ಸಮರ್ಥ ನಾಯಕರಿಲ್ಲದೇ ಸೊರಗಿದ ಕಾಂಗ್ರೆಸ್..!
* ಜಿಪಂ-ತಾಪಂ, ಮಹಾನಗರ ಪಾಲಿಕೆ ಚುನಾವಣೆ ಹೇಗೆ ನಿರ್ವಹಿಸಲಿದೆ ಕಾಂಗ್ರೆಸ್?
* ಕ್ಷೇತ್ರಕ್ಕೆ ತಡವಾಗಿ ಆಗಮಿಸಿರುವ ಮಾಜಿ ಸಚಿವ ಸಂತೋಷ ಲಾಡ್ಗೆ ಹಲವು ಸವಾಲು
* ಬಿಜೆಪಿ ಪಕ್ಷದ ವಿರುದ್ಧ ಒಗ್ಗೂಡಿ ಕೆಲಸ ಮಾಡುವಲ್ಲಿ ಹಿಂದೆ ಬಿದ್ದ ಕೈ ನಾಯಕರು
ಬಸವರಾಜ ಹಿರೇಮಠ
ಧಾರವಾಡ(ಜು.21): ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಧಾರವಾಡ ಜಿಲ್ಲೆಯಲ್ಲೀಗ ಪಕ್ಷವನ್ನು ಮುನ್ನಡೆಸುವ ಹಾಗೂ ಸಂಘಟಿಸುವ ಒಬ್ಬರೂ ಸಮರ್ಥ ನಾಯಕರು ಇಲ್ಲದಂತಾಗಿರುವುದು ಸೋಜಿಗದ ಸಂಗತಿ.
ಪ್ರಸ್ತುತ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಹು-ಧಾ ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಶುರುವಾಗಿದ್ದರೂ ಕಾಂಗ್ರೆಸ್ ಮಾತ್ರ ಇನ್ನೂ ಸಿದ್ಧವಾಗದೇ ಇರುವುದು ಈ ಚುನಾವಣೆಗಳನ್ನು ಎದುರಿಸುವುದು ಪಕ್ಷಕ್ಕೆ ಮತ್ತಷ್ಟು ಸವಾಲು ತಂದೊಡ್ಡಿದೆ.
ಅವಳಿ ನಗರದಲ್ಲಿ ಪ್ರಸಾದ ಅಬ್ಬಯ್ಯ, ಗ್ರಾಮೀಣದಲ್ಲಿ ಕುಸುಮಾ ಶಿವಳ್ಳಿ ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಮತ್ತೆಲ್ಲೂ ಶಾಸಕರಿಲ್ಲ. ಈ ಇಬ್ಬರೂ ಶಾಸಕರು ತಮ್ಮ ಕ್ಷೇತ್ರ ಹೊರತುಪಡಿಸಿ ಜಿಲ್ಲೆಯನ್ನು ಮುನ್ನೆಡೆಸುವ ಸಾಮರ್ಥ್ಯ ಹೊಂದಿಲ್ಲ. ಮಾಜಿ ಸಚಿವ ವಿನಯ ಕುಲಕರ್ಣಿ, ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದು, ಎರಡನೇ ಹಂತದ ಯಾವ ನಾಯಕರೂ ಇಲ್ಲದ ಕಾರಣ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ರೀತಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಲಾಡ್ ಎಂಟ್ರಿ:
ಮಾಜಿ ಸಚಿವ ಸಂತೋಷ ಲಾಡ್ ಅವರು ತಡವಾಗಿಯಾದರೂ ಮತ್ತೆ ಪಕ್ಷ ಸಂಘಟನೆಗೆ ಇಳಿದಿದ್ದಾರೆ. ಅವರಿಂದ ಜಿಲ್ಲೆಯ ಪಕ್ಷದ ಸಂಘಟನೆ ಸಾಧ್ಯವೂ ಇದೆ. ಆದರೆ, ಅವರ ಕಾರ್ಯ ಬರೀ ಕಲಘಟಗಿಗೆ ಮಾತ್ರ ಸೀಮಿತವಾಗಿದೆ. ಇಷ್ಟುದಿನಗಳ ಕಾಲ ಕ್ಷೇತ್ರಕ್ಕೆ ಬರದಿರುವ ಕಾರಣ ಅವರು ಕ್ಷೇತ್ರದಲ್ಲಿಯೇ ಇದ್ದು ಪಕ್ಷದ ಸಂಘಟನೆಗೆ ಮುಂದಾದರೂ ಮತದಾರರು ಅವರನ್ನು ಕೂಡಲೇ ಒಪ್ಪಿಕೊಳ್ಳುವುದು ಕಷ್ಟ. ಅಲ್ಲದೇ, ಲಾಡ್ ಅವರ ಗೈರು ಹಾಜರಿಯಲ್ಲಿ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ತಮ್ಮ ಕಾರ್ಯಗಳನ್ನು ಕಲಘಟಗಿಯಲ್ಲಿ ವಿಸ್ತರಿಸಿದ್ದರು. ಇದೀಗ ಲಾಡ್ ಅವರು ಮತ್ತೆ ಎಂಟ್ರಿ ಕೊಟ್ಟ ಕಾರಣ ನಾಗರಾಜ ಛಬ್ಬಿ ಬಣವನ್ನು ಸಂತೈಸುವುದೇ ಅವರಿಗೆ ದೊಡ್ಡ ತಲೆನೋವಾಗಿದೆ.
'ಸ್ಪಷ್ಟ ಬರದಿದ್ದರೂ ಬರದಿದ್ರೂ 2023ಕ್ಕೆ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ'
ಇನ್ನು, ಕಾಂಗ್ರೆಸ್ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾಧ್ಯಕ್ಷರಿಂದ ಪಕ್ಷದ ಸಂಘಟನೆ ಹಾಗೂ ಚುನಾವಣೆ ಎದುರಿಸುವುದು ಕಷ್ಟ ಸಾಧ್ಯ. ಹೀಗಾಗಿ ಇಡೀ ಜಿಲ್ಲೆಯನ್ನು ಮುನ್ನಡೆಸುವ ಮುಖಂಡರ ಕೊರತೆ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗಿಯೇ ಇದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಇಲ್ಲ ಎನ್ನುವಂತಿಲ್ಲ. ಇರುವ ನಾಯಕರು ತಮ್ಮ -ತಮ್ಮ ಕ್ಷೇತ್ರಕ್ಕೇ ಸೀಮಿತವಾಗಿರುವುದೇ ಪಕ್ಷ ಸಂಘಟನೆಗೊಳ್ಳಲು ತುಸು ತೊಡಕಾಗಿದೆ. ಇದರೊಂದಿಗೆ ಅಧಿಕಾರ ಕಳೆದುಕೊಂಡರೂ ಬುದ್ಧಿ ಕಲಿಯದ ಕೈ ನಾಯಕರು ಬಿಜೆಪಿ ಪಕ್ಷದ ವಿರುದ್ಧ ಒಗ್ಗೂಡಿ ಕೆಲಸ ಮಾಡುವಲ್ಲಿ ಹಿಂದೆ ಬಿದ್ದಿದ್ದಾರೆ. ತಮ್ಮ -ತಮ್ಮಲ್ಲಿಯೇ ಗುಂಪುಗಾರಿಕೆಯಿಂದ ಪಕ್ಷ ಅಧೋಗತಿಗೆ ಇಳಿದಿದೆ.
ಕುಂದದ ಉತ್ಸಾಹ:
ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇದ್ದರೂ, ಸಮರ್ಥ ನಾಯಕರು ಇಲ್ಲದೇ ಇದ್ದರೂ ಮೂಲ ಕಾರ್ಯಕರ್ತರಲ್ಲಿ ಪಕ್ಷದ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಉತ್ಸಾಹ ಕುಂದಿಲ್ಲ. ಪಕ್ಷಕ್ಕಾಗಿ ನಾವಿನ್ನೂ ಶ್ರಮಿಸುತ್ತೇವೆ ಎನ್ನುತ್ತಿದ್ದಾರೆ. ಆದ್ದರಿಂದ ಪಕ್ಷದಲ್ಲಿ ಮುಖಂಡರು ಎನಿಸಿಕೊಂಡವರು ಬಿಜೆಪಿಯ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಪಕ್ಷವನ್ನು ಸಂಘಟಿಸಿಕೊಂಡು ಹೋಗಿದ್ದೇ ಆದಲ್ಲಿ ಬರುವ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಜಿಲ್ಲೆಯಲ್ಲಿ ಉತ್ತಮ ಭವಿಷ್ಯ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.