ಸುವರ್ಣ ನ್ಯೂಸ್ ಬಿಗ್ 3 ಜೆಪಿ ಶೆಟ್ಟಿಗೆ ‘ಪ್ರೆಸ್ಕ್ಲಬ್ ವಾರ್ಷಿಕ’ ಪ್ರಶಸ್ತಿ ಗರಿ
ವೀರೇಂದ್ರ ಹೆಗ್ಗಡೆ ಅವರಿಗೆ ‘ವರ್ಷದ ವ್ಯಕ್ತಿ’, ಕನ್ನಡ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರಿಗೆ ‘ಯುಗದ ಸಾಧಕ’ ಪ್ರಶಸ್ತಿ| ಸುವರ್ಣನ್ಯೂಸ್ ವಾಹಿನಿ ನಿರೂಪಕ ಜಯಪ್ರಕಾಶ್ ಶೆಟ್ಟಿ, ಬೆಂ.ವಿವಿ ಕುಲಸಚಿವ ಡಾ.ಬಿ.ಕೆ.ರವಿ ಸೇರಿದಂತೆ 50 ಮಂದಿಗೆ ಸನ್ಮಾನ|
ಬೆಂಗಳೂರು(ಜ.29): ಮಾಧ್ಯಮ ರಂಗದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಪತ್ರಿಕಾ ಸಂಘಟನೆಗಳಲ್ಲಿ ವಿಘಟನೆ ಕಂಡು ಬರುತ್ತಿದೆ, ಅದಕ್ಕೆ ಅವಕಾಶ ಕೊಡದೇ ಎಲ್ಲರೂ ಒಗ್ಗಟ್ಟಾಗಿ ಮುಂದುವರೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ಬೆಂಗಳೂರು ಪ್ರೆಸ್ಕ್ಲಬ್ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ‘ವರ್ಷದ ವ್ಯಕ್ತಿ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಸುವರ್ಣ ಮಹೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಾಧ್ಯಮಗಳು ಒಟ್ಟಾಗಿ ಶ್ರಮಿಸಿದರೆ ನಾಡಿನಲ್ಲಿ ಅಭಿವೃದ್ಧಿ ಕೆಲಸಗಳು ಹೆಚ್ಚಾಗುತ್ತವೆ. ಸಂಘಟಿತರಾಗುವ ಮೂಲಕ ಇನ್ನಷ್ಟು ಸಾಧನೆ ಸಾಧ್ಯ ಎಂದರು. ಪತ್ರಕರ್ತರ ಒತ್ತಾಯದ ಮೇರೆಗೆ 1969ರಲ್ಲಿ ಬೆಂಗಳೂರು ಪ್ರೆಸ್ಕ್ಲಬ್ ಸ್ಥಾಪಿಸಲಾಯಿತು. ಅಂದಿನಿಂದಲೂ ಮಾಹಿತಿ, ಮನರಂಜನೆ ನೀಡುತ್ತಾ ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ. ಪ್ರೆಸ್ಕ್ಲಬ್ನಿಂದ ಮುಂದಿನ ದಿನಗಳಲ್ಲಿ ಸಹ ಮತ್ತಷ್ಟು ಸಕಾರಾತ್ಮಕ ಚಟುವಟಿಕೆಗಳು ನಡೆಯಲಿ ಎಂದು ಆಶಿಸಿದರು.
ರಾಜ್ಯ ಸರ್ಕಾರದಿಂದ ಪ್ರೆಸ್ಕ್ಲಬ್ಗೆ ಸಹಕಾರ ನೀಡುತ್ತಲೇ ಬಂದಿದ್ದು, ಮುಂದೆಯೂ ನೀಡಲಿದೆ. ಸರ್ಕಾರ ಹಾಗೂ ಪ್ರೆಸ್ಕ್ಲಬ್ ನಡುವಿನ ಬಾಂಧವ್ಯ ಹೀಗೆ ಮುಂದುವರಿಯಲಿದೆ ಎಂದು ಹೇಳಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
‘ವರ್ಷದ ವ್ಯಕ್ತಿ’ ನುಡಿ:
ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಶ್ರೀ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ಸಬಲೀಕರಣದಿಂದಾಗಿ ಗ್ರಾಮೀಣ ಭಾಗದಲ್ಲಿ ಮಹಿಳೆಯರು, ಯುವಕರು ಕೂಡ ದೇಶದ ರಾಜಕಾರಣ, ಆರ್ಥಿಕತೆ, ರಾಜ್ಯದ ಕಾನೂನುಗಳ ಬಗ್ಗೆ ವಿಶ್ಲೇಷಿಸುತ್ತಿದ್ದಾರೆ. ನಗರದಲ್ಲಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲೂ ದೊಡ್ಡ ವಿಚಾರಗಳು ಚರ್ಚೆಯಾಗುತ್ತಿವೆ. ಮಹಿಳೆಯರು, ಜನಸಾಮಾನ್ಯರು ದೇಶದ ಕುರಿತು ಕುಳಿತಲ್ಲೇ ಮಾಹಿತಿ ಪಡೆಯುತ್ತಿದ್ದಾರೆ. ಬುದ್ಧಿವಂತರು, ಜ್ಞಾನವಂತರೂ ಆಗಿದ್ದಾರೆ. ಈ ಸಬಲೀಕರಣಕ್ಕೆ ಪತ್ರಿಕೆ, ಮಾಧ್ಯಮ ಸಂಸ್ಥೆಗಳು ಕಾರಣ ಎಂದರು.
ರಾಜ್ಯ ಸರ್ಕಾರ ಮುಂದಿನ ಬಜೆಟ್ನಲ್ಲಿ ಕೃಷಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ರೈತರನ್ನು ಬೆಂಬಲಿಸಬೇಕು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತಷ್ಟುಉತ್ತಮ ಕಾರ್ಯಗಳಾಗಲಿ. ಆ ಮೂಲಕ ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಥಮ ರಾಜ್ಯವಾಗಬೇಕು ಎಂದು ಆಶಿಸಿದರು.
50 ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ
ಧರ್ಮಸ್ಥಳದ ಧರ್ಮಾಧಿಕಾರಿಯಾಗಿ 50 ವರ್ಷ ಪೂರೈಸಿರುವ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಮತ್ತು ಕನ್ನಡ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ‘ಯುಗದ ಸಾಧಕ’ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿ ಗೌರವಿಸಿದರು.
‘ಪ್ರೆಸ್ಕ್ಲಬ್ ವಾರ್ಷಿಕ’ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಎಂ.ಸಿದ್ಧರಾಜು, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ಸುವರ್ಣ ನ್ಯೂಸ್ ವಾಹಿನಿ ನಿರೂಪಕ ಜಯಪ್ರಕಾಶ್ ಶೆಟ್ಟಿ, ಇಮ್ರಾನ್ ಖುರೇಶಿ, ಜಿ.ಕೆ.ಸತ್ಯ, ಲಕ್ಷ್ಮಣ ಕೊಡಸೆ, ರವೀಂದ್ರ ಜಿ.ಭಟ್, ಕೆ.ಎಚ್.ಸಾವಿತ್ರಿ, ಹರಿಶ್ಚಂದ್ರ ಭಟ್, ಬಿ.ವಿ.ನಾಗರಾಜು, ಸುನಿಲ್ ಪ್ರಸಾದ್, ಅಬ್ದುಲ್ ಹಮೀದ್ ಎಂ., ಜೋಸೆಫ್ ಹೂವರ್, ಎನ್.ಎಸ್.ಶಂಕರ್, ಡಾ ಬಿ.ಕೆ.ರವಿ, ರು.ಬಸಪ್ಪ ಅವರಿಗೆ ನೀಡಲಾಯಿತು. ಐವತ್ತು ವರ್ಷದ ಸಂಭ್ರಮದ ಸ್ಮರಣಾರ್ಥ 50 ಹಿರಿಯ ಪತ್ರಕರ್ತರಿಗೆ ಗೌರವ ಪ್ರಶಸ್ತಿ ನೀಡಲಾಯಿತು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಶಾಸಕ ಗೋವಿಂದರಾಜು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಂಕರ್ಗೌಡ ಪಾಟೀಲ್, ನಟ ಪುನೀತ್ ರಾಜ್ಕುಮಾರ್, ಪ್ರೆಸ್ಕ್ಲಬ್ ಅಧ್ಯಕ್ಷ ಸದಾಶಿವಶೆಣೈ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಕಿರಣ್, ಪದಾಧಿಕಾರಿಗಳು ಮತ್ತಿತರು ಉಪಸ್ಥಿತರಿದ್ದರು.
‘ವರ್ಷದ ವ್ಯಕ್ತಿ’ ಮತ್ತು ‘ಯುಗದ ಸಾಧಕ’ ಪ್ರಶಸ್ತಿಗೆ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಪ್ರೊ.ಜಿ ವೆಂಕಟಸುಬ್ಬಯ್ಯ ಅವರ ಆಯ್ಕೆಯಿಂದ ಆ ಪ್ರಶಸ್ತಿಗಳ ಮೌಲ್ಯ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
"