ಕೋವಿಡ್ ಮುಂಜಾಗ್ರತೆ ಕ್ರಮಕ್ಕೆ ಸೂಚಿಸಿದ್ದು, ಜನರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಸರ್ಕಾರದ ಉದ್ದೇಶವಾಗಿದೆ. ಯಾವುದೇ ಸುಳ್ಳು, ವೈರಲ್ ಸುದ್ದಿಗಳಿಗೆ ಸಾರ್ವಜನಿಕರು ಭಯ ಬೀಳಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. 

ಯಾದಗಿರಿ (ಡಿ.29): ಕೋವಿಡ್ ಮುಂಜಾಗ್ರತೆ ಕ್ರಮಕ್ಕೆ ಸೂಚಿಸಿದ್ದು, ಜನರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಸರ್ಕಾರದ ಉದ್ದೇಶವಾಗಿದೆ. ಯಾವುದೇ ಸುಳ್ಳು, ವೈರಲ್ ಸುದ್ದಿಗಳಿಗೆ ಸಾರ್ವಜನಿಕರು ಭಯ ಬೀಳಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ಇಲ್ಲಿನ ಸಪ್ತಗಿರಿ ಕಲ್ಯಾಣ ಮಂಟಪದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಕೋವಿಡ್ ಹೊಸ ತಳಿ ಜೆನ್-1 ಬಗ್ಗೆ ಯಾವುದೇ ಭಯ ಬೇಡ, ಬದಲಾಗಿ ಮುಂಜಾಗ್ರತೆ ಕ್ರಮ ಅವಶ್ಯಕ ಎಂದರು.

Add Asianetnews Kannada as a Preferred SourcegooglePreferred

ಈಗಾಗಲೇ ಆರೋಗ್ಯ ಇಲಾಖೆ ಹಾಗೂ ಸಂಬಂಧಿಸಿದ ಸಚಿವರೊಡನೆ ಕ್ಯಾಬಿನೆಟ್ ಸಬ್ ಕಮಿಟಿ ಜರುಗಿದೆ. ಸಭೆಯಲ್ಲಿ ಕೋವಿಡ್ ಮುಂಜಾಗ್ರತೆ ಕ್ರಮಕ್ಕೆ ಸೂಚಿಸಿದೆ ಎಂದು ಹೇಳಿದರು. ಯಾದಗಿರಿ ನಗರದಲ್ಲಿರುವ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಖಾಲಿ ಇರುವ ವೈದ್ಯರ ಹುದ್ದೆ ಹಾಗೂ ಇನ್ನಿತರ ವರ್ಗದ ಹುದ್ದೆ ಶೀಘ್ರ ಭರ್ತಿ ಮಾಡಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಕೊರೋನಾ ಚಿಕಿತ್ಸೆಯಲ್ಲಿ ಪ್ರಮಾದ ಆಗದಂತೆ ಎಚ್ಚರವಹಿಸಿ: ‘ರಾಜ್ಯದಲ್ಲಿ ಮೊದಲ ಹಾಗೂ ಎರಡನೇ ಕೊರೋನಾ ಅಲೆ ವೇಳೆ ಉಂಟಾಗಿದ್ದ ಪ್ರಮಾದಗಳು ಮರುಕಳಿಸಬಾರದು. ಈ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ್‌ ಪ್ರಕಾಶ್‌ ಪಾಟೀಲ್‌ ಅವರು ವಿಕ್ಟೋರಿಯಾ ಹಾಗೂ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಿಎಂ, ಪಿಎಂ ಆಗೋ ಯೋಗ್ಯತೆ ಮಲ್ಲಿಕಾರ್ಜುನ ಖರ್ಗೆಗಿದೆ: ಸಚಿವ ಶರಣಬಸಪ್ಪ ದರ್ಶನಾಪುರ

ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ವಿಕ್ಟೋರಿಯಾ ಹಾಗೂ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಭೇಟಿ ನೀಡಿ ಅವರು ಸಿದ್ಧತೆಗಳನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಕಳೆದ ಬಾರಿ ಸೂಕ್ತ ಚಿಕಿತ್ಸೆ ಇಲ್ಲದೆ ಜನರು ಪರದಾಡುವುದನ್ನು ನೋಡಿದ್ದೇವೆ. ಅದು ಮರುಕಳಿಸಬಾರದು ಎಂದರು. ಜತೆಗೆ, ಈಗಾಗಲೇ ಕೈಗೊಂಡಿರುವ ಪೂರ್ವ ಸಿದ್ಧತೆ ಖಾತ್ರಿಪಡಿಸಿಕೊಳ್ಳಲು ಮತ್ತೊಮ್ಮೆ ಅಣಕು ಪ್ರದರ್ಶನ (ಮಾಕ್‌ ಡ್ರಿಲ್‌) ಮಾಡುವಂತೆ ಸೂಚಿಸಿರುವುದಾಗಿ ತಿಳಿಸಿದರು. ತಾಂತ್ರಿಕ ಸಲಹಾ ಸಮಿತಿಯು ಡಿ.26ರಂದು ಮತ್ತೊಮ್ಮೆ ಸಭೆ ನಡೆಸಲಿದ್ದು ಮುಂದೆ ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ನಿರ್ಧಾರ ಮಾಡಲಿದೆ ಎಂದು ಇದೇ ವೇಳೆ ಹೇಳಿದರು.