ಹಿರೇನಾಗವೇಲಿ ಕ್ವಾರಿ ದುರಂತದ ತನಿಖೆಯನ್ನು ಸಿಐಡಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ (ಫೆ.24): ಹಿರೇನಾಗವೇಲಿ ಕ್ವಾರಿ ದುರಂತಕ್ಕೆ ಕಾರಣವಾದವರು ಯಾವುದೇ ಪಕ್ಷಕ್ಕೆ ಸೇರಿರಲಿ, ಘಟನೆಯ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ದುರಂತದ ತನಿಖೆಯನ್ನು ಸಿಐಡಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕ್ವಾರಿಗಾಗಿ ಸಂಗ್ರಹಿಸಿಟ್ಟಿದ್ದ ಅಕ್ರಮ ಸ್ಫೋಟಕ ಸ್ಫೋಟಿಸಿ ಸಂಭವಿಸಿದ ದುರಂತದಲ್ಲಿ ಆರು ಮಂದಿ ಮೃತಪಟ್ಟಘಟನಾ ಸ್ಥಳ ಹಿರೇನಾಗವೇಲಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ಸ್ಫೋಟಕ ಸಾಗಿಸುವ ವೇಳೆ ದುರಂತ ಸಂಭವಿಸಿ ಮೃತಪಟ್ಟಆರೂ ಮಂದಿಯ ಮೃತದೇಹಗಳು ಛಿದ್ರಛಿದ್ರವಾಗಿವೆ. ಮೃತದೇಹಗಳು ಬಹುದೂರದವರೆಗೆ ಹೋಗಿ ಬಿದ್ದಿರುವುದು ಸ್ಫೋಟದ ಭೀಕರತೆ ಸೂಚಿಸುತ್ತದೆ ಎಂದರು.
ಗುಡಿಬಂಡೆ ಕ್ರಷರ್ ಜಿಲೆಟಿನ್ ಬ್ಲಾಸ್ಟ್: ಸ್ಥಳಕ್ಕೆ ಸುಧಾಕರ್ ಭೇಟಿ ..
ಪೆಟ್ರೋಲಿಯಂ ಜೆಲ್ ಮತ್ತು ಅಮೋನಿಯಂ ನೈಟ್ರೇಟ್ನಿಂದ ಸ್ಫೋಟ ಸಂಭವಿಸಿರಬಹುದು ಎಂದು ತಜ್ಞರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಅಕ್ರಮ ಸ್ಫೋಟಕ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನನಗಿರುವ ಮಾಹಿತಿ ಪ್ರಕಾರ ಮೂರ್ನಾಲ್ಕು ವರ್ಷದಿಂದ ಗಣಿಗಾರಿಕೆ ನಡೆಯುತ್ತಿದೆ. ದುರಂತಕ್ಕೆ ಕಾರಣಿವಾಗಿರುವ ಮೂರು ಮಂದಿ ಗಣಿಮಾಲೀಕರನ್ನು ಬಂಧಿಸಲು ಮೂರು ಮಂದಿ ವಿಶೇಷ ತಂಡ ರಚನೆಗೆ ಸೂಚಿಸಲಾಗಿದೆ. ಈ ಪ್ರಕರಣವನ್ನು ಸಹ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆ ಹೇಗೆ ಆಯಿತು, ಸ್ಫೋಟಕ ಎಲ್ಲಿಂದ ಬಂತು, ಆಂಧ್ರದಿಂದ ಪೂರೈಕೆ ಆಗಿದೆಯೇ ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಸ್ಥಳೀಯ ಪೊಲೀಸರಿಂದ ತನಿಖೆ ಆದರೆ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗುವುದು. ಈ ದುರಂತದಲ್ಲಿ ಪೊಲೀಸ್ ಅಧಿಕಾರಿಗಳ ಲೋಪದ ಬಗ್ಗೆ 24 ಗಂಟೆಯಲ್ಲಿ ವರದಿ ನೀಡುವಂತೆ ಎಡಿಜಿಪಿ ಅವರಿಗೆ ಆದೇಶಿಸಲಾಗಿದೆ. ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿದ್ದರೂ ಎಸ್ಪಿಯಿಂದ ಹಿಡಿದು ಡಿವೈಎಸ್ಪಿ, ಸಿಪಿಐ, ಪಿಎಸ್ಐ ಯಾರೇ ಆದರೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಫೆ.7ರಂದೇ ರೈಡ್ ಆಗಿತ್ತು: ಸ್ಫೋಟ ಸಂಭವಿಸಿರುವ ಕ್ವಾರಿ ಮೇಲೆ ಫೆ.7ರಂದೇ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದರು. ಅದಕ್ಕೂ ಮೊದಲು ಎಸ್ಪಿ ಕೂಡ ದಾಳಿ ನಡೆಸಿದ್ದರು. ಫೆ.7 ರಂದು ವಾಹನವೊಂದನ್ನು ಜಪ್ತಿ ಮಾಡಿದ್ದರು. ತಮ್ಮ ಕ್ವಾರಿಯಲ್ಲಿ ಸ್ಫೋಟಕ ಸಿಕ್ಕರೆ ದೊಡ್ಡ ಕೇಸ್ ಆಗುತ್ತದೆಯೆಂಬ ಕಾರಣಕ್ಕೆ ಸ್ಫೋಟಕಗಳನ್ನು ಹೂತುಹಾಕಲು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ. ಅನುಭವ ಇಲ್ಲದ ವ್ಯಕ್ತಿಗಳ ಕೈಯಲ್ಲಿ ಈ ಕೆಲಸ ಮಾಡಿಸಿರುವುದರಿಂದ ದುರಂತ ಸಂಭವಿಸಿದೆ ಎಂದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 24, 2021, 8:22 AM IST