ಸಾರಿಗೆ ಸಚಿವ ಸವದಿ ರಾಜೀನಾಮೆಗೆ ಒತ್ತಾಯ
ರಾಜ್ಯದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ರಾಜೀನಾಮೆಗೆ ಒತ್ತಾಯಿಸಲಾಗಿದೆ. ತಕ್ಷಣದಿಂದಲೇ ರಾಜೀನಾಮೆ ನೀಡಬೇಕು ಎನ್ನಲಾಗಿದೆ.
ರಾಮನಗರ (ಡಿ.14): ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಮತಾ ಸೈನಿಕ ದಳ ಹಾಗೂ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೆಎಸ್ಆರ್ಟಿಸಿ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ ಉದಾಸೀನ ತೋರುತ್ತಿರುವ ಸಚಿವ ಲಕ್ಷ್ಮಣ ಸವದಿ ಕ್ರಮ ಖಂಡಿಸಿದರು.
ಕಾಂಗ್ರೆಸ್ - ಬಿಜೆಪಿಯಿಂದ ಜೆಡಿಎಸ್ ಮನೆಗೆ ಕನ್ನ ! ಪಕ್ಷ ಬಿಟ್ಟು ತೆರಳಿದ ಮುಖಂಡರು
ಈ ವೇಳೆ ಮಾತನಾಡಿದ ಸಮತಾ ಸೈನಿಕ ದಳದ ಜಿ.ಗೋವಿಂದಯ್ಯ, 1.43 ಲಕ್ಷ ಸಾರಿಗೆ ನೌಕರರು ರಾಜ್ಯದಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಬಿಎಂಟಿಸಿಯಲ್ಲಿ ದಿನನಿತ್ಯ 73ಲಕ್ಷ ಜನ ಪ್ರಯಾಣಿಸುತ್ತಾರೆ. ಸಚಿವರ ನಿರ್ಲಕ್ಷದಿಂದಾಗಿ ಇಂದು ನೌಕರರು ಮತ್ತು ಪ್ರಯಾಣಿಕರಿಗೆ ತೊಂದರೆವುಂಟಾಗಿದೆ. ನೌಕರರ ಬೇಡಿಕೆ ಈಡೇರಿಕೆಗೆ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಘಟನೆ ನೌಕರರ ಜೊತೆಗಿದೆ. ಬೇಡಿಕೆ ಈಡೇರದಿದ್ದರೆ ತೀವ್ರತರಹದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ಶಿವಕುಮಾರಸ್ವಾಮಿ ಮಾತನಾಡಿ, ಸಾರಿಗೆ ನೌಕರರ ಹೋರಾಟಕ್ಕೆ ದಲಿತ ಸಂಘಟನೆಗಳು ಬೆಂಬಲ ನೀಡಲಿವೆ. ಸರ್ಕಾರಿ ನೌಕರರಿಗೆ ಕೊಡುತ್ತಿರುವ ಸವಲತ್ತುಗಳನ್ನು ಕೊಡಬೇಕು. ಅದನ್ನು ಬಿಟ್ಟು ಖಾಸಗಿ ಬಸ್ಸು ಓಡಿಸ್ತೀವಿ ಎಂಬಿತ್ಯಾದಿ ಮೊಂಡುತನ ಮಾಡಬಾರದು ಎಂದು ಸಾರಿಗೆ ಸಚಿವರು ಮತ್ತು ಅಧಿಕಾರಿಗಳಿಗೆ ತಿಳಿ ಹೇಳಿದರು.