*  ಧ್ಯಾನಸ್ಥ ಸ್ಪೀಕರ್- ಮತ್ತು ಆಧ್ಯಾತ್ಮಿಕ ಜಿಜ್ಞಾಸೆ*  ಸ್ಪೀಕರ್ ಕಾಗೇರಿ-ಕೃಷ್ಣಾಪುರ ಶ್ರೀ ಹೀಗೊಂದು ಚುಟುಕು ಸಂವಾದ *  ನಮ್ಮೊಳಗಿರುವ ಭಗವಂತನನನ್ನು ಅರಿಯುವ ಬಗೆ ಹೇಗೆ ?  

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಡುಪಿ(ಏ.20):  ಮಂಗಳವಾರ ಕಾರ್ಯನಿಮಿತ್ತ ಉಡುಪಿಗೆ(Udupi) ಭೇಟಿ ನೀಡಿದ್ದ ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು(Vishweshwar Hegde Kageri) ಶ್ರೀ ಕೃಷ್ಣ ಮಠಕ್ಕೂ(Sri Krishna Matha) ಭೇಟಿ ನೀಡಿದರು. ದೇವರ ದರ್ಶನ ಪಡೆದು ಒಂದಷ್ಟು ಹೊತ್ತು ಮಧ್ವಾಚಾರ್ಯರ ಮೂಲ ಸಿಂಹಾಸನ ಸರ್ವಜ್ಞ ಪೀಠದೆದುರು ಒಂಟಿಯಾಗಿ ಕುಳಿತು ಧ್ಯಾನವನ್ನೂ ನಡೆಸಿದರು. ಬಳಿಕ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿನಂದ ಅನುಗ್ರಹ ಪ್ರಸಾದ ಸ್ವೀಕರಿಸಿದರು. ಈ ವೇಳೆ ಶ್ರೀಪಾದರೊಂದಿಗೆ ಅವರು ಚುಟುಕಾಗಿ ದೇವರ ಅರಿವಿನ ಬಗೆಗೆ ಆತ್ಮೀಯ ಸಂವಾದ ನಡೆಸಿದರು. ಕಾಗೇರಿಯವರ ಪ್ರಶ್ನೆಯಿಂದ ಒಂದು ಕ್ಷಣ ಅಚ್ಚರಿಗೊಂಡ ಶ್ರೀಗಳು ನಗುತ್ತಲೇ ಅವರನ್ನು ದೃಷ್ಟಿಸಿದರು ‌.ಬಳಿಕ ಸಂತೋಷದಿಂದಲೇ ಉತ್ತರಿಸಿದರು. 

ಸಂವಾದ ಹೀಗಿತ್ತು:

ಕಾಗೇರಿ: ಸ್ವಾಮೀ ಕೃಷ್ಣನ ದರ್ಶನ ಮತ್ತು ತಮ್ಮ ಭೇಟಿಯಿಂದ ತುಂಬ ಸಂತೋಷವಾಗಿದೆ . ರಾಜ್ಯ ವಿಧಾನಸಭಾಧ್ಯಕ್ಷನಾಗಿ ನಾಡಿನ ಒಳಿತಿಗೆ ಕೆಲಸಮಾಡಲು ಹೆಚ್ಚು ಶಕ್ತಿ ಲಭಿಸುವಂತೆ ಆಶೀರ್ವದಿಸಬೇಕು 
ಸ್ವಾಮೀಜಿ: (ನಗುತ್ತಲೇ ) ನಮ್ಮ ಆಶೀರ್ವಾದ ಯಾವಾಗಲೂ ಇದ್ದೇ ಇದೆ . ಆದ್ರೆ ಅದಕ್ಕಿಂತಲೂ ಹೆಚ್ಚಾಗಿ ಧರ್ಮದ ಮಾರ್ಗದಲ್ಲಿ ತಾವು ನಡೆಯುತ್ತಿರುವಾಗ ಸಿಗುವ ಶ್ರೇಯಸ್ಸು ಯಾವಾಗಲೂ ತಮಗೆ ರಕ್ಷೆಯಾಗಿರ್ತದೆ . ಆ ಮಾರ್ಗದಿಂದ ವಿಚಲಿತರಾಗಬೇಡಿ ಅಷ್ಟೆ

Karnataka Mutt Commission Row ದಿಂಗಾಲೇಶ್ವರ ವಿರುದ್ಧ ಕರಾವಳಿಯ ಮಠಾಧೀಶರುಗಳ ಕಿಡಿ

ಕಾಗೇರಿ: ಸ್ವಾಮೀ ನಮ್ಮೊಳಗಿರುವ ಭಗವಂತನನನ್ನು ಅರಿಯುವ ಬಗೆ ಹೇಗೆ ? 

ಸ್ವಾಮೀಜಿ: (ಮತ್ತೆ ಮುಗುಳ್ನಗು ) ಜಗತ್ತಿನ(World0 ಪ್ರತೀ ಕ್ಷಣದ ವಿದ್ಯಮಾನಗಳು ಮತ್ತು ಚರ್ಯೆಗಳಲ್ಲಿ ಕಾಣದ ಶಕ್ತಿಯೊಂದರ ಪಾತ್ರ ಇದೆ ಎನ್ನುವ ಪ್ರಜ್ಞೆ ಮತ್ತು ಅದೇ ಶಕ್ತಿ ನನ್ನೊಳಗೂ ಇದ್ದು ನನ್ನನ್ನೂ ನಿಯಂತ್ರಿಸುತ್ತಿದೆ ಎನ್ನುವ ಅರಿವಿದ್ದರೆ ಒಳ್ಳೆಯದು .

ಕಾಗೇರಿ: ಅದೇ ಕೇಳೋದು ಅದು ಹೇಗೆ ಸಾಧ್ಯ? 

ಸ್ವಾಮೀಜಿ: ಯಾವಾಗಲೂ ಅಂತರಂಗದ ಜಾಗೃತಿ ಇದ್ದಾಗ ಆ ಅರಿವಾಗ್ತದೆ. ಆಗ ನಮ್ಮ ನಡೆಗಳ ಬಗ್ಗೆಯೂ ಎಚ್ಚರ ಇರ್ತೇವೆ. ಆದ್ರೆ ನಾವು ಬಹಿರಂಗದ ಆಕರ್ಷಣೆಗಳಲ್ಲಿ ಹೆಚ್ಚು ವ್ಯಸ್ತರಾಗ್ತೇವೆ. ಆ ಬಗೆಗಿನ ಜಾಗೃತಿಯೇ ನಮಗೆ ಹೆಚ್ಚಾಗಿದೆ. ಆದ್ದರಿಂದ ಅಂತರಂಗದ ಜಾಗೃತಿ ನಮ್ಮಲ್ಲಿ ಕ್ಷೀಣವಾಗಿದೆ. ಆಗ ಒಳಗಿರುವ ದೇವರ(God) ಅರಿವು ಅಸಾಧ್ಯ .

ಕಾಗೇರಿ: ಸ್ವಾಮೀ ಏನ್ಮಾಡ್ಬೇಕು ? 

ಸ್ವಾಮೀಜಿ: ಒಂದು ಸಂಸ್ಕಾರ ಮತ್ತೊಂದು ಪ್ರಾರಬ್ಧ ಕರ್ಮಗಳು ನಮ್ಮ ಜೀವನವನ್ನು ನಿರ್ಧಿರಿಸ್ತದೆ. ಅಂತರಂಗದ ಬಗೆಗಿನ ಅರಿವಿಗೂ ಇದೇ ಕಾರಣ. ಒಳ್ಳೆಯ ಸಂಸ್ಕಾರ ಒಳ್ಳೆಯ ಪ್ರಾರಬ್ಧ ಕರ್ಮ ಫಲ ಇದ್ದಾಗ ದೇವರನ್ನು ಅರಿಯುವುದಕ್ಕೆ ಬೇಕಾದ ಮನಸ್ಥಿತಿ ಶ್ರದ್ಧೆ ಮತ್ತು ದೇವರ ಅರಿವಿನೆಡೆಗೆ ನಡೆಯುವ ಸಮಯವನ್ನೂ ಹೊಂದಿಸಿಕೊಳ್ಬೋದು. ಇವತ್ತು ಅಂಥಾ ಯಾವುದಕ್ಕೂ ನಮಗೆ ಸಮಯವೇ ಇರಲ್ಲ, ಕಾರಣ ಸಂಸ್ಕಾರದ ಕೊರತೆ .

Commission Allegations ಕಮಿಷನ್‌ ಆರೋಪ, ದಿಂಗಾಲೇಶ್ವರ ಶ್ರೀ ವಿರುದ್ಧ ಪಲಿಮಾರು ಶ್ರೀ ಕಿಡಿ!

ಕಾಗೇರಿ: ವರ್ತಮಾನದ ಪರಿಸ್ಥಿತಿಗಳು ಇದಕ್ಕೆ ಕಾರಣವೇ ಸ್ವಾಮೀ ?

ಸ್ವಾಮೀಜಿ: ಖಂಡಿತ ಕಾಲಧರ್ಮ ಯುಗಧರ್ಮಗಳು ಸಮಾಜವನ್ನು ಆ ಒಳಿತಿನ ಮಾರ್ಗದಲ್ಲಿ ನಮ್ಮನ್ನು ಮನ್ನಡೆಸಲು ಅಡ್ಡಿಯಾಗ್ತವೆ .‌ಆದ್ರೆ ಆ ಸವಾಲುಗಳ ನಡುವೆಯೂ ನಾವು ಅಂತರಂಗಶುದ್ಧಿಗೆ ಬೇಕಾದ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕು. ಆಗ ದೇವರ ಅನುಗ್ರಹವೂ ಸಿದ್ಧಿಸ್ತದೆ. ಒಂದಷ್ಟು ವಿಪರೀತಗಳು ಕಣ್ಣಮುಂದೆ ನಡೆಯುತ್ತಿರುವಾಗ ಬೇಸರ ಆಗ್ತದೆ. ಆದ್ರೆ ದೇವರ ದಯೆಯ ಬಗ್ಗೆ ವಿಶ್ವಾಸ ಇರಲಿ. ಎಲ್ಲ ಒಳ್ಳೇದಾಗಲಿ (ನಗು).

ಬಳಿಕ ಕಾಗೇರಿಯವರು ಶ್ರೀ ಕೃಷ್ಣಮಠದಲ್ಲೇ ಭೋಜನ ಪ್ರಸಾದ ಸ್ವೀಕರಿಸಿ ತೆರಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ ಸುರೇಶ್ ನಾಯಕ್, ಕೆ ಉದಯ್ ಕುಮಾರ್ ಶೆಟ್ಟಿ ಧಾರ್ಮಿಕ ಮುಖಂಡ ಜಿ.ವಾಸುದೇವ ಭಟ್, ವಿಷ್ಣುಪಾಡಿಗಾರ್, ಶಾಸಕ ಲಾಲಾಜಿ ಆರ್ ಮೆಂಡನ್, ಕೃಷ್ಣ ಉಪಸ್ಥಿತರಿದ್ದರು.