ನಾನು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕನಸು ಕಂಡಿದ್ದೆ, ಅದನ್ನು ಪೂರ್ತಿ ಮಾಡುವ ದಿನಗಳು ಬಂದಿದೆ. ಕ್ಷೇತ್ರದ ಜನರಿಗೆ ಮನೆಗಳು, ಕೈಗಾರಿಕೆ, ಯುವಕರಿಗೆ ಕೆಲಸ ಕೊಡುವ ದಿನಗಳು ಬಂದಿವೆ. ತಾವು ಅದನ್ನೆಲ್ಲಾ ಮುಂದೆ ನೋಡ್ತೀರಿ. ಈ ಮಣ್ಣಲ್ಲಿ ಆ ಶಕ್ತಿ ಇದೆ ಎಂದ ಸಿಎಂ ಬೊಮ್ಮಾಯಿ 

ಹಾವೇರಿ(ಅ.25): ನಿಮ್ಮ ಋುಣದಲ್ಲಿ ನಾನಿದ್ದೇನೆ, ಒಂದೊಂದು ಕ್ಷಣ ಕೆಲಸ ಮಾಡುವಾಗಲೆಲ್ಲಾ ನೀವು ನನಗೆ ಶಕ್ತಿ ನೀಡಿದ್ದೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ತಮ್ಮ ಸ್ವಂತ ಕ್ಷೇತ್ರವಾದ ಶಿಗ್ಗಾಂವಿಯ ಸಂತೆ ಮೈದಾನದಲ್ಲಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್‌ ವತಿಯಿಂದ ಏರ್ಪಡಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕನಸು ಕಂಡಿದ್ದೆ, ಅದನ್ನು ಪೂರ್ತಿ ಮಾಡುವ ದಿನಗಳು ಬಂದಿದೆ. ಕ್ಷೇತ್ರದ ಜನರಿಗೆ ಮನೆಗಳು, ಕೈಗಾರಿಕೆ, ಯುವಕರಿಗೆ ಕೆಲಸ ಕೊಡುವ ದಿನಗಳು ಬಂದಿವೆ. ತಾವು ಅದನ್ನೆಲ್ಲಾ ಮುಂದೆ ನೋಡ್ತೀರಿ. ಈ ಮಣ್ಣಲ್ಲಿ ಆ ಶಕ್ತಿ ಇದೆ ಎಂದರು.

Add Asianetnews Kannada as a Preferred SourcegooglePreferred

ನಾನು ಮೊದಲು ಚುನಾವಣೆಯಲ್ಲಿ ಸ್ಪರ್ಧಿಸುವಾಗಲೂ ಹೇಳಿದ್ದೆ, ನಿಮಗೆ ಮನಸ್ಸಿನಲ್ಲಿ ಏನಿದೆಯೋ ಅದನ್ನು ಮಾಡಿ ಎಂದು ಹೇಳಿದ್ದೆ. ನಿಮ್ಮ ಮತದಲ್ಲಿ ಬಹಳ ದೊಡ್ಡ ಶಕ್ತಿ ಇದೆ ಅಂತ ಹೇಳ್ತಾ ಇದ್ದೆ. ನಿಮ್ಮ ಮತದಿಂದ ಶಾಸಕ, ಮಂತ್ರಿ, ಕೊನೆಗೆ ಮುಖ್ಯಮಂತ್ರಿ ಕೂಡಾ ಆದೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗಲಿದೆ. ನಾನು ಮಾತನಾಡಲ್ಲ, ಬರುವಂತ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ಆಗಲಿದೆ. ಯಾವುದೇ ರಾಗ ದ್ವೇಷ ನಾನು ಇಟ್ಟುಕೊಂಡಿಲ್ಲ, ನನ್ನ ಬಗ್ಗೆ ನಾನೇ ಹೇಳಿಕೊಳ್ಳೋದು ಸರಿಯಲ್ಲ ಎಂದರು.

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ: ಸಿಎಂ ಬೊಮ್ಮಾಯಿ ಹರ್ಷ

1824ರಂದು ಬ್ರಿಟಿಷರ ದೈತ್ಯ ಸೈನ್ಯ ಸೋಲಿಸಿದ ವೀರ ರಾಣಿ ಚೆನ್ನಮ್ಮನ ವೀರತ್ವ, ಶೌರತ್ವ ಪ್ರಗತಿಯಲ್ಲಿ ನಾವು ತೋರಿಸಬೇಕಿದೆ. 1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಆದರೆ ಅದಕ್ಕೂ 40 ವರ್ಷ ಮುಂಚೆ ಚೆನ್ನಮ್ಮ ಹೋರಾಡಿದ್ರು, ಡಿಸೆಂಬರ್‌ ತಿಂಗಳಲ್ಲಿ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ ಜಾರಿಯಾಗಲಿದೆ ಎಂದರು. ನಿಮ್ಮನ್ನು ನೋಡಿ ನನಗೆ ಆನೆ ಬಲ ಬಂದಿದೆ. ಇದನ್ನು ರಾಜ್ಯದ ಅಭಿವೃದ್ಧಿಗೆ ಬಳಸುತ್ತೇನೆ. ಆದರೆ ನೀವು ಕೊಟ್ಟಶಕ್ತಿಯನ್ನು ಗುಲಗಂಜಿಯಷ್ಟೂ ಸ್ವಂತಕ್ಕೆ ಬಳಸಲ್ಲ. ಮೊದಲು 14ರಿಂದ 15 ತಾಸು ಕೆಲಸ ಮಾಡ್ತಿದ್ದೆ, ನಾಳೆಯಿಂದ 2 ತಾಸು ಹೆಚ್ಚು ಕೆಲಸ ಮಾಡುವೆ. ಸದಾಕಾಲ ನಿಮ್ಮ ಶಕ್ತಿ, ಆಶೀರ್ವಾದ ನನ್ನ ಮೇಲಿರಲಿ ಎಂದರು.

ಜಯಂತ್ಯುತ್ಸವದಲ್ಲಿ ಭಾಗಿ

ಶಿಗ್ಗಾಂವಿ ಪಟ್ಟಣಲ್ಲಿರುವ ವೀರ ರಾಣಿ ಚೆನ್ನಮ್ಮ ಮೂರ್ತಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾಲಾರ್ಪಣೆ ಮಾಡಿದರು. ಬಳಿಕ ಗಂಗಮ್ಮ ಬೊಮ್ಮಾಯಿ ಟ್ರಸ್ಟ್‌ ವತಿಯಿಂದ ಏರ್ಪಡಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾದರು.