ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಗೆಲುವಿಗೆ ಶಕ್ತಿ ದೇವತೆ ಬಳಿ ಹರಕೆ
ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಬ್ಯರ್ರತಿಯಾಗಿ ಕಣಕ್ಕೆ ಇಳಿದಿರುವ ಕುಸುಮಾ ಗೆಲುವಿಗಾಗಿ ಶಕ್ತಿ ದೇವತೆ ಬಳಿ ಹರಕೆ ಪೂಜೆ ಮಾಡಲಾಗಿದೆ.
ಕೋಲಾರ (ಅ.15): ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಬೆಂಗಳೂರು ಆರ್ಆರ್ ನಗರ ಉಪ ಚುನಾವಣೆಗೆ ಸ್ಪರ್ಧಿಸಿದ್ದು ಅವರ ಗೆಲುವಿಗಾಗಿ ಹಾರೈಸಿ ಡಿ.ಕೆ. ರವಿ ಅಭಿಮಾನಿ ಬಳಗದಿಂದ ನಗರದ ಕೋಲಾರಮ್ಮ ದೇವಾಲಯದಲ್ಲಿ 501 ತೆಂಗಿನಕಾಯಿ ಒಡೆದು ಪೂಜೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಡಿ.ಕೆ.ರವಿ ಅಭಿಮಾನಿಗಳ ಬಳಗದ ರಾಜ್ಯಾಧ್ಯಕ್ಷ ಸೀತಿಹೊಸೂರು ಮುರಳಿಗೌಡ ಮಾತನಾಡಿ, ದಿ.ಡಿ.ಕೆ. ರವಿ ಅವರ ಪತ್ನಿ ಆರ್.ಆರ್. ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವುದು ಹರ್ಷದ ಸಂಗತಿಯಾಗಿದೆ. ತಮ್ಮ ಗಂಡ ಡಿ.ಕೆ. ರವಿ ಅವರ ಹೆಸರನ್ನು ಬಳಸಿಕೊಳ್ಳುತ್ತಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಅವರಿಗೂ ಹಕ್ಕಿದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.
RR ನಗರ ಬೈ ಎಲೆಕ್ಷನ್: ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ ಬಿಗ್ ಶಾಕ್ ..
ರವಿ ಅವರು ಡಿಸಿ ಆಗಿದ್ದಾಗ ಬಡವರು, ನಿರ್ಗತಿಕರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಿಕೊಡಬೇಕೆಂದು ಕನಸು ಕಂಡಿದ್ದರು. ಅವರ ಕನಸುಗಳನ್ನು ಅವರ ಪತ್ನಿ ಕುಸುಮಾ ಅವರು ಮುಂದುವರೆಸಿಕೊಂಡು ಹೋಗುತ್ತಾರೆ ಅನ್ನುವ ವಿಶ್ವಾಸ ಡಿ.ಕೆ.ರವಿ ಅವರ ಅಭಿಮಾನಿಗಳ ಸಂಘದ್ದಾಗಿದೆ. ಇದೀಗ ರಾಜಕೀಯದ ಮೂಲಕ ಸಮಾಜ ಸೇವೆಗೆ ಕಾಲಿಡಲಿರುವ ಕುಸುಮಾ ಅವರು ತಮ್ಮ ಮುಂದಿನ ದಿನಗಳಲ್ಲಿ ಮತ್ತಷ್ಟುಎತ್ತರಕೆ ಬೆಳೆಯಲಿ ಎಂದು ಆಶಿಸಿದರು.
ಡಿ.ಕೆ.ರವಿ ಹೆಸರನ್ನು ಬಳಸಿಕೊಂಡರೆ ಒಳ್ಳೆಯದಾಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಗೆ ಟಾಂಗ್ ನೀಡಿದ ಮುರಳಿಗೌಡ, ಶೋಭ ಕರಂದ್ಲಾಜೆ ಅವರು ಒಬ್ಬ ಹೆಣ್ಣಾಗಿ ಇನ್ನೊಂದು ಹೆಣ್ಣು ಮಗಳನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿರುವುದು ಅವರ ಘನತೆಗೆ ತಕ್ಕದ್ದಲ್ಲ ಎಂದರು.
ಈ ಸಂದರ್ಭದಲ್ಲಿ ಡಿ.ಕೆ.ರವಿ ಅಭಿಮಾನಿ ಬಳಗದ ಮುಖಂಡರಾದ ಖಾದ್ರಿಪುರ ಮುರಳಿ, ಚರಣ್, ಅರಾಭಿಕೊತ್ತನೂರು ಶ್ರೀನಿವಾಸ್, ಅರುಣ್ ಮತ್ತಿತರರು ಉಪಸ್ಥಿತರಿದ್ದರು.