ರಸ್ತೆ ದಾಟುತ್ತಿದ್ದ ಆನೆಗೆ ಡಿಕ್ಕಿ ಹೊಡೆದ ಕಂಟೈನರ್: ಸಾವು-ಬದುಕಿನ ನಡುವೆ ಮೂಕಪ್ರಾಣಿಯ ಹೋರಾಟ
ತುಮಿಳುನಾಡು ಗಡಿಯ ಸೂಳಗಿರಿ ಠಾಣಾ ವ್ಯಾಪ್ತಿಯ ಪ್ಯಾರಂಡಪಲ್ಲಿ ಬಳಿ ನಡೆದ ಘಟನೆ| ಆನೆ ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ| ಆನೆಗೆ ಪ್ರಾಥಮಿಕ ಚಿಕಿತ್ಸೆಗೆ ನೆರವಾದ ಪೊಲೀಸರು|
ಆನೇಕಲ್(ಜ.17): ರಸ್ತೆ ದಾಟುತ್ತಿದ್ದ ವೇಳೆ ಕಂಟೈನರ್ ಡಿಕ್ಕಿ ಹೊಡೆದ ಕಾರಣ 23 ವರ್ಷದ ಸಲಗವೊಂದು ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ತುಮಿಳುನಾಡು ಗಡಿಯ ಸೂಳಗಿರಿ ಠಾಣಾ ವ್ಯಾಪ್ತಿಯ ಪ್ಯಾರಂಡಪಲ್ಲಿ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಈ ಆನೆಯು ಕಳೆದ 8 ದಿನಗಳಿಂದ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಆಸು ಪಾಸು ಅಡ್ಡಾಡುತ್ತಿತ್ತು. ಶುಕ್ರವಾರ ರಾತ್ರಿ ರಸ್ತೆ ದಾಟುವಾಗ ಕಂಟೈನರ್ ಡಿಕ್ಕಿ ಹೊಡೆದು ನಡು ರಸ್ತೆಯಲ್ಲಿ ಬಿದ್ದಿದ್ದ ಆನೆಯನ್ನು, ಅದೇ ಮಾರ್ಗದಲ್ಲಿ ಸಾಗುವ ಇತರ ವಾಹನಗಳ ಚಾಲಕರು ನೋಡಿ ಪೋಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಅರಣ್ಯ ಸಿಬ್ಬಂದಿಯೊಡನೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪ್ರಾಥಮಿಕ ಚಿಕಿತ್ಸೆಗೆ ನೆರವಾದರು.
3 ವರ್ಷದ ನಂತ್ರ ದೇವಾಲಯಕ್ಕೆ ಬಂದ ಆನೆ: ಪ್ರಸಾದ ತಿನ್ನಿಸಿದ IAS ಅಧಿಕಾರಿಗೆ ಟೀಕೆ
ಅರಣ್ಯ ಸಿಬ್ಬಂದಿ ನೀರು ಹಾಕುತ್ತಿದ್ದಂತೆ ಆನೆ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಂಡಿದ್ದು, ಇದನ್ನು ಗಮನಿಸಿದ ಸಿಬ್ಬಂದಿ ಜೆಸಿಬಿ ನೆರವು ಪಡೆದು ಅಂಚೆಟ್ಟಿ ಕಾಡಿಗೆ ಕರೆ ತಂದಿದ್ದಾರೆ. ಇದೀಗ ತಜ್ಞ ವೈದ್ಯ ಸಿಬ್ಬಂದಿ ಆನೆಗೆ ಶೈತ್ಯೋಪಚಾರ ನಡೆಸುತ್ತಿದ್ದಾರೆ. ಆನೆಯನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ವೈದ್ಯ ಸಿಬ್ಬಂದಿ ಹೇಳಿದ್ದಾರೆ.