ರಾಮಮಂದಿರ ವಿಚಾರ ಪ್ರಸ್ತಾಪಿಸಿ ಕೇಸರಿ ನಾಯಕರಿಗೆ ಟಾಂಗ್ ಕೊಟ್ಟ ಜಾರಕಿಹೊಳಿ
ಕಳೆದ 70 ವರ್ಷದಿಂದ ಅವರು ರಾಮಮಂದಿರ ಕಟ್ಟುತ್ತಲೆ ಇದ್ದಾರೆ. ಬಿಜೆಪಿಯವರಿಗೆ ಕರ ಸೇವಕರು ಕಟ್ಟಿದರೆ ಮಾತ್ರ ರಾಮಮಂದಿರ ಅಂತಾರೆ ಎಂದು ಕಮಲ ನಾಯಕರ ವಿರುದ್ಧ ಆಕ್ರೋಶ
ವ್ಯಕ್ತಪಡಿಸಿದರು.
ಬೆಳಗಾವಿ[ಅ.24]: ವಾಲ್ಮೀಕಿ ಜಯಂತಿ ವೇದಿಕೆ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ರಾಮಮಂದಿರ ವಿಚಾರ ಪ್ರಸ್ತಾಪಿಸಿ ಕೇಸರಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ಸಿನ ಪಿ.ವಿ. ನರಸಿಂಹರಾವ್ ಕಟ್ಟಿಸಿದ ರಾಮಮಂದಿರವನ್ನು ಬಿಜೆಪಿಯವರು ಒಪ್ಪಲ್ಲಾ. ಬೆಳಗಾವಿ ಸಂಸದ ಸುರೇಶ ಅಂಗಡಿ ಕೂಡ ಕಾಂಗ್ರೆಸ್ ರಾಮಮಂದಿರ ಒಪ್ಪಲ್ಲಾ. ನಾವೂ ನೋಡ್ತಾ ಇದ್ದೀವಿ ಬಿಜೆಪಿಯವರು ರಾಮಮಂದಿರ ಕಟ್ತೀವಿ ಅಂತಾ ಹೇಳ್ತಿದ್ದಾರೆ. ಕಳೆದ 70 ವರ್ಷದಿಂದ ಅವರು ರಾಮಮಂದಿರ ಕಟ್ಟುತ್ತಲೆ ಇದ್ದಾರೆ. ಬಿಜೆಪಿಯವರಿಗೆ ಕರ ಸೇವಕರು ಕಟ್ಟಿದರೆ ಮಾತ್ರ ರಾಮಮಂದಿರ ಅಂತಾರೆ ಎಂದು ಕಮಲ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ನಾವೂ 20-30 ವರ್ಷಗಳ ಹಿಂದೆ ರಾಮಮಂದಿರ ನಿರ್ಮಿಸಲು ಇಟ್ಟಿಗೆ ಕೊಟ್ಟಿದ್ದೇವೆ. ಆಗ ನಮಗೆ ಗೊತ್ತಿರಲಿಲ್ಲಾ. ಆಗ ಕೊಟ್ಟ ಇಟ್ಟಿಗೆ ಅಯೋಧ್ಯ ಮುಟ್ಟಿದ್ದವೂ ಇಲ್ಲವೂ ಗೊತ್ತಿಲ್ಲಾ. ರಾಮಮಂದಿರ ನಿರ್ಮಿಸಲು ಬೇಕಾದರೆ ನಾನು ಇಟ್ಟಿಗೆ ಕೊಡುವೆ. ರಾಮಮಂದಿರ ಕಟ್ಟುವ ಜವಾಬ್ದಾರಿ ಬಿಜೆಪಿಯವರಿಗೆ ಬಿಟ್ಟಿದ್ದೇವೆ. ಯಾವಾಗ ರಾಮಮಂದಿರ ಕಟ್ಟುತ್ತಾರೆ ಕಟ್ಟಲಿ ಎಂದು ಕೇಸರಿ ನಾಯಕರ ಕಾಲೆಳೆದರು.