ಕೊಪ್ಪಳ ಬೆಳವಣಿಗೆಗೆ ಸಿಎಂ ಯಡಿಯೂರಪ್ಪ ಅಸಮಾಧಾನ| ಕಾನೂನು ರೀತಿಯಲ್ಲಾದರೂ ಬ್ರೇಕ್‌ ಹಾಕಿ|ಪಂಚಾಯಿತಿ ಕಾಯ್ದೆ ತಿದ್ದುಪಡಿಗೆ ನಿಯಮ ರೂಪಿಸಿಲ್ವಂತೆ| ರಾಜ್ಯ ಸರ್ಕಾರವೇ ಅವಿಶ್ವಾಸದ ಆಟಕ್ಕೆ ಬ್ರೇಕ್‌ ಹಾಕಲು ಮುಂದಾಗಿರುವುದರಿಂದ ವಿಶ್ವನಾಥ ರೆಡ್ಡಿ ಸೇಫ್‌ ಆಗಿದ್ದಾರೆ ಎಂದೇ ಹೇಳಲಾಗುತ್ತದೆ|

ಸೋಮರಡ್ಡಿ ಅಳವಂಡಿ

Add Asianetnews Kannada as a Preferred SourcegooglePreferred

ಕೊಪ್ಪಳ(ಮೇ.17): ಇಲ್ಲಿಯ ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯರು ಪಕ್ಷ ತೊರೆದು ಕಾಂಗ್ರೆಸ್‌ ತೆಕ್ಕೆಯಲ್ಲಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗರಂ ಆಗಿದ್ದಾರೆ. ಜಿಲ್ಲೆಯ ಪಕ್ಷದ ನಾಯಕರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲ, ಕಾನೂನು ಸಮರಕ್ಕಾದರೂ ಮುಂದಾಗಿ ಎಂದು ತಾಕೀತು ಮಾಡಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿ ಇದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿನ ಜಿಪಂ ಆಡಳಿತವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕಾದ ತಾಕತ್ತು ಇರುವ ವೇಳೆಯಲ್ಲಿ ಕೊಪ್ಪಳದಲ್ಲಿ ಪಕ್ಷ ತೊರೆದು ಕಾಂಗ್ರೆಸ್‌ಗೆ ಹೋಗುವುದು ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜಿಪಂನಲ್ಲಿ ನಡೆದಿರುವ ಬೆಳವಣಿಗೆಗೆ ಹೇಗಾದರೂ ಮಾಡಿ ಬ್ರೇಕ್‌ ಹಾಕಿ, ಇಲ್ಲದಿದ್ದರೆ ಪಕ್ಷಕ್ಕೆ ಭಾರಿ ಮುಖಭಂಗವಾಗುತ್ತದೆ ಮತ್ತು ರಾಜಕೀಯವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ನಾಯಕರು ಗರಂ ಆಗಿದ್ದಾರೆ ಎನ್ನಲಾಗಿದೆ.

ಕೊರೋನಾ ಮಧ್ಯೆಯೂ ರಾಜಕೀಯ: BJPಗೆ ಶಾಕ್‌ಗೆ ಕೊಟ್ಟ ಆಪರೇಷನ್‌ ಹಸ್ತ..!

ಬಿಗ್‌ ಬ್ರೇಕ್‌

ಕಾಂಗ್ರೆಸ್‌ ಅವಿಶ್ವಾಸ ಗೊತ್ತುವಳಿಗೆ ಬಿಜೆಪಿ ಸದಸ್ಯರನ್ನು ಬಳಕೆ ಮಾಡಿರುವ ವಿಚಾರದಲ್ಲಿ ಕಾಂಗ್ರೆಸ್‌ಗೆ ಶಾಕ್‌ ನೀಡಲು ಬಿಜೆಪಿ ಮುಂದಾಗಿದೆ. ಈಗ ಅವಿಶ್ವಾಸ ಮಂಡನೆಗೆ ಮುಂದಾಗಿರುವುದು ಜಿಲ್ಲಾ ಪಂಚಾಯಿತಿ ಕಾಯ್ದೆ ತಿದ್ದುಪಡಿಯ ಪ್ರಕಾರ. ಈ ಹಿಂದಿನ ನಿಯಮದ ಪ್ರಕಾರ ಅವಿಶ್ವಾಸಕ್ಕೆ ಅವಕಾಶವೇ ಇರಲಿಲ್ಲ. ನೂತನ ತಿದ್ದುಪಡಿಯನ್ನು ಈಗಾಗಲೇ ಸರ್ಕಾರ ಅನುಮೋದನೆ ನೀಡಿದ್ದು, ರಾಜ್ಯಪಾಲರು ಅಂಕಿತ ಹಾಕಿದ್ದರೂ ಅದಕ್ಕೆ ಇನ್ನು ನಿಯಮಗಳನ್ನು ರೂಪಿಸಿ, ಅದಕ್ಕೆ ಸರ್ಕಾರ ಸಮ್ಮತಿ ನೀಡಿಲ್ಲ. ಹೀಗಾಗಿ, ಈ ಆಧಾರದಲ್ಲಿ ಅವಿಶ್ವಾಸಕ್ಕೆ ಇನ್ನು ಅವಕಾಶವೇ ಸಿಕ್ಕಿಲ್ಲವಾದ್ದರಿಂದ ಅವಿಶ್ವಾಸ ಮಂಡನೆ ಹೇಗೆ ಸಾಧ್ಯ ಎನ್ನುವುದು ಬಿಜೆಪಿಯ ಗುರಾಣಿ.

ಈಗಾಗಲೇ ರಾಜ್ಯ ಸರ್ಕಾರವೂ ಇದಕ್ಕೆ ಸ್ಕೆಚ್‌ ಹಾಕಿದ್ದು, ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಅವಿಶ್ವಾಸ ಮಂಡನೆಗೆ ಅವಕಾಶ ಸಿಗದಂತೆ ಮಾಡುವ ಸಾಧ್ಯತೆ ಇದ್ದು, ಅದನ್ನು ಕಾಂಗ್ರೆಸ್‌ ವಿರುದ್ಧ ಬಳಕೆ ಮಾಡುತ್ತಿದೆ.

ವಿಶ್ವನಾಥ ರೆಡ್ಡಿ ಸೇಫ್‌

ರಾಜ್ಯ ಸರ್ಕಾರವೇ ಅವಿಶ್ವಾಸದ ಆಟಕ್ಕೆ ಬ್ರೇಕ್‌ ಹಾಕಲು ಮುಂದಾಗಿರುವುದರಿಂದ ವಿಶ್ವನಾಥ ರೆಡ್ಡಿ ಸೇಫ್‌ ಆಗಿದ್ದಾರೆ ಎಂದೇ ಹೇಳಲಾಗುತ್ತದೆ. ಬಿಜೆಪಿ ತನಗೆ ಆಗಿರುವ ಮುಖಭಂಗಕ್ಕೆ ಏದಿರೇಟು ನೀಡಲು ಮುಂದಾಗಿದ್ದು, ಬಿಜೆಪಿ ಸದಸ್ಯರು ಕೈಕೊಟ್ಟರೂ ಅವಿಶ್ವಾಸವೇ ಮಂಡನೆಯಾಗದಂತೆ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.