ಕರಾವಳಿಯಲ್ಲಿ ನಿತ್ಯ ಬಿಸಿಲು ಏರಿಕೆ ಕಾಣುತಿದ್ದು , ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಸರಿಯಾಗಿ ಫಸಲು ಸಿಗದೆ ಇಳುವರಿ ಕುಂಠಿತಗೊಂಡು ನಿರಾಶರಾಗಿದ್ದಾರೆ. ಕರಾವಳಿ ಭಾಗದಲ್ಲಿ ಮಾವು, ಹಲಸು ಹಾಗೂ ಗೇರು ಹಣ್ಣಿನಿಂದ ಅದಾಯ ಪಡೆಯುತ್ತಿದ್ದ ರೈತರು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಫಸಲು ಬರದೆ ನಷ್ಟಅನುಭವಿಸಿದ್ದಾರೆ.

ರಾಂ ಅಜೆಕಾರು

Add Asianetnews Kannada as a Preferred SourcegooglePreferred

ಕಾರ್ಕಳ (ಮಾ.30) : ಕರಾವಳಿಯಲ್ಲಿ ನಿತ್ಯ ಬಿಸಿಲು ಏರಿಕೆ ಕಾಣುತಿದ್ದು , ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಸರಿಯಾಗಿ ಫಸಲು ಸಿಗದೆ ಇಳುವರಿ ಕುಂಠಿತಗೊಂಡು ನಿರಾಶರಾಗಿದ್ದಾರೆ. ಕರಾವಳಿ ಭಾಗದಲ್ಲಿ ಮಾವು, ಹಲಸು ಹಾಗೂ ಗೇರು ಹಣ್ಣಿನಿಂದ ಅದಾಯ ಪಡೆಯುತ್ತಿದ್ದ ರೈತರು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಫಸಲು ಬರದೆ ನಷ್ಟಅನುಭವಿಸಿದ್ದಾರೆ.

ಕೈಕೊಟ್ಟಹವಾಮಾನ: ತೋಟಗಾರಿಕಾ ಬೆಳೆಗಳ ಜೊತೆಗೆ ಮಾವು, ಗೇರು, ಹಲಸು ಬೆಳೆಸುವುದು ವಾಡಿಕೆ. ಆದರೆ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚುತಿದ್ದು ಹವಾಮಾನ ಬದಲಾವಣೆಯಿಂದಾಗಿ ಇಳುವರಿ ಕುಸಿತವಾಗಿದೆ. ಅಕ್ಟೋಬರ್‌, ಡಿಸೆಂಬರ್‌ ಜನವರಿ ತಿಂಗಳಲ್ಲಿ ಎಲೆ ಚಿಗುರಿ ಹೂ ಬಿಡುವ ಕಾಲವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಚಳಿ ಇರದೆ ಬಿಸಿಯೇ ಹೆಚ್ಚಾಗಿದ್ದ ಹೂ ಸಂಪೂರ್ಣ ಸುಟ್ಟು ಹೋಗಿದೆ. ನಿತ್ಯ 36- 38 ಡಿಗ್ರಿವರೆಗೂ ತಾಪಮಾನ ಇರುವುದರಿಂದ ಹೂಗಳು ಸಂಪೂರ್ಣ ಸುಟ್ಟು ಹೋಗಿ ಫಸಲು ಕೈಕೊಟ್ಟಿದೆ.

ಕರ್ನಾಟಕದಲ್ಲಿ ಮುಂದಿನ 4 ದಿನ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ

ಅಲ್ಪ ಸ್ವಲ್ಪ ಫಸಲಿಗೂ ಬೆಲೆ ಇಲ್ಲ: ಕಾರ್ಕಳ ತಾಲೂಕಿನಲ್ಲಿ ಸುಮಾರು 100 ಹೆಕ್ಟೇರ್‌ನಲ್ಲಿ ಮಾವು ಹಾಗೂ 1020 ಹೆಕ್ಟೇರ್‌ ಗೇರು ಬೆಳೆ ಬೆಳೆಯಲಾಗುತ್ತಿದೆ. ಇದರಲ್ಲಿ ಗೇರು ಇಳುವರಿ ಇದ್ದರೂ ಅದಕ್ಕೆ ಸರಿಯಾಗಿ ಬೆಲೆ ಸಿಗದೆ ಬೆಳಗಾರರು ನಷ್ಟಅನುಭವಿಸುತ್ತಿದ್ದಾರೆ. ಗೇರಿಗೆ ಕೆ.ಜಿ.ಗೆ 110 ರು. ನಿಗದಿಯಾಗಿದ್ದರೂ, ಕಳೆದ ತಿಂಗಳು ಸುರಿದ ಅಕಾಲಿಕ ಮಳೆಗೆ ದರ ಕುಸಿತ ಕಂಡಿದ್ದು, ಕೆಜಿಗೆ 95 ರುಪಾಯಿ ಆಗಿದೆ.

ಮಾವಿನ ಮಿಡಿಗೆ ಭಾರಿ ಡಿಮಾಂಡ್‌: ಕೆಲವು ಪ್ರದೇಶಗಳಲ್ಲಿ ಮಾವಿನ ಮಿಡಿಗಳು ದೊರೆಯುತ್ತಿದ್ದು, 100 ಮಿಡಿಗಳಿಗೆ ತಲಾ 800 ರು.ಗಳಂತೆ ಮಾರಾಟ ಮಾಡಲಾಗುತ್ತಿದೆ. ಮದುವೆ, ಮುಂಜಿ ನೇಮೋತ್ಸವ ಸಮಾರಂಭಗಳಲ್ಲಿ ಹಲಸಿನ ಹಣ್ಣಿಗೆ ಬೇಡಿಕೆ ಬರುತಿದ್ದು ಗಾತ್ರಕ್ಕೆ ಅನುಗುಣವಾಗಿ ಬೆಲೆ ನಿರ್ಧರಿತವಾಗುತ್ತಿದೆ. ಸಣ್ಣ ಗಾತ್ರದ ಹಲಸಿಗೆ 30 ರುಪಾಯಿ ಆದರೆ ದೊಡ್ಡ ಗಾತ್ರದ ಹಲಲು ಒಂದಕ್ಕೆ 100 ರುಪಾಯಿವರೆಗೂ ಮಾರಾಟವಾಗುತ್ತಿದೆ.

ಹವಮಾನ ವೈಪರೀತ್ಯವೇ ಇಳುವರಿ ಕುಂಠಿತಕ್ಕೆ ಕಾರಣವಾಗಿದ್ದು ಕಾರ್ಕಳ ತಾಲೂಕಿನಲ್ಲಿ ಗಣನೀಯ ಪ್ರಮಾಣದಲ್ಲಿ ಮಾವು, ಹಲಸು, ಗೇರು ಇಳುವರಿ ಕಡಿಮೆಯಾಗಿದೆ

- ಶ್ರೀನಿವಾಸ್‌, ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ, ಕಾರ್ಕಳ

 ಇತ್ತೀಚೆಗೆ ಸುರಿದ ಅಕಾಲಿಕ ಮಳೆಯ ಬಳಿಕ ಗೇರು ಬೀಜಕ್ಕೆ ಸೂಕ್ತ ಬೆಲೆ ಇಲ್ಲ. ಬೆಂಬಲ ಬೆಲೆಯೂ ಇಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ

- ಅಶ್ವತ್‌್ಥ ನಾರಾಯಣ ಕೆರುವಾಶೆ , ಕೃಷಿಕರು