ಸತೀಶ್ ಸಾವಿರ ಎಕ್ರೆ ಭೂಮಿ ಹೊಡೆದಿದ್ದಾರೆ: ತಮ್ಮನ ವಿರುದ್ಧ ಬಾಂಬ್ ಸಿಡಿಸಿದ ಅಣ್ಣ!
ಸತೀಶ್ ಸಾವಿರ ಎಕ್ರೆ ಭೂಮಿ ಹೊಡೆದಿದ್ದಾರೆ: ರಮೇಶ್| ಸಹೋದರನ ವಿರುದ್ಧ ಗಂಭೀರ ಆರೋಪ
ಗೋಕಾಕ[ಸೆ.08]: ಸಹೋದರ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಕಿಡಿಕಾರಿದ್ದಾರೆ. ಬುದ್ಧ, ಬಸವನ ಹೆಸರಲ್ಲಿ ಸತೀಶ ಜಾರಕಿಹೊಳಿ ಜನರಿಗೆ ಮೋಸ ಮಾಡಿ ಒಂದು ಸಾವಿರ ಎಕರೆ ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದ ತಮ್ಮ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿ, ಸತೀಶ್ ಜಾರಕಿಹೊಳಿ ಜನರಿಗೆ ಮೋಸ ಮಾಡಿ ಒಂದು ಸಾವಿರ ಎಕರೆ ಹೊಡೆದಿದ್ದಾರೆ. ಆದರೆ, ನಾನೆಂದಿಗೂ ಯಾರಿಗೂ ಈ ರೀತಿಯ ಮೋಸ ಮಾಡಿಲ್ಲ. ಸತೀಶ್ ಜಾರಕಿಹೊಳಿ ಗೆಳೆಯರು ತುತ್ತೂರಿ ಬಾರಿಸುವವರು, ಅವರು ಏನೇ ಮಾಡಿದರೂ ಅದನ್ನು ಎದುರಿಸಲು ಎದುರಿಸಲು ಸಿದ್ಧ ಎಂದರು.
ನನ್ನ ಹಾಗೂ ನನ್ನ ಮತ್ತೊಬ್ಬ ಸಹೋದರ ಲಖನ್ ಜಾರಕಿಹೊಳಿ ನಡುವೆ ಸತೀಶ್ ಜಾರಕಿಹೊಳಿ ಜಗಳ ತಂದಿಟ್ಟಿದ್ದಾರೆ. ಇಬ್ಬರನ್ನೂ ಸೋಲಿಸಿ ಮುಂದೆ ಗೋಕಾಕ ಕ್ಷೇತ್ರಕ್ಕೆ ಬರುವ ಯೋಜನೆಯನ್ನು ಸತೀಶ್ ಜಾರಕಿಹೊಳಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಕುತಂತ್ರ ನಡೆಸುತ್ತಿದ್ದಾರೆæ. ಲಖನ್ ಜಾರಕಿಹೊಳಿ ಬಲಿಪಶು ಮಾಡಲು ಯತ್ನಿಸುತ್ತಿದ್ದಾರೆ. ಯಮಕನಮರಡಿ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಅವರನ್ನು ಜನ ಒದ್ದು ಓಡಿಸಿದ್ದಾರೆ. ಹೀಗಾಗಿ ಅವರು ಗೋಕಾಕ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದರು.
ನನ್ನ ಆಪ್ತಸಹಾಯಕರನ್ನು ಬೈಯ್ಯುವ ಮಟ್ಟಿಗೆ ಸತೀಶ್ ಜಾರಕಿಹೊಳಿ ಬಂದಿದ್ದಾರೆ. ಗಂಡಸೇ ಆಗಿದ್ದರೆ ಯಮಕನಮಡಿ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿ ನೋಡೋಣ. ನಾಳೆ ಉಪಚುನಾವಣೆ ಬಂದರೂ ನಾನು ಎದುರಿಸಲು ಸಿದ್ಧ ಎಂದು ಇದೇ ವೇಲೆ ರಮೇಶ್ ಜಾರಕಿಹೊಳಿ ಸಹೋದರನಿಗೆ ಸವಾಲ್ ಹಾಕಿದರು.