ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದ ಗೋವಿಂದ ಕಾರಜೋಳಗೆ ದಲಿತ ಮುಖಂಡರಿಂದಲೇ ತರಾಟೆ!
ಚಿತ್ರದುರ್ಗದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಗೋವಿಂದ ಕಾರಜೊಳ ವಿರುದ್ಧ ಚಿತ್ರದುರ್ಗ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
![Chitradurga Dalit leaders lashed out at Karajola for insulting CM Siddaramaiah sat Chitradurga Dalit leaders lashed out at Karajola for insulting CM Siddaramaiah sat](https://static-ai.asianetnews.com/images/01hhytbj4hv3er0qejxzwtds0d/govind-karjol_363x203xt.jpg)
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಡಿ.18): ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರಾಜ್ಯದಲ್ಲಿ ದೀನ ದಲಿತರಿಗೆ ರಕ್ಷೆ ಇಲ್ಲದಂತಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಗೋವಿಂದ ಕಾರಜೋಳ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಇದರ ಬೆನ್ನಲ್ಲಿಯೇ ನೀವು ಸಮಾಜಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ದಲಿತರಿಗೆ ಅನ್ಯಾಯ ಮಾಡಿದ್ದೀರಿ ಎಂದು ಚಿತ್ರದುರ್ಗ ನಗರದ ದಲಿತ ನಾಯಕರು ಘೇರಾವ್ ಮಾಡಿದ ಘಟನೆ ನಡೆದಿದೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿಯ ಹಿರಿಯ ಮಾಜಿ ಸಚಿವ ಸಚಿವ ಗೋವಿಂದ ಕಾರಜೋಳ ಅವರು ಪ್ರಸ್ತುತ ದಿನಮಾನಗಳ ಕುರಿತು ನಡೆಸುತ್ತಿದ್ದ ಪತ್ರಿಕಾಗೋಷ್ಠಿಗೆ, ಕೆಲ ದಲಿತ ಮುಖಂಡರು ಏಕಾಏಕಿ ನುಗ್ಗಿ ಗಲಾಟೆ ನಡೆಸಿದ ಪ್ರಸಂಗ ನಡೆಯಿತು. ಸ್ಥಳೀಯ ದಲಿತ ಮುಖಂಡರಾದ ಹನುಮಂತಪ್ಪ ದುರ್ಗ ಹಾಗೂ ಇನ್ನಿತರ ದಲಿತ ಮುಖಂಡರು ಮಾಜಿ ಸಚಿವರ ಪತ್ರಿಕಾಗೋಷ್ಠಿ ಶುರುವಾಗುವ ಮುನ್ನವೇ ಗಲಾಟೆ ನಡೆಸಿದರು.
ಈ ಹಿಂದೆ ನೀವು ಸಮಾಜಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ದಲಿತರಿಗೆ ಅನ್ಯಾಯ ಮಾಡಿದ್ದೀರಿ. ದಲಿತರಿಗೆ ಸಾಲ ನೀಡುವ ಯೋಜನೆಯನ್ನು ಕಡಿತ ಮಾಡಿದ್ದೀರಿ ಎಂದು ಆರೋಪಿಸಿ ಮಾಜಿ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಮೊದ ಮೊದಲಿಗೆ ಸಮಾಧಾನವಾಗಿಯೇ ಉತ್ತರಿಸಿದ ಕಾರಜೋಳ ಅವರು, ಸದ್ಯ ಪತ್ರಿಕಾಗೋಷ್ಠಿ ನಡೆಯುತ್ತಿದೆ. ಮುಗಿದ ಬಳಿಕ ಸಮಾಧಾನವಾಗಿಯೇ ಚರ್ಚೆ ಮಾಡೋಣ ಸ್ವಲ್ಪ ಕಾಯಿರಿ ಎಂದರು. ಇದ್ಯಾವುದಕ್ಕೂ ಬಗ್ಗದ, ಜಗ್ಗದ ದಲಿತ ಮುಖಂಡರು ಮಾಜಿ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಇದ್ರಿಂದ ಸಿಟ್ಟೆಗೆದ್ದ ಮಾಜಿ ಸಚಿವರು, ನೀವು ಏಕಾಏಕಿ ಪತ್ರಿಕಾಗೋಷ್ಠಿ ನುಗ್ಗಿದ್ದಲ್ಲದೇ ಗುಂಡಾಗಿರಿ ಮಾಡ್ತಿದ್ದೀರಿ ಇದೆಲ್ಲಾ ಸರಿಯಲ್ಲ ಮೊದಲು ಹೊರಗೆ ನಡೆಯಿರಿ ಎಂದರು.
ಷಷ್ಠಿ ಪಂಚಮಿಯಂದು ಹಾವಿನ ಹುತ್ತಕ್ಕೆ ಕೋಳಿ ಮೊಟ್ಟೆ, ರಕ್ತ ಅರ್ಪಿಸಿದರೆ ಹಾವು ಕಚ್ಚೊಲ್ಲ!
ನನ್ನ ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿ ಎಲ್ಲೂ ನೋಡಿರಲಿಲ್ಲ. ಇದೊಂದು ಗೂಂಡಾ ರಾಜ್ಯ ಅಗಿದೆ, ಈ ಹೀಗೆ ಎಲ್ಲರೂ ಬಂದು ಗುಂಡಾಗುರಿ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಕೂಡಲೇ ಈ ಘಟನೆ ಕುರಿತು ಸಿಎಂ ಸಿದ್ದರಾಮಯ್ಯ ನವರು ಗಮನ ಹರಿಸಬೇಕು. ಗಲಾಟೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಅದಾದ ಬಳಿಕವೂ ದಲಿತ ಮುಖಂಡರು ಪ್ರವಾಸಿ ಮಂದಿರದ ಬಳಿ ಗಲಾಟೆ ನಡೆಸಿದ ಪರಿಣಾಮ, ಪತ್ರಿಕಾಗೋಷ್ಠಿಯಲ್ಲಿಯೇ ಪೂರ್ವ ವಲಯ ಐಪಿಪಿ ತ್ಯಾಗರಾಜನ್ ಅವರಿಗೆ ಕರೆ ಮಾಡಿ ಕೂಡಲೇ ಗೂಂಡಾ ವರ್ತನೆ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರಾಜ್ಯದಲ್ಲಿ ದೀನ ದಲಿತರಿಗೆ ರಕ್ಷೆ ಇಲ್ಲದಂತಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಗೋವಿಂದ ಕಾರಜೋಳ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಗುಂಡಾಗಿರಿ ಮಾಡ್ತಿದ್ದಾರೆ. ಇದ್ರಿಂದಾಗಿ ಪೃಥ್ವಿಸಿಂಗ್ ಮೇಲೆ ಚಾಕು ಇರಿದು ಹಲ್ಲೆ ನಡೆಸಲಾಗಿದೆ. ಮಂತ್ರಿ ಪ್ರಭಾವಕ್ಕೆ ಒಳಗಾಗಿ ಆರೋಪಿಗಳ ರಕ್ಷಣೆ ನಡೆದಿದೆ ಎಂದು ಕಿಡಿಕಾರಿದರು.
ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಹೇಯ ಕೃತ್ಯ ನಡೆದಿದೆ. ಸರ್ಕಾರ ಕಾಟಾಚಾರಕ್ಕೆ ಸಿಓಡಿಗೆ ನೀಡುವುದಾಗಿ ಹೇಳಿ ಕೈತೊಳೆದುಕೊಂಡಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳಿಗೆ ಮಲದ ಗುಂಡಿಗಿಳಿಸಿದ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಈವರೆಗೆ ಯಾರೂ ಭೇಟಿ ನೀಡುವ ಕೆಲಸ ಮಾಡಿಲ್ಲ. ವಸತಿ ಶಾಲೆಯ ಬಾತ್ ರೂಮ್ನಲ್ಲಿ ಕ್ಯಾಮರಾ ಇರಿಸಿದ ಪ್ರಕರಣ ನಡೆದಿದೆ. ಆರೋಪಿಗಳ ವಿರುದ್ಧ ಫೋಕ್ಸೋ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಬೆಳಗಾವಿ ಸಂತ್ರಸ್ಥೆ ಮಹಿಳೆ ಕೇಸ್ ವಿಚಾರಣೆಯಲ್ಲಿ ಮಾನವೀಯತೆ, ಸ್ತ್ರೀ ಗೌರವ ಎತ್ತಿಹಿಡಿದ ಹೈಕೋರ್ಟ್!
ಬೆಳಗಾವಿ ಅಧಿವೇಶನ ಕಾಟಾಚಾರದ ಅಧಿವೇಶನ ಆಗಿದೆ, ಈ ಹಿಂದೆ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಗಾಗಿ ಬಿಎಸ್ ವೈ ಚಾಲನೆ ನೀಡಿದ್ದರು. ಈ ಸಲದ ಅಧಿವೇಶನದಲ್ಲಿ ಅಭಿವೃದ್ಧಿಯ ಚರ್ಚೆ ಆಗಿಲ್ಲ. ಸಿಎಂ ಸಿದ್ಧರಾಮಯ್ಯ ಕಾಟಾಚಾರಕ್ಕೆ ಎಂಟು ಘೋಷಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಯೋಜನೆಗಳಿಗೆ ಹಣ ಮೀಸಲಿಡುವ ಕೆಲಸ ಮಾಡಿಲ್ಲ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಉದ್ಯಮ ಬಂದ್ ಆಗಿವೆ. ವಿದ್ಯುತ್ ದರ ಏರಿಕೆಯಿಂದ ಉದ್ಯಮಗಳು ಬಂದ್ ಆಗಿವೆ. ಬೆಳಗಾವಿಯ ಹಳೇ ಇಂಡಸ್ಟ್ರಿಯಲ್ ಏರಿಯಾ ಬಣಬಣ ಎನ್ನುವಂತಾಗಿದೆ. ಕಾರ್ಮಿಕರು ಗೋವಾ, ಮುಂಬೈಗೆ ಗುಳೆ ಹೋಗುತ್ತಿದ್ದಾರೆ. ಮಹಾರಾಷ್ಟ್ರ ಮಾದರಿ ವಿದ್ಯುತ್ ಸೌಲಭ್ಯ ನೀಡಿ ಉದ್ಯಮ ಉಳಿಸಬೇಕು. ದುಡಿಯುವ ವರ್ಗ, ಉದ್ಯಮಕ್ಕೆ ಸರ್ಕಾರದಿಂದ ದೊಡ್ಡ ದ್ರೋಹ ಆಗಿದೆ ಎಂದರು.