ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೀನು ಮಾರ್ಕೆಟ್‌ನಲ್ಲಿನ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಮೀನು ಮಾರುಕಟ್ಟೆಯಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಈ ಕುರಿತಾದ ಒಂದು ರಿಫೋರ್ಟ್ ಇಲ್ಲಿದೆ ನೋಡಿ.

ತೀರ್ಥಹಳ್ಳಿ(ಜು.01): ಶಿವಮೊಗ್ಗ ಜಿಲ್ಲೆಯ ಜನರನ್ನು ಕೊರೋನಾ ನಿಧಾನವಾಗಿ ಆವರಿಸಿಕೊಳ್ಳಲಾರಂಭಿಸಿದೆ. ಮಂಗಳವಾರ(ಜೂ.30) ಒಂದೇ ದಿನ ಜಿಲ್ಲೆಯಲ್ಲಿ ದಾಖಲೆಯ 22 ಮಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ ತೀರ್ಥಹಳ್ಳಿ ಪಟ್ಟಣದ ಮೀನು ಮಾರುಕಟ್ಟೆಯ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಜನರಲ್ಲೀಗ ಗಾಬರಿ ಹುಟ್ಟಿಸಿದೆ.

Add Asianetnews Kannada as a Preferred SourcegooglePreferred

ಹೌದು, ಪಟ್ಟಣದ ಜನನಿಬಿಡ ಪ್ರದೇಶ ಮೀನು ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬರಿಗೆ (36 ವರ್ಷ) ಕೊರೋನಾ ಇರುವುದು ದೃಢಪಟ್ಟಿದ್ದು, ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮವಾಗಿ ಸೀಲ್‌ಡೌನ್‌ ಮಾಡಿದ್ದು, ಸುತ್ತಮುತ್ತಲಿನ ಪ್ರದೇಶವನ್ನು ಬಫರ್‌ಝೋನ್‌ ಎಂದು ಘೋಷಣೆ ಮಾಡಲಾಗಿದೆ.

ಗದಗ: 'ಹೆರಿಗೆ ಆಸ್ಪತ್ರೆ ಗರ್ಭಿಣಿಯರಿಗೆ ಮಾತ್ರ ಬಳಸಿ, ಕೋವಿಡ್‌ ರೋಗಿಗಳಿಗಲ್ಲ'

ತಾಲೂಕಿನ ಹಾದಿಗಲ್ಲಿನಲ್ಲಿ ವ್ಯಕ್ತಿಯೊಬ್ಬರಿಗೆ (25 ವರ್ಷ) ಕೊರೋನಾ ಇರುವುದು ದೃಢಪಟ್ಟಿದೆ. ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯ ಕೊರೋನಾ ಘಟಕಕ್ಕೆ ದಾಖಲಿಸಲಾಗಿದೆ. ಪಟ್ಟಣ ಪಂಚಾಯ್ತಿ ಪ್ರದೇಶದಲ್ಲಿ ಈವರೆಗೆ ಒಟ್ಟು ಇಬ್ಬರಲ್ಲಿ ಕೊರೋನಾ ದೃಢಪಟ್ಟಿದ್ದು, ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ.