ಮೀನಿನ ಬಲೆಯೊಂದರಲ್ಲಿ ಸಿಲುಕಿ ಕಾಡಾನೆಯೊಂದು ತೀವ್ರ ಪರದಾಡಿದ್ದು ಹರಸಾಹಸಪಟ್ಟು ಕೊನೆಗೂ ಬಿಡಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೋಟ್‌ನಲ್ಲಿ ತೆರಳಿ ಆನೆ ಬಿಡಿಸಿದ್ದಾರೆ. 

ಎಚ್‌.ಡಿ.ಕೋಟೆ (ಜ.20): ಕಾಡಾನೆಯೊಂದು ನೀರಿನಲ್ಲಿ ಮೀನಿನ ಬಲೆಗೆ ಸಿಲುಕಿ ಪರದಾಡಿ, ಕೊನೆಗೆ ಹರಸಾಹಸ ಪಟ್ಟು ದಡ ಸೇರಿದ ಘಟನೆ ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನಲ್ಲಿರುವ ನುಗು ಜಲಾಶಯದ ಹಿನ್ನೀರಿನಲ್ಲಿ ಮಂಗಳವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ಮುಂಜಾನೆ ಸುಮಾರು 6.30ರ ಸಮಯದಲ್ಲಿ ಕಾಡಿನ ಒಂದು ಅಂಚಿನಿಂದ ಮತ್ತೊಂದು ಅಂಚಿಗೆ ನೀರಿನ ಮೂಲಕ ದಾಟುತ್ತಿದ್ದ ಕಾಡಾನೆಗಳ ಪೈಕಿ ಸುಮಾರು 15 ವರ್ಷದ ಗಂಡಾನೆಯೊಂದು ನೀರಿನಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಸಿಲುಕಿತ್ತು. 

3 ವರ್ಷದ ನಂತ್ರ ದೇವಾಲಯಕ್ಕೆ ಬಂದ ಆನೆ: ಪ್ರಸಾದ ತಿನ್ನಿಸಿದ IAS ಅಧಿಕಾರಿಗೆ ಟೀಕೆ

ಬಳಿಕ ಜಮೀನಿಗೆ ಹೋಗುತ್ತಿದ್ದವರ ಕಣ್ಣಿಗೆ ಆನೆಯ ಪರದಾಟ ಕಂಡು ಬಂದಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ಸಹಾಯದೊಂದಿಗೆ ಬೋಟ್‌ ಮೂಲಕ ಆನೆ ಸಮೀಪ ಹೋಗಿ ಆನೆಯ ಕಾಲಿಗೆ ಸಿಲುಕಿದ ಬಲೆಯನ್ನು ಬಿಡಿಸುವಲ್ಲಿ ಸಫಲರಾಗಿದ್ದಾರೆ. 

ಸುಮಾರು 8 ಗಂಟೆಗಳ ಸತತ ಕಾರ್ಯಚರಣೆ ಬಳಿಕ ಆನೆ ದಡ ಸೇರಿ ಕಾಡಿನತ್ತ ಮುಖ ಮಾಡಿತು.