ಶ್ರೀರಂಗಪಟ್ಟಣದಲ್ಲಿ ಕಲಡ್ಕ ಪ್ರಭಾಕರ ಭಟ್ ನಡೆಸಿದ ಸರ್ಕ್ಯೂಟ್ ಜಾತ್ರೆಗೆ ಅನುಮತಿ ನೀಡಿದ ಮಂಡ್ಯ ಜಿಲ್ಲಾಡಳಿತದ ವಿರುದ್ಧ ರಾಜ್ಯ ಸರ್ಕಾರವು ಕ್ರಮ ಜರುಗಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದರು.

ಮೈಸೂರು : ಶ್ರೀರಂಗಪಟ್ಟಣದಲ್ಲಿ ಕಲಡ್ಕ ಪ್ರಭಾಕರ ಭಟ್ ನಡೆಸಿದ ಸರ್ಕ್ಯೂಟ್ ಜಾತ್ರೆಗೆ ಅನುಮತಿ ನೀಡಿದ ಮಂಡ್ಯ ಜಿಲ್ಲಾಡಳಿತದ ವಿರುದ್ಧ ರಾಜ್ಯ ಸರ್ಕಾರವು ಕ್ರಮ ಜರುಗಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನುಮ ಜಯಂತಿಯ ಹೆಸರಿನಲ್ಲಿ ಶ್ರೀ ರಂಗಪಟ್ಟಣದ ಜಾಮೀಯ ಮಸೀದಿಯ ಬಳಿ ಸರ್ಕ್ಯೂಟ್ ಯಾತ್ರೆ ಅಂತ ನಡೆಸಲು ಅನುಮತಿ ಕೊಟ್ಟವರು ಯಾರು ಎಂದು ಕಿಡಿಕಾರಿದರು.

ಯಾತ್ರೆ ಹೆಸರಿನಲ್ಲಿ ಮಸೀದಿಯ ಒಳ ನುಗ್ಗುವ ಮತ್ತು ಗಲಭೆ ಸೃಷ್ಟಿಸುವ ಪ್ರಯತ್ನಗಳು ನಡೆದಿವೆ. ಇದಕ್ಕೆ ಅವಕಾಶ ಕೊಟ್ಟವರು ಯಾರು? ಸಾವಿರಾರು ಪೊಲೀಸರು ಇದ್ದರು ಇಂತಹ ಘಟನೆಗಳು ನಡೆಯಲು ಹೇಗೆ ಸಾಧ್ಯ? ಘಟನೆ ನಡೆದು ಇಷ್ಟು ಕಾಲವಾದರೂ ಮಂಡ್ಯ ಪೊಲೀಸರು ಯಾಕೇ ಇನ್ನೂ ಆತನನ್ನು ಬಂಧಿಸಿಲ್ಲ? ಈ ಬಗ್ಗೆ ಮಂಡ್ಯ ಎಸ್ಪಿ, ಜಿಲ್ಲಾಧಿಕಾರಿಯಿಂದ ಸರ್ಕಾರ ಸ್ಪಷ್ಟನೆ ಪಡೆದು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ಹಿಜಾಬ್ ನಿಷೇಧ

ಕವಲಂದೆ ಪೊಲೀಸ್ ಠಾಣೆ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ವ್ಯಕ್ತಿಯೊಬ್ಬರು ಕೇಳಿದ ಮಾತಿಗೆ ಹಿಜಾಬ್ ನಿಷೇಧ ವಾಪಸ್ ಬಗ್ಗೆ ಚಿಂತನೆ ನಡೆಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ಕಳೆದ ಕೆಲವು ತಿಂಗಳಿಂದ ಬಿಲ ಸೇರಿದ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಬಾಯಿ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ. ಹಿಜಾಬ್ ನಿಷೇದ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು, ಸಕರಾತ್ಮವಾದರೆ ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ರಾಜ್ಯದ ಬಗ್ಗೆ ಏನಾದರೂ ಕಾಳಜಿಯಿದ್ದರೆ ಪ್ರಧಾನಿ ಮೋದಿ ಅವರಿಗೆ ರಾಜ್ಯದ ಸಮಸ್ಯೆ ತಿಳಿಸುತ್ತಿದ್ದರು. ಒಂಭತ್ತೂವರೆ ವರ್ಷ ಕಳೆದರು ಬರ ಪರಿಹಾರದ ವಿಚಾರ, ಕೃಷ್ಣ ನದಿ, ಮೇಕೆದಾಟು ಬಗ್ಗೆ ಮಾತನಾಡಿಲ್ಲ. ನರೇಗಾ 8 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಬಗ್ಗೆ ನಾಚಿಕೆಯಾಗಬೇಕು. ರಾಜ್ಯಕ್ಕೆ ಬರಬೇಕಾದ ಜಿ.ಎಸ್.ಟಿ ಪಾಲನ್ನು ಕೇಳಿಲ್ಲ. ಈಗ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದಾರೆ. ಪ್ರಹ್ಲಾದ್ ಜೋಶಿ ಈ ಬಾರಿ 2 ಲಕ್ಷ ಮತ ಅಂತರದಲ್ಲಿ ಸೋಲಲಿದ್ದಾರೆ. ಜಗದೀಶ ಶೆಟ್ಟರ್ ಸೋಲಿಸಲಿದ್ದಾರೆ. ಅವರೇ ಅಭ್ಯರ್ಥಿ ಆಗಲಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಪಾಲಿಕೆ ಮಾಜಿ ಸದಸ್ಯರಾದ ಎಂ. ಶಿವಣ್ಣ, ಪ್ರದೀಪ್ ಕುಮಾರ್ ಮೊದಲಾದವರು ಇದ್ದರು.