ನೌಕರಿ ಆಮಿಷ: ನಿರುದ್ಯೋಗಿಗಳಿಗೆ ಕಾಂಗ್ರೆಸ್ ಮುಖಂಡನಿಂದ ಮಹಾಮೋಸ?
ಉದ್ಯೋಗ ಆಕಾಂಕ್ಷಿಗಳಿಂದ ಲಕ್ಷ ಲಕ್ಷ ದುಡ್ಡು ಪಡೆದು ಕಾಂಗ್ರೆಸ್ ಮುಖಂಡನಿಂದ ಮೋಸ| ಅರ್ಜುನ್ ಗಡ್ಡದ್ ಎಂಬಾತನ ಮೇಲೆ ಕೇಳಿ ಬಂದ ಆರೋಪ| ರಾಮದುರ್ಗ ಮೂಲದ ಕಾಂಗ್ರೆಸ್ ಮುಖಂಡ ಅರ್ಜುನ್ ಗಡ್ಡದ್| ಉದ್ಯೋಗ ಆಕಾಂಕ್ಷಿಗಳಿಂದ 42 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ|
ಹುಬ್ಬಳ್ಳಿ(ಫೆ.07): ಕಾಂಗ್ರೆಸ್ ಮುಖಂಡನೊಬ್ಬ ಉದ್ಯೋಗ ಆಕಾಂಕ್ಷಿಗಳಿಂದ ಲಕ್ಷ ಲಕ್ಷ ದುಡ್ಡು ಪಡೆದು ಪಂಗನಾಮ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ ಅರ್ಜುನ್ ಗಡ್ಡದ್ ಎಂಬಾತನೇ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಏನಿದು ಘಟನೆ?:
ಹುಬ್ಬಳ್ಳಿಯಲ್ಲಿ ವಾಸವಿರುವ ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಕಾಂಗ್ರೆಸ್ ಮುಖಂಡ ಅರ್ಜುನ್ ಗಡ್ಡದ್ ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷ-ಲಕ್ಷ ಪೀಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅರ್ಜುನ್ ಗಡ್ಡದ್ ಬೆಂಗಳೂರಿನ ವಿಧಾನಸೌಧದಲ್ಲಿ ದಲಾಯತ್ ಹುದ್ದೆ ಕೊಡಿಸುವುದಾಗಿ ಹೇಳಿ ಲಕ್ಷ ಲಕ್ಷ ಹಣ ಪಡೆದಿದ್ದಾನೆ ಎಂದು ಮೋಸ ಹೋದವರು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರಗೆ ದೂರು ನೀಡಿದ್ದಾರೆ. ಸುಮಾರು 10 ಕ್ಕೂ ಹೆಚ್ಚು ಜನರಿಂದ 42 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಅರ್ಜುನ್ ಗಡ್ಡದ್ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಗಣ್ಯರ ಜೊತೆಗಿನ ಫೊಟೋ ತೋರಿಸಿ ವಂಚನೆ ಮಾಡಿದ್ದಾನೆ. ಮೂರು ವರ್ಷದಿಂದ ಹಣ ಕಳೆದುಕೊಂಡು ಉದ್ಯೋಗ ಸಿಗದೆ ಯುವಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಅರ್ಜುನ್ ಗಡ್ಡದ್ ಉದ್ಯೋಗ ಕೊಡಿಸುವುದಾಗಿ ಹೇಳಿ ನಿರುದ್ಯೋಗಿಗಳಿಂದ ತನ್ನ ಬ್ಯಾಂಕ್ ಖಾತೆಗೆ ಚೆಕ್ ಹಾಗೂ ಆಟಿಜಿಎಸ್ ಮೂಲಕ ಹಣ ಹಾಕಿಸಿಕೊಂಡಿದ್ದಾನೆ.
ಪ್ರತಿಯೊಬ್ಬ ಉದ್ಯೋಗಾಂಕ್ಷಿಯಿಂದ 2 ರಿಂದ 10 ಲಕ್ಷ ಹಣ ಪಡೆದಿದ್ದಾನೆ. ಮರಳಿ ಹಣ ಕೇಳಿದರೆ ಅರ್ಜುನ್ ಗಡ್ಡದ್ ಬೆದರಿಕೆ ಹಾಕುತ್ತಿದ್ದಾನೆ ಎಂದು ಹಣ ಕಳೆದುಕೊಂಡವರು ಆರೋಪಿಸಲಾಗಿದೆ. ಆರೋಪಿಗೆ ಆತನ ಪತ್ನಿ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.