ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರೈತರಿಂದ ಭೂಮಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದು, ಅವರು ಅಭಿವೃದ್ಧಿ ವಿರೋಧಿಯಾಗಿದ್ದಾರೆ ಎಂದು ಸಿಪಿಎಂ ಸಂಸದ ಕೆ.ಕೆ. ರಾಘೇಶ್‌ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ.ಲ್ಲಿ ಅಭಿವೃದ್ಧಿಯಾಗಬೇಕಾದರೆ ಭೂಮಿ ಕೊಟ್ಟು ರೈತರನ್ನು ಬಲಪಡಿಸಬೇಕು ಎಂದರು ಸಲಹೆ ನೀಡಿದರು. 

ತುಮಕೂರು(ಆ.20): ಭೂರಹಿತರು ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ರಾಜ್ಯದಲ್ಲಿ ಭೂಮಿ ನೀಡಿ ರೈತರನ್ನು ಬಲಪಡಿಸಿದರೆ ದೇಶ ಅಭಿವೃದ್ಧಿಯತ್ತ ಸಾಗಲಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರೈತರಿಂದ ಭೂಮಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದು, ಅಭಿವೃದ್ಧಿ ವಿರೋಧಿಯಾಗಿದ್ದಾರೆ ಎಂದು ಸಿಪಿಎಂ ಸಂಸದ ಕೆ.ಕೆ. ರಾಘೇಶ್‌ ವಾಗ್ದಾಳಿ ನಡೆಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭೂಮಿ ರೈತರಿಗೆ ಸಿಗಲಿ:

ಗುಬ್ಬಿ ತಾಲೂಕು ಗಂಗಯ್ಯನಪಾಳ್ಯದಲ್ಲಿ ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಕೃಷಿ ಭೂಮಿಯ ಮರು ಸ್ವಾಧೀನ ಚಳವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ಕರ್ನಾಟಕದಲ್ಲಿ ಅಭಿವೃದ್ಧಿಯಾಗಬೇಕಾದರೆ ಭೂಮಿ ಕೊಟ್ಟು ರೈತರನ್ನು ಬಲಪಡಿಸಬೇಕು ಎಂದರು ಸಲಹೆ ನೀಡಿದರು.

ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅಡ್ಡಿ:

ಜಿಲ್ಲೆಯ ಹಲವಡೆ ಬಗರ್‌ಹುಕುಂ ಸಾಗುವಳಿದಾರರು ಭೂಮಿಯನ್ನು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಸಾಗುವಳಿದಾರರು ಉಳುಮೆ ಮಾಡುತ್ತಿರುವ ಪ್ರದೇಶವನ್ನು ನೋಡಿದರೆ ಅದು ಅರಣ್ಯ ಭೂಮಿಯಂತೆ ಕಂಡು ಬರುವುದಿಲ್ಲ. ಸಾಗುವಳಿದಾರರು ತಾವು ಉಳುಮೆ ಮಾಡುತ್ತಿರುವ ಜಮೀನಿನಲ್ಲಿ ಮಾವು, ತೆಂಗು, ಅಡಕೆ ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಅಡ್ಡಿಪಡಿಸುತ್ತಿದೆ. ಜೊತೆಗೆ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಇದು ನಿಲ್ಲಬೇಕು ಎಂದು ಹೇಳಿದರು.

ಅನ್ನದಾತರ ನೆರವಿಗೆ ಬರಲು ಕರೆ:

ಅನ್ನ ನೀಡುವ ರೈತರ ನೆರವಿಗೆ ಎಲ್ಲರೂ ಬರಬೇಕು. ಅನ್ನದಾತರ ಮೇಲೆ ಹೀಗೆ ದೌರ್ಜನ್ಯ ನಡೆಸುವುದು ಸರಿಯಲ್ಲ. ಪೊಲೀಸರು ಸೇರಿದಂತೆ ಎಲ್ಲರೂ ಜನರ ಸೇವಕ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ಮಾಲಿಕರಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಬಂಧಿಸಿರುವ ಎಲ್ಲ ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಯು. ಬಸವರಾಜು, ಪ್ರಾಂತ ರೈತ ಸಂಘದ ಮುಖಂಡ ಎಚ್‌.ಆರ್‌.ನವೀನ್‌ ಕುಮಾರ್‌, ರೈತ ಮುಖಂಡ ಬಿ.ಉಮೇಶ್‌ ಎನ್‌.ಕೆ. ಸುಬ್ಬಮಣ್ಯ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಗಂಗನಪಾಳ್ಯಕ್ಕೆ ಬಂದಿದ್ದ 50ಕ್ಕೂ ಹೆಚ್ಚು ಮಂದಿ ರೈತರನ್ನು ಪೊಲೀಸರು ಬೇರೆ ಬೇರೆ ಕಡೆ ಕರೆದುಕೊಂಡು ಹೋಗಿ ರೈತರು ವಾಪಸ್‌ ಬರಲು ಬಸ್‌ ಸೌಲಭ್ಯವಿಲ್ಲದಂತಹ ಪ್ರದೇಶಕ್ಕೆ ಬಿಟ್ಟುಬಂದಿದ್ದರು