Asianet Suvarna News Asianet Suvarna News

 Kodagu: ಆನೆ-ಮಾನವ ಸಂಘರ್ಷ: ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ

ಜಿಲ್ಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ ಮಿತಿಮೀರಿದ್ದು, ಕಾಡಾನೆಗಳ ಹಾವಳಿಯಿಂದ ಜನರು ಆತಂಕದಲ್ಲಿದ್ದಾರೆ. ಕಾಡಾನೆ ಕಾಟ ತಪ್ಪಿಸುವಂತೆ ಆಗ್ರಹಿಸಿ ಮಡಿಕೇರಿಯಲ್ಲಿ ಸಾವಿರಾರು ರೈತರು, ಕಾರ್ಮಿಕರು ತೀವ್ರ ಹೋರಾಟ ನಡೆಸಿದರು.

Conflict between human and elephant farmers protest at madikeri rav
Author
First Published Nov 21, 2022, 9:09 PM IST

ಕೊಡಗು (ನ.21) : ಜಿಲ್ಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ ಮಿತಿಮೀರಿದ್ದು, ಕಾಡಾನೆಗಳ ಹಾವಳಿಯಿಂದ ಜನರು ಆತಂಕದಲ್ಲಿದ್ದಾರೆ. ಕಾಡಾನೆ ಕಾಟ ತಪ್ಪಿಸುವಂತೆ ಆಗ್ರಹಿಸಿ ಮಡಿಕೇರಿಯಲ್ಲಿ ಸಾವಿರಾರು ರೈತರು, ಕಾರ್ಮಿಕರು ತೀವ್ರ ಹೋರಾಟ ನಡೆಸಿದರು.

 ರಾಜ್ಯ ರೈತ ಸಂಘ, ಸಿಐಟಿಯು ಕಾರ್ಮಿಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ರೈತರು ಮತ್ತು ಕಾರ್ಮಿಕರು ಮಡಿಕೇರಿ, ಮೈಸೂರು ಮತ್ತು ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. 

ಅರ್ಧಗಂಟೆಗೂ ಹೆಚ್ಚು ಸಮಯ ಹೆದ್ದಾರಿ ಬಂದ್ ಮಾಡಿದ್ದರಿಂದ ನೂರಾರು ವಾಹನಗಳ ಸವಾರರು ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡಬೇಕಾಯಿತು. ಜನರಲ್ ತಿಮ್ಮಯ್ಯ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಮೈಸೂರು ರಸ್ತೆಯಲ್ಲಿರುವ ಅರಣ್ಯ ಭವನದವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

 

Kodagu: ಗ್ರಾಮ-ಗದ್ದೆಗಳಿಗೆ ನುಗ್ಗಿದ ಕಾಡಾನೆ ಹಿಂಡು: ಭತ್ತದ ಬೆಳೆ ನಷ್ಟ

ಬಳಿಕ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿದ ರೈತರು ಎರಡು ಗಂಟೆಗಳ ಕಾಲ ಧರಣಿ ನಡೆಸಿದರು. ಅರಣ್ಯ ಭವನದ ಬಳಿಗೆ ಆಗಮಿಸಿದ ರೈತರನ್ನು ಪೊಲೀಸರು ಹೊರಗಡೆಯೇ ತಡೆಯುವ ಪ್ರಯತ್ನ ಮಾಡಿದರು. ಆದರೆ ರೈತರು ತಮ್ಮ ಆಕ್ರೋಶವನ್ನು ತೀವ್ರವಾಗಿ ಹೊರಗೆ ಹಾಕಿದ್ದರಿಂದ ಪೊಲೀಸರು ಕೂಡ ಸುಮ್ಮನಾಗಬೇಕಾಯಿತು. ಜೊತೆಗೆ ಅರಣ್ಯ ಭವನದ ಮುಂಭಾಗದಲ್ಲೂ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ರೈತರು ಅರಣ್ಯ ಕಚೇರಿ ಒಳಗೆ ಹೋಗದಂತೆ ಎಚ್ಚರವಹಿಸಿದ್ದರು. 

ಇದರಿಂದ ರೈತರು ಮತ್ತಷ್ಟು ಕೋಪಗೊಂಡು ಅರಣ್ಯ ಇಲಾಖೆ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬ್ಯಾರಿಕೇಡ್‍ಗಳನ್ನು ತೆರೆದು ಪ್ರತಿಭಟನಾಕಾರರು ಅರಣ್ಯ ಕಚೇರಿಯ ಆವರಣದಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರು.  

ಈ ಸಂದರ್ಭ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಆನೆಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ. ಇದುವರೆಗೆ ನೂರಾರು ಜನರು ಆನೆಗಳ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಮೊಸಳೆ ಕಣ್ಣೀರು ಹಾಕಿ, ಸಣ್ಣ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ.  ಜನಪ್ರತಿನಿಧಿಗಳು ಕೂಡ ಇದುವರೆಗೆ ರೈತರ ಗೋಳನ್ನು ಕೇಳುತ್ತಿಲ್ಲ. ಜಿಲ್ಲೆಯ ಇಬ್ಬರು ಶಾಸಕರು ಮತ್ತು ಸಂಸದರನ್ನು ಜನರು ಗೆಲ್ಲಿಸುತ್ತಾ ಬಂದಿದ್ದಾರೆ. ಜನರಿಂದ ಮತ ಪಡೆದು ಗೆದ್ದಿರುವುದಕ್ಕಾಗಿಯಾದರೂ ಜನರ ಸಮಸ್ಯೆಯನ್ನು ಆಲಿಸಿ, ಶಾಶ್ವತ ಪರಿಹಾರ ಹುಡುಕಬಹುದಿತ್ತು. ಆದರೆ ಆ ಕೆಲಸವನ್ನು ಕೊಡಗಿನ ಜನಪ್ರತಿನಿಧಿಗಳು ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. 

ಪ್ರತಿಭಟನೆಯನ್ನು ಬೆಂಬಲಿಸಿ ಆಗಮಿಸಿದ್ದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ ಹಿಂದೆಂದಿಗಿಂತಲೂ ಇಂದು ಮಿತಿಮೀರುತ್ತಿದೆ. ಅರಣ್ಯಗಳನ್ನು ಉಳಿಸುವುದೆಂದರೆ ರೈತರನ್ನು ಹೊರಗಿಟ್ಟು ಅರಣ್ಯ ಉಳಿಸಲು ಅರಣ್ಯ ಅಧಿಕಾರಿಗಳಿಂದ ಸಾಧ್ಯವಿಲ್ಲ. ಸರ್ಕಾರ ಕೂಡ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆಗಳನ್ನು ರೂಪಿಸುವ ಬದಲು ಕೊಡಗಿಗೆ ಆಗಮಿಸಿ ಆನೆ ಮತ್ತು ಮಾನವ ಸಂಘರ್ಷ ತಪ್ಪಿಸುವುದು ಹೇಗೆ ಎಂಬುದನ್ನು ರೈತರೊಂದಿಗೆ ಚರ್ಚಿಸಿ ರೂಪಿಸಲಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಹೋರಾಟವನ್ನು ರಾಜ್ಯಮಟ್ಟದಲ್ಲಿ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. 

ಕಾಡಾನೆ ದಾಳಿಗೆ ಮಹಿಳೆ ಬಲಿ: ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಹಲ್ಲೆ?

 

ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್‍ನ ಮಾಜಿ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಆನೆಗಳ ಕಾಟ ಮಿತಿಮೀರಿದೆ. ಮಾನವ ಜೀವಗಳು ಹಾನಿಯಾಗುವುದರ ಜೊತೆಗೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಕೈಸೇರುತ್ತಿಲ್ಲ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದರು.

Follow Us:
Download App:
  • android
  • ios