ಹನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಮೂರ್ತಿ ಅವರನ್ನು ನೇಮಕ ಮಾಡುವಂತೆ ಹೈಕೋರ್ಟ್‌ ಹಾಗೂ ಸರ್ಕಾರ ನೀಡಿದ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. 

ಹನೂರು(ಅ.12): ಹನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಮೂರ್ತಿ ಅವರನ್ನು ನೇಮಕ ಮಾಡುವಂತೆ ಹೈಕೋರ್ಟ್‌ ಹಾಗೂ ಸರ್ಕಾರ ನೀಡಿದ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ಹನೂರು ಪ.ಪಂ.ಯಿತಿ ಕಚೇರಿಯಲ್ಲಿ ಮುಖ್ಯಾಧಿಕಾರಿಯಾಗಿದ್ದ ಮೂರ್ತಿ ಅವರಿಗೆ ಹೊಸ ಹುದ್ದೆ ತೋರಿಸದೆ ಹಾಲಿ ಇರುವ ಹುದ್ದೆಯಿಂದ ವರ್ಗಾವಣೆಗೊಳಿಸಿದ್ದ ಹಿನ್ನೆಲೆ ಹೈಕೋರ್ಟ್‌ನಲ್ಲಿ ತಕರಾರು ಸಲ್ಲಿಸಿದ್ದರು. ತಕರಾರು ಅರ್ಜಿ ಮಾನ್ಯ ಮಾಡಿ, ಹೈಕೋರ್ಟ್‌ ವಿಭಾಗೀಯ ಪೀಠ ವಿಶೇಷ ಪ್ರಕರಣವಾಗಿ ಪರಿಗಣಿಸಿ ಸಾಮಾನ್ಯ ವರ್ಗಾವಣೆ ಅವಧಿಯ ನಂತರ ಯಾವುದೇ ಹುದ್ದೆಗಳು ಖಾಲಿ ಇಲ್ಲದ ವೇಳೆ ವರ್ಗಾವಣೆ ಆದೇಶ ಹೊರಡಿಸಬಾರದು. ಆದೇಶ ಹೊರಡಿಸುವ ಮುನ್ನ ನೌಕರರಿಗೆ ಕಡ್ಡಾಯ ಹೊಸ ಹುದ್ದೆ ನಿಗದಿ ಮಾಡಬೇಕು ಎಂದು ಹೈಕೋರ್ಟ್‌ ಮಹತ್ವದ ತೀರ್ಪನ್ನು ನ್ಯಾ. ಎಸ್‌.ಸುನಿಲ್‌ದತ್‌ ಯಾದವ್‌ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

Add Asianetnews Kannada as a Preferred SourcegooglePreferred

ಹೈಕೋರ್ಟ್‌ ಆದೇಶದಲ್ಲಿ ಏನಿದೆ: 

ಮೂರ್ತಿಯವರನ್ನು ವರ್ಗಾಯಿಸಿ, ಆ ಹುದ್ದೆಗೆ ಪರಶಿವಯ್ಯರನ್ನು ನಿಯೋಜಿಸಿ 2021ರ ಡಿಸೆಂಬರ್‌ 23ರಂದು ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿದ ಹೈಕೋರ್ಟ್‌ ಅರ್ಜಿದಾರರನ್ನು ಡಿ.23ರ ಆದೇಶಕ್ಕೂ ಮೊದಲಿದ್ದ ಹುದ್ದೆಗೆ ಮರು ನಿಯೋಜಿಸಿ ಆದೇಶ ಹೊರಡಿಸಲಾಗಿದೆ.

ಅಧ್ಯಕ್ಷೆ ಮಾಡ್ತೇನೆಂದು ಬೀದೀಲಿ ನಿಲ್ಲಿಸಿದ್ರು: ಕಣ್ಣೀರಿಟ್ಟ ಕೈ ನಾಯಕಿ

ಹೈಕೋರ್ಟ್‌ 2022ರ ಅ.18ರಂದು ಹನೂರು ಪ.ಪಂ.ಮುಖ್ಯಾಧಿಕಾರಿಯಾಗಿ ಮೂರ್ತಿ ಅವರನ್ನು ಮುಂದುವರಿಸಬೇಕೆಂದು ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಮುಖ್ಯಾಧಿಕಾರಿ ಮೂರ್ತಿ ಅವರು ಕಚೇರಿಗೆ ತೆರಳಿ ಕೋರ್ಟ್‌ ಆದೇಶ ಪ್ರತಿ ಹಾಗೂ ಮನವಿ ಪತ್ರ ಲಗತ್ತಿಸಿ ಮುಖ್ಯಾಧಿಕಾರಿ ಹುದ್ದೆಗೆ ಮುಂದುವರೆಯಲು ಅನುವು ಮಾಡಿಕೊಡುವಂತೆ ಮನವಿ ನೀಡಿದ್ದರು. ಆದರೂ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಯೋಜನಾ ನಿರ್ದೇಶಕರು ಇಲ್ಲ ಸಲ್ಲದ ಸಬೂಬು ಹೇಳಿ ಸರ್ಕಾರದಿಂದ ಅನುಮತಿ ಪಡೆಯಬೇಕೆಂದು ತಿಳಿಸಿ ಸುಮ್ಮನಾಗಿದ್ದರು.

ಸರ್ಕಾರದ ಆದೇಶಕ್ಕೂ ಕಿಮ್ಮತ್ತಿಲ್ಲ: 

ಹೈಕೋರ್ಟ್‌ ಆದೇಶದ ಅನ್ವಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್‌, ಮೂರ್ತಿ ಸಮುದಾಯ ಸಂಘಟನಾಧಿಕಾರಿ ಇವರನ್ನು 2022 ಅ.29 ರಂದು ಪ.ಪಂ. ಹನೂರು, ಚಾಮರಾಜನಗರ ಜಿಲ್ಲೆ, ಪರಶಿವಯ್ಯ ಇವರ ಸ್ಥಳಕ್ಕೆ ಸ್ವಂತವೇತನ ಶ್ರೇಣಿಯ ಮೇಲೆ ವರ್ಗಾವಣೆಗೊಳಿಸಿದ್ದರು.

ಹೈಕೋರ್ಟ್‌ ಹಾಗೂ ಸರ್ಕಾರದ ಆದೇಶ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಿ 12 ದಿನಗಳು ಕಳೆಯುತ್ತಿದ್ದರೂ ಇದುವರೆಗೂ ಮುಖ್ಯಾಧಿಕಾರಿ ಮೂರ್ತಿಯವರಿಗೆ ಕರ್ತವ್ಯಕ್ಕೆ ಅನುವು ಮಾಡಿಕೊಡದೇ ಇರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದಂತಾಗಿದೆ.