ಕೃಷಿಯೊಂದಿಗೆ ಹೈನುಗಾರಿಕೆ ಮಾಡಿದರೆ ಮಾತ್ರ ಆರ್ಥಿಕವಾಗಿ ಸಬಲರಾಗಬಹುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಸರಗೂರು : ಕೃಷಿಯೊಂದಿಗೆ ಹೈನುಗಾರಿಕೆ ಮಾಡಿದರೆ ಮಾತ್ರ ಆರ್ಥಿಕವಾಗಿ ಸಬಲರಾಗಬಹುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಮಾಡುವುದರಿಂದ ಕೃಷಿಯಲ್ಲಿ ನಷ್ಟವಾದರೂ ಹೈನುಗಾರಿಕೆಯಿಂದ ಸದೃಢರಾಗಬಹುದು ಎಂದು ಅವರು ಹೇಳಿದರು.

ನೂತನ ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವಂತೆ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು. ಜೊತೆಗೆ, ಮುಂದಿನ ದಿನಗಳಲ್ಲಿ ಡೈರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಹೈನು ನಂಬಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಜೀವನ ನಡೆಸಬಹುದು ಭರವಸೆ ನೀಡಿದರು.

ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ. ಈರೇಗೌಡ ಮಾತನಾಡಿದರು,

ಇದಕ್ಕೂ ಮುನ್ನ ನೂತನ ಸಂಘದ ಕಟ್ಟಡ ಉದ್ಘಾಟನೆ, ಹಾಲು ಶೇಖರಣೆಗೆ ಚಾಲನೆ ಹಾಗೂ ಕ್ಷೀರಕ್ರಾಂತಿಯ ಹರಿಕಾರರಾದ ಡಾ. ವರ್ಗೀಸ್ ಕುರಿಯನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕಿ ದ್ರಾಕ್ಷಾಯಿಣಿ ಬಸವರಾಜಪ್ಪ, ಹಿರಿಯ ಸಹಕಾರಿ ಬಸವರಾಜಪ್ಪ, ವಿಸ್ತರಣಾಧಿಕಾರಿ ಅರೀಫ್ ಇಕ್ಬಾಲ್, ಎಂ.ವೈ. ಜಗದಾಂಬ, ಗ್ರಾಪಂ ಪಿಡಿಓ ಬಿ. ಸಂತೋಷ್, ಗ್ರಾಮಸ್ಥದ ಮುಖಂಡರಾದ ಗೌಡಿಕೆ ರಾಜಪ್ಪ, ಸದಸ್ಯರಾದ ವರದನಾಯಕ, ಶಾಲಾ ಶಿಕ್ಷಕರಾದ ಮಮತ, ಕಲ್ಪನಾ, ಸಂಘದ ಅಧ್ಯಕ್ಷರಾದ ಸಿದ್ದರಾಜು, ಉಪಾಧ್ಯಕ್ಷರಾದ ಶ್ರೀನಿವಾಸ್, ನಿರ್ದೇಶಕರಾದ ಮಹದೇವಪ್ಪ, ಎಸ್.ಎಂ. ಮಹೇಶ್ವರಪ್ಪ, ಚಿಕ್ಕನಾಯಕ, ರಂಗಶೆಟ್ಟಿ, ಪುಟ್ಟಶೆಟ್ಟಿ, ಸಿ. ತಿಮ್ಮನಾಯಕ, ಸಣ್ಣತಿಮ್ಮನಾಯಕ, ಕಾರ್ಯದರ್ಶಿ ಯೋಗೀಶ್ ಇದ್ದರು.