್ಮವನ್ನು ಜನತೆಗೆ ತಿಳಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ : ಸಿಎಟಿಗೆ ಅರ್ಜಿ ..
ವರ್ಗಾವಣೆ ಮೂಲಕ ಸರ್ಕಾರ ಹಗಲು ದರೋಣೆ ಮಾಡುತ್ತಿದೆ. ಇಂತಹ ಅವೈಜ್ಞಾನಿಕ ವರ್ಗಾವಣೆಯನ್ನು ಸರ್ಕಾರ ನಿಲ್ಲಿಸಬೇಕು. ದಲಿತರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿ ಇದ್ದರೆ 24 ಗಂಟೆಯೊಳಗೆ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆದೇಶ ರದ್ದುಪಡಿಸಿ, ಬಿ. ಶರತ್ ಅವರನ್ನು ಮುಂದುವರೆಸಬೇಕು ತಪ್ಪಿದರೆ ಅ. 1 ರಂದು ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಡಿ. ಪ್ರವೀಣ್ ಕುಮಾರ್, ಪ್ರಶಾಂತ್, ಶಿವಕುಮಾರ್, ಜೆ. ತಿರುಮಲೇಶ್, ಕೇಶವಮೂರ್ತಿ, ಶಶಿಧರ್ ಇದ್ದರು.