ಕಾಳಗಿಯ ಕೊರೋನಾ ಸೋಂಕಿತ ಆಕ್ಸಿಜನ್‌, ವೆಂಟಿಲೇಟರ್‌ಗಾಗಿ ಕಾರಿನಲ್ಲಿ 4 ಗಂಟೆ ಕಾಯ್ದು ಸುಸ್ತು| ಕೋವಿಡ್‌ ವಾರ್ಡ್‌, ಕೇರ್‌ ಸೆಂಟರ್‌ಗಳಲ್ಲಿ ಎಲ್ಲಿಯೂ ಆಕ್ಸಿಜನ್‌ ಬೆಡ್‌, ವೆಂಟಿಲೇಟರ್‌ ಬೆಡ್‌ ಇಲ್ಲ| ವೆಂಟಿಲೇಟರ್‌ ವ್ಯವಸ್ಥೆಯನ್ನು ಮಾಡಲು ಹರಸಾಹಸ ಪಡುತ್ತಿರುವ ಆರೋಗ್ಯ ಇಲಾಖೆ| 

ಕಲಬುರಗಿ(ಏ.22): ಅಪಘಾತಕ್ಕೊಳಗಾಗಿದ್ದ 6 ವರ್ಷದ ಬಾಲಕ ವೆಂಟಿಲೇಟರ್‌ ಬೆಡ್‌ಗಾಗಿ ಅವರ ಪೋಷಕರು ಅಲೆದಾಡಿದರೂ ಎಲ್ಲಿಯೂ ಬೆಡ್‌ ಸಿಗದೆ, ಬಾಲಕ ಸಾವನ್ನಿಪ್ಪಿದ್ದ ಘಟನೆ ಇನ್ನೂ ಹಸಿರಾಗಿರುವಾಗಲೇ ಕಲಬುರಗಿಯಲ್ಲಿ ಕೊರೋನಾ ರೋಗಿ ಬೆಡ್‌ಗಾಗಿ ಪರದಾಡಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

Add Asianetnews Kannada as a Preferred SourcegooglePreferred

ಸೋಂಕಿನಿಂದ ತೀವ್ರ ಉಸಿರಾಟ ತೊಂದರೆ ಎದುರಿಸುತ್ತಿದ್ದ ಕಾಳಗಿಯ 50 ವರ್ಷದ ಶಂಕರ ಅವರಿಗೆ ವೆಂಟಿಲೇಟರ್‌ ಸವಲತ್ತಿರುವ ಬೆಡ್‌ ಸಕಾಲಕ್ಕೆ ದೊರಕದೆ ಅವರು ಕಾರಿನಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಕೊರೋನಾ ಆರ್ಭಟ ಮುಂದುವರಿದಿರುವ ಕಲಬುರಗಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಿಯೂ ಪ್ರಾಣವಾಯು ಹಾಗೂ ಜೀವ ರಕ್ಷಕ ಸವಲತ್ತಿರುವ ಬೆಡ್‌ ದೊರಕದೆ ಸೋಂಕಿತರ ಸಾವಿನ ಸರಣಿ ಮುಂದುವರಿದಿದೆ.

ಬೆಳಗಾವಿ: 14 ವಿದ್ಯಾರ್ಥಿಗಳಿಗೆ ಕೊರೋನಾ, ಮನೆಗೆ ಕಳಿಸಿದ ಬಿಮ್ಸ್‌

ಶಂಕರ್‌ಗೆ ಅನಾರೋಗ್ಯ ಉಲ್ಬಣಿಸಿ ಉಸಿರಾಟದಲ್ಲಿ ತೀವ್ರ ತೊಂದರೆ ಕಾಡಲಾರಂಭಿಸಿದಾಗ ಇವರನ್ನು ಕಾರಿನಲ್ಲಿ ಕಲಬುರಗಿಗೆ ಹೆಚ್ಚಿನ ಚಿಕಿತ್ಸೆಗೆ ಕರೆ ತಂದಿದ್ದಾರೆ. ನಗರದ ಖಾಸಗಿ, ಸರ್ಕಾರಿ ಕೋವಿಡ್‌ ಸೆಂಟರ್‌ಗಳನ್ನೆಲ್ಲ ಸುತ್ತಿದರೂ ಎಲ್ಲಿಯೂ ವೆಂಟಿಲೇಟರ್‌ ಬೆಡ್‌ ಸಿಗಲಿಲ್ಲ. ಕೊನೆಗೆ ಇಲ್ಲಿನ ಕೋರ್ಟ್‌ ಪಕ್ಕದಲ್ಲಿರುವ ಸತ್ಯಾ ಆಸ್ಪತ್ರೆಯ ಮಣೂರೆ ಕೋವಿಡ್‌ ಕೇರ್‌ ಸೆಂಟರ್‌ಗೂ ಬಂದಿದ್ದಾರೆ. ಇಲ್ಲಿಯೂ ಬೆಡ್‌ ಖಾಲಿ ಇಲ್ಲ ಎಂದಿದ್ದಾರೆ. ಅಷ್ಟೊತ್ತಿಗಾಗಲೇ ಸೋಂಕಿತನ ಉಸಿರಾಟದ ತೊಂದರೆ ಹೆಚ್ಚಿದೆ. ಕಾರಿನಲ್ಲೇ 3 ಗಂಡೆ ಬೆಡ್‌ಗಾಗಿ ಸುತ್ತಾಡಿ ಸುಸ್ತಾಗಿದ್ದ ಶಂಕರ್‌ ಮೃತಪಟ್ಟಿದ್ದಾರೆ.

ಸೂಕ್ತ ಸಮಯದಲ್ಲಿ ಜೀವ ರಕ್ಷಕ ಸವಲವತ್ತಿರುವ ಆಸ್ಪತ್ರೆ ದೊರಕಿದ್ದರೆ ಬದುಕುಳಿಯುತ್ತಿದ್ದರು ಎಂದು ಬಂಧುಗಳು ರೋಧಿಸಿದರು. ಕೊರೋನಾ ಆತಂಕದಲ್ಲಿ ಮುಳುಗಿರುವ ಕಲಬುರಗಿಯಲ್ಲಿ ವೆಂಟಿಲೇಟರ್‌, ಬೆಡ್‌ಗಳ ಕೊರತೆ ಕಾಡಲಾರಂಭಿಸಿದೆ. ಜಿಲ್ಲಾಡಳಿತ ಹೆಲ್ಪ್‌ಡೆಸ್ಕ್‌ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆಯಾದರೂ ಸೋಂಕಿನಿಂದ ಶ್ವಾಸ ತೊಂದರೆ ಎದುರಿಸಿ ನರಳಾಡುತ್ತಿರುವವರಿಗೆ ಆಮ್ಲಜನಕ ಸವಲತ್ತಿರುವ ಬೆಡ್‌, ವೆಂಟಿಲೇಟರ್‌ ವ್ಯವಸ್ಥೆಯನ್ನು ಮಾಡಲು ಹರಸಾಹಸ ಪಡುತ್ತಿದೆ ಎನ್ನಲು ಈ ಘಟನೆಯೇ ಸಾಕ್ಷಿಯಾಗಿದೆ.