Asianet Suvarna News Asianet Suvarna News

ಅಂಕೋಲಾ: ಕರೆ​ದಾಗಲೆಲ್ಲ ಬಂದು ಕೈಮೇ​ಲೇ​ರುವ ಕಾಕ, ಮಾನವನ ಜತೆ ಕಾಗೆ ಫ್ರೆಂಡ್‌ಶಿಪ್‌..!

*   ವಿಠ್ಠಲ ಶೆಟ್ಟಿ ಕರೆದಾಗ ಕೈ ಮೇಲೆ ಬಂದು ಕಾಗೆ ಕುಳಿತುಕೊಳ್ಳುವ ಕಾಗೆ
*   ಕಳೆದ 10 ವರ್ಷದಿಂದ ಕಾಗೆಯೊಂದು ವಿಠ್ಠಲ ಶೆಟ್ಟಿ ಜೊತೆ ಸಲುಗೆ-ಸಂಪರ್ಕ ಬೆಳೆಸಿದ ಪರಿಯೇ ಸೋಜಿಗ
*   ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳು ಈ ಜೀವ ಸಂಕುಲದ ಸರಪಣಿ 
 

Crow closely Friendship With Human at Ankola in Uttara Kannada grg
Author
Bengaluru, First Published Oct 6, 2021, 12:27 PM IST

ರಾಘು ಕಾಕರಮಠ

ಅಂಕೋಲಾ(ಅ.06):  ಇಂದು ಮಹಾಲಯ ಅಮಾವಾಸ್ಯೆ. ಪೂರ್ವಜರನ್ನು ಸ್ಮರಿಸಿ, ನೀರು ಹಾಗೂ ಮನೆಯಲ್ಲಿ ವಿಶೇಷವಾದ ಖಾದ್ಯ ತಯಾರಿಸಿ ಪೂರ್ವಿಕರ ಹೆಸರಿನಲ್ಲಿ ಕಾಗೆಗಳಿಗೆ(Crow) ನೀಡುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಂದು ಕಾಗೆಗಳ ಸಂತತಿಯೇ ಕಾಣದಾಗಿದ್ದರೂ ಕಳೆದ 10 ವರ್ಷದಿಂದ ಕಾಗೆಯೊಂದು ಪಟ್ಟಣದ ವ್ಯಕ್ತಿಯೊಬ್ಬನ ಸಲುಗೆ-ಸಂಪರ್ಕ ಬೆಳೆಸಿದ ಪರಿ ಸೋಜಿಗವಾಗಿದೆ.

ಹೌದು, ಕಾಗೆಗಳ ಜೀವನ ಶೈಲಿಯೆ ವ್ಯತಿರಿಕ್ತವಾದದು. ಅವು ಮನುಷ್ಯನ ಹತ್ತಿರ ಸುಳಿಯಲಾರದು. ಆದರೆ ಕಂತ್ರಿ (ಮಾಧವನಗರ)ದ ನಿವೃತ್ತ ನೌಕರ ವಿಠ್ಠಲ ಶೆಟ್ಟಿ ಅವರು ಕರೆದಾಗ ಕೈ ಮೇಲೆ ಬಂದು ಕಾಗೆ ಕುಳಿತು ಗಮನ ಸೆಳೆಯುತ್ತಿದೆ.
ವಿಠ್ಠಲ ಶೆಟ್ಟಿ ಅವರು ಕಾಗೆಗೆ ಹೆಚ್ಚಾಗಿ ಚಪಾತಿಯನ್ನು ಕೈಯಲ್ಲಿ ಹಿಡಿದು ಆತ್ಮೀಯವಾಗಿ ಬಾರೋ ಬಾರೋ ಎನ್ನುತ್ತಲೇ ಹಾರಿ ಬಂದು ಕೈಯಲ್ಲಿ ಕುಳಿತುಕೊಳ್ಳುತ್ತದೆ. 10ರಿಂದ 15 ನಿಮಿಷ ಕೈ ಮೇಲೆ ಕುಳಿತು ಆನಂತರ ಹಾರಿ ಹೋಗುತ್ತದೆ. ಪ್ರತಿ ದಿನ ಬೆಳಗ್ಗೆ 10 ಗಂಟೆಗೆ, ಹಾಗೆ ಮಧ್ಯಾಹ್ನ 3 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ತಪ್ಪದೇ ಬರುವ ಈ ಕಾಗೆ ಕುಟುಂಬದ ಸದಸ್ಯನಂತೆ ಆತ್ಮೀಯತೆ ಬೆಳೆಸಿಕೊಂಡಿದೆ. ವಿಠ್ಠಲ ಶೆಟ್ಟಿಅವರು ಎಂದಾದರೂ ಮನೆ ಬಿಟ್ಟು ಒಂದೆರಡು ದಿನ ಹೊರಗಡೆ ಹೋದಾಗ, ಈ ಕಾಗೆ ಅವರ ಮನೆಯ ಬಾಗಿಲಲ್ಲೆ ಕುಳಿತು ಕಾದಿರುತ್ತದೆ.

Crow closely Friendship With Human at Ankola in Uttara Kannada grg

ಕುಕು ಕಾಗೆಯನ್ನು ಮನೆಯ ಮಗುವಿನಂತೆಯೇ ಸಾಕ್ತಾರೆ ಈ ಮನೆಯ ಜನ

ಕಾಗೆಯ ಒಡನಾಟವಾಗಿದ್ದು ಹೀಗೆ:

ಕಳೆದ 10 ವರ್ಷದ ಹಿಂದೆ ಒಂದು ಕಾಲು ಇಲ್ಲದ ಕಾಗೆಯೊಂದು ಇವರ ಮನೆಯ ಹತ್ತಿರ ಹಾರಾಡುತ್ತಿತ್ತು. ವಿಠ್ಠಲ ಶೆಟ್ಟಿಅವರು ಈ ಕಾಲು ಇರದೇ ಇರುವುದನ್ನುಕಂಡು ತಿಂಡಿ ನೀಡಿ ಆತ್ಮೀಯತೆ ತೋರಿಸಿದ್ದರಂತೆ. 6 ತಿಂಗಳ ನಂತರ ಈ ಕಾಗೆ 2 ಕಾಗೆ ಮರಿಗಳನ್ನು ಹೊತ್ತು ವಿಠ್ಠಲ ಶೆಟ್ಟಿಅವರ ಮನೆಯಂಗಳಕ್ಕೆ ಬಂದಿತ್ತು ಎನ್ನಲಾಗಿದೆ. ಅದರಲ್ಲಿ ಒಂದು ಕಾಗೆ ಅಸ್ವಸ್ಥ ಸ್ಥಿತಿಯಲ್ಲಿದ್ದರೆ, ಇನ್ನೊಂದು ಕಾಗೆ ಚುರುಕಾಗಿತ್ತು. ಚುರುಕಾಗಿದ್ದ ಕಾಗೆಯನ್ನು ತಾಯಿ ತೆಗೆದುಕೊಂಡು ಹಾರಿ ಹೋಯಿತು. ಅಸ್ವಸ್ಥವಾಗಿದ್ದ ಕಾಗೆಗೆ ಉಪಚರಿಸಿ, ಆಹಾರ ನೀಡಿದರಂತೆ. ಚೇತರಿಸಿಕೊಂಡ ಮರಿ ಕಾಗೆ ಹಾರಿ ಹೋದರೂ ಸಹ ಪ್ರತಿ ದಿನ, ಶೆಟ್ಟಿ ಅವರು ಕರೆದಾಗ ಬಂದು, ನೀಡಿದ್ದನ್ನು ತಿಂದು ಹೋಗುತ್ತಿದೆ.

ಮನುಷ್ಯ(Human) ಹಾಗೂ ಪ್ರಾಣಿ-ಪಕ್ಷಿಗಳು(Animal-Bird) ಈ ಜೀವ ಸಂಕುಲದ ಸರಪಣಿಯಾಗಿವೆ. ಅವನ್ನು ಪ್ರೀತಿಯಿಂದ ನೋಡಿಕೊಂಡರೆ, ಪ್ರೀತಿ ಸಂಪಾದಿಸುವುದು ಸುಲಭ. ಈ ಕಾಗೆಯನ್ನುಒಂದು ದಿನ ನೋಡದಿದ್ದರೂ ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ ಎಂದು ವಿಠ್ಠಲ ಶೆಟ್ಟಿ ತಿಳಿಸಿದ್ದಾರೆ.  

ತಿಥಿಗೆ ಬೇಕು ಕಾಗೆ...

ಮಹಾಲಯ ಅಮಾವಾಸ್ಯೆಯಂದು ಹಾಗೂ ಹಿಂದೂ ಸಂಪ್ರದಾಯದ ಪ್ರಕಾರ ಮನುಷ್ಯ ಇಹಲೋಕ ತ್ಯಜಿಸಿದ ಹನ್ನೆರಡನೇ ದಿನ ಉತ್ತರಕ್ರಿಯೆ ಮಾಡಲಾಗುತ್ತದೆ. ಈ ಸಮಯದಲ್ಲಿ ಸತ್ತ ವ್ಯಕ್ತಿಗೆ ಇಟ್ಟ ಎಡೆಯನ್ನು ಮೊದಲು ಕಾಗೆ ಮುಟ್ಟಬೇಕು. ಹಾಗೆ ಕಾಗೆ ತಿನ್ನದೇ ಬೇರೆಯವರು ತಿಥಿ ಊಟ ಮಾಡುವಂತಿಲ್ಲ. ಸತ್ತವರ ಆತ್ಮ ಕಾಗೆ ರೂಪದಲ್ಲಿ ಬಂದು ಊಟ ಸ್ವೀಕರಿಸುತ್ತದೆ ಎಂಬುದು ನಂಬಿಕೆ. ಹಾಗೆ ಕಾಗೆ ಬಂದು ತಿಂದರೆ ಸತ್ತವರಿಗೆ ತೃಪ್ತಿಯಾಗಿದೆ ಎಂದು ಭಾವಿಸಲಾಗುತ್ತದೆ.
 

Follow Us:
Download App:
  • android
  • ios