ಮಸ್ಕಿಯಲ್ಲಿ ಮಿಂಚಿನ ಸಂಚಾರ ನಡೆಸಿದ ಯಡಿಯೂರಪ್ಪ| ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ| ಬಡವರ ಮನೆಯಲ್ಲಿ ಉಂಡಿರುವೆ, ಇದರಲ್ಲಿ ರಾಜಕೀಯವಿಲ್ಲ ತಂತ್ರವಿಲ್ಲ| ಪರಿಶಿಷ್ಟ ವರ್ಗದವರಿಗೆ ಶೇ.7.5 ಮೀಸಲಾತಿ ನೀಡುವ ಕುರಿತು ಈ ಬಗ್ಗೆ ನ್ಯಾಯಲಯದಿಂದ ಆದೇಶ ಬರಲಿದೆ. ಬಂದ ತಕ್ಷಣ ಮೀಸಲಾತಿ ನೀಡಲಾಗುವುದು: ಸಿಎಂ| 

ಮಸ್ಕಿ(ಏ.12): ಕ್ಷೇತ್ರದ ಉಪಚುನಾವಣೆ ಪ್ರಚಾರ ಕಾರ್ಯ ನಿಮಿತ್ತ ಏ.9ರಂದು ಮಸ್ಕಿಗೆ ಆಗಮಿಸಿದ್ದ ವೇಳೆ ಪರಿಷಿಷ್ಟ ಜಾತಿ ಕಾರ್ಯಕರ್ತರ ಮನೆಯಲ್ಲಿ ಉಪಾಹಾರ ಸೇವಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಭಾನುವಾರ ಮಸ್ಕಿ ಸಮೀಪದ ಮೆದಕಿನಾಳ ಗ್ರಾಮದ ಪರಿಶಿಷ್ಟ ಪಂಗಡದ ಬಿಜೆಪಿ ಕಾರ್ಯಕರ್ತ ಹನುಮಂತ ಕಾಡ್ಲೂರು ಮನೆಯಲ್ಲಿ ಊಟ ಸವಿದಿದ್ದಾರೆ.

Add Asianetnews Kannada as a Preferred SourcegooglePreferred

ಯಡಿಯೂರಪ್ಪ ಅವರು ಹನುಮಂತಪ್ಪ ಅವರ ಮನೆಯಲ್ಲಿ ಹೊಳಿಗೆ, ಗೋದಿ ಹುಗ್ಗಿ, ಚಪಾತಿ, ಜೋಳದ ರೊಟ್ಟಿ, ಅನ್ನ, ಸಾರನ್ನು ಇಷ್ಟಪಟ್ಟು ಉಂಡರು. ನಂತರ ಕುಟುಂಬದ ಸದಸ್ಯರೊಂದಿಗೆ ಕುಶಲೋಪರಿ ವಿಚಾರಿಸಿದ ಮುಖ್ಯಮಂತ್ರಿಗಳು ಊಟ ರುಚಿಯಾಗಿತ್ತೆಂದು ತಿಳಿಸಿ ಹನುಮಂತಪ್ಪನ ಪತ್ನಿ ದುರುಗಮ್ಮ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಮಸ್ಕಿ ಉಪಚುನಾವಣಾ ಅಖಾಡ: ದಲಿತರ ಮನೆಯಲ್ಲಿ ಸಿಎಂ ಉಪಹಾರ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾವುದೇ ರಾಜಕೀಯ ತಂತ್ರವಿಲ್ಲ. ಪ್ರೀತಿಯಿಂದ ಬಡವರು ಮನಗೆ ಊಟಕ್ಕೆ ಕರೆಯುತ್ತಾರೆ. ಅಂಥವರ ಮನಗೆ ಊಟ ಮಾಡುವುದರಿಂದ ತೃಪ್ತಿ ತಂದಿದೆ ಎಂದರು. ಮೊನ್ನೆ ಪರಿಶಿಷ್ಟಜಾತಿಯವರ ಮನೆಯಲ್ಲಿ ಉಪಾಹಾರ ಮಾಡಿದ್ದೆ. ಇಂದು ಪರಿಶಿಷ್ಟ ಪಂಗಡದವರ ಮನೆಯಲ್ಲಿ ಊಟ ಮಾಡಿರುವೆ ಎಂದು ಅಭಿಮಾನ ವ್ಯಕ್ತಪಡಿಸಿದರು. ಪರಿಶಿಷ್ಟ ವರ್ಗದವರಿಗೆ ಶೇ.7.5 ಮೀಸಲಾತಿ ನೀಡುವ ಕುರಿತು ಈ ಬಗ್ಗೆ ನ್ಯಾಯಲಯದಿಂದ ಆದೇಶ ಬರಲಿದೆ. ಬಂದ ತಕ್ಷಣ ಮೀಸಲಾತಿ ನೀಡಲಾಗುವುದು ಎಂದರು.

ವಿವಿಧ ಸಮುದಾಯಗಳ ಸಭೆ ನಡೆಸಿದ ಸಿಎಂ

ವಿಧಾನಸಭೆ ಉಪಚುನಾವಣೆ ಪ್ರಚಾರ ಸಲುವಾಗಿ 2 ದಿನಗಳಿಂದ ಮಸ್ಕಿಯಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಮತಬೇಟೆ ನಡೆಸಿದರು. ಜೊತೆಗೆ ವಿಧಾನಸಭೆ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಮುದಗಲ್‌ ಪಟ್ಟಣದಲ್ಲಿ ವೀರಶೈವ ಲಿಂಗಾಯತ, ವಾಲ್ಮೀಕಿ ಸಮಾಜ ಹಾಗೂ ಹಾಲುಮತ ಸಮಾಜದ ಮುಖಂಡರೊಂದಿಗೆ ಚರ್ಚಿಸಿದರು. ಸಚಿವ ಸಿ.ಸಿ.ಪಾಟೀಲ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಶಾಸಕರಾದ ಪರಣ್ಣ ಮುನ್ನಳ್ಳಿ, ಎ.ಎಸ್‌.ಪಾಟೀಲ್‌ ನಡಹಳ್ಳಿ, ರೇಣುಕಾಚಾರ್ಯ, ಮುಖಂಡ ಮಲ್ಲಪ್ಪ ಸೇರಿ ಅನೇಕರು ಭಾಗವಹಿಸಿದ್ದರು.