ಕುಣಿಗಲ್‌ ಪ್ರದೇಶ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಬಹುತೇಕ ಕಡಿಮೆ ಇದೆ. ಹಾಗಾಗಿ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಜೆಡಿಎಸ್‌ ಮುಖಂಡ ಶಿವಣ್ಣ ಒತ್ತಾಯಿಸಿದ್ದಾರೆ.

ಕುಣಿಗಲ್‌ : ಕುಣಿಗಲ್‌ ಪ್ರದೇಶ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಬಹುತೇಕ ಕಡಿಮೆ ಇದೆ. ಹಾಗಾಗಿ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಜೆಡಿಎಸ್‌ ಮುಖಂಡ ಶಿವಣ್ಣ ಒತ್ತಾಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕುಣಿಗಲ್‌ಲ್ಲಿ ವಿದ್ಯುತ್‌, ನೀರಿನ ಸಮಸ್ಯೆ ಉಂಟಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿ ಕಾರಿದರು. ಕಂದಾಯ ಇಲಾಖೆಯಲ್ಲಿ ಆಗಬೇಕಾದ ಹಲವಾರು ಖಾತೆ ಪಾಣಿ ಸೇರಿದಂತೆ ವಿವಿಧ ಕಾಮಗಾರಿಗಳು ವಿಳಂಬ ಆಗುತ್ತಿವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕೆಂದರು.

ತಾಲೂಕಿನ ಹಲವಾರು ಇಲಾಖೆಗಳಲ್ಲಿ ರೈತರಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಮಾರ್ಕೋನಹಳ್ಳಿ ಜಲಾಶಯದ ನೀರನ್ನು ರಾಗಿ ಬೆಳೆಗೆ ಬಿಡಬೇಕು. ಈ ಹಿಂದೆ ಇದ್ದ ಅಚ್ಚು ಕಟ್ಟು ಪ್ರದೇಶವನ್ನೇ ಗುರಿಯಾಗಿಸಿಕೊಂಡು ಅಧಿಕಾರಿಗಳು ಲೆಕ್ಕ ನೀಡುತ್ತಿದ್ದಾರೆ. ಆದರೆ ಬಹುತೇಕ ರೈತರು ತೋಟಗಾರಿಕೆ ಬೆಳೆಗಳನ್ನು ಮಾಡಿರುವ ಪರಿಣಾಮ ಅಚ್ಚು ಕಟ್ಟು ಪ್ರದೇಶ ಕಡಿಮೆ ಬರುತ್ತದೆ ಎಂದರು.

ತಾಲೂಕಿನ ಬಹುತೇಕ ಭಾಗಗಳಲ್ಲಿ ರಾಗಿ ಬಿತ್ತನೆ ಆಗಿದೆ. ಆದರೆ ಇದುವರೆಗೂ ಕೂಡ ಮೊಳಕೆ ಆಗಿಲ್ಲ. ಹುಟ್ಟಿರುವ ರಾಗಿ ಪೈರು ಒಣಗುತ್ತಿದೆ. ಮಳೆಯ ಪ್ರಮಾಣ ಬಹುತೇಕ ಕಡಿಮೆ ಇರುವುದರಿಂದ ರೈತರಿಗೆ ಸಮಸ್ಯೆ ಉಂಟಾಗಿದೆ. ತಕ್ಷಣ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಕುಣಿಗಲ್‌ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದರು.

ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ ಶಾಸಕರು ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್‌ ಮುಖಂಡ ಡಿ. ನಾಗರಾಜಯ್ಯ ಅವರ ನೇತೃತ್ವದಲ್ಲಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮೋದೂರು ಗಂಗಾಧರ್‌, ಡಾಬಾ ರಮೇಶ್‌, ಕುಮಾರ್‌ ಬ್ರಹ್ಮ ಸೇರಿದಂತೆ ಸೇರಿದಂತೆ ಹಲವರು ಜೆಡಿಎಸ್‌ ಮುಖಂಡರು ಇದ್ದರು.