ಮಣಿಪಾಲ್ ಬಳಿಯ ರಸ್ತೆಯೊಂದರ ಬದಿಯಲ್ಲಿ ಒಂದು ಲೋಡಿನಷ್ಟು ಸಿಮೆಂಟ್ ವ್ಯರ್ಥವಾಗಿ ರಸ್ತೆ ಬದಿಯಲ್ಲಿ ಹಾಕಲಾಗಿದೆ. ಮಳೆಯಲ್ಲಿ ನೆನೆದು ಉಪಯೋಗಕ್ಕೆ ಬಾರದಂತಾಗಿದೆ.

ಮಣಿಪಾಲ (ಆ.13): ಇಲ್ಲಿನ ನೆಹರು ನಗರ ಸಂಪರ್ಕ ರಸ್ತೆಯ ಪಕ್ಕದಲ್ಲಿ ಕಳೆದ ಹಲವು ದಿನಗಳಿಂದ ಸುಮಾರು ಒಂದು ಲೋಡಿನಷ್ಟು ಸಿಮೆಂಟ್ ನ್ನು ದಾಸ್ತಾನು ಮಾಡಲಾಗಿದ್ದು, ಅದೀಗ ಮಳೆಯಲ್ಲಿ ನೆನೆದು ಬಳಸುವುದಕ್ಕೆ ಸಾಧ್ಯವಾಗದಂತೆ ವ್ಯರ್ಥವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಇಲ್ಲಿ ವ್ಯರ್ಥವಾದ ಭಾರಿ ಪ್ರಮಾಣದ ಸಿಮೆಂಟನ್ನು ಯಾರು ತಂದು ಇಟ್ಟಿದ್ದಾರೆ ಎಂಬ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಇಲ್ಲ, ನಗರಸಭೆಯ ಅಧಿಕಾರಿಗಳಿಂದಲೂ ಸರಿಯಾದ ಉತ್ತರ ಸಿಗುತ್ತಿಲ್ಲ.

ಆದರೇ ಈ ಮಣ್ಣಿನ ರಸ್ತೆ ಕಾಂಕ್ರೀಕರಣಕ್ಕೆ ತಂದಿಟ್ಟಿರುವ ಸಿಮೆಂಟ್ ಇದಾಗಿದ್ದು, ಗುತ್ತಿಗೆದಾರರ ಮತ್ತು ಅಧಿಕಾರಿಗಳ ಬೆಜವಾಬ್ದಾರಿಯಿಂದ ಲಕ್ಷಾಂತರ ರು. ಮೌಲ್ಯದ ಕೊರಮಂಗಲ ಕಂಪೆನಿಯ ಸಿಮೆಂಟ್ ಹೀಗೆ ನಿರುಪಯುಕ್ತವಾಗಿ ಹಾಳಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಯಾರೇ ಆಗಲಿ, ಸಿಮೆಂಟನ್ನು ಈ ರೀತಿ ವ್ಯರ್ಥ ಮಾಡುವ ಬದಲು ಅವಶ್ಯಕತೆಇದ್ದವರಿಗೆ ನೀಡಿದ್ದಲ್ಲಿ ಉಪಯುಕ್ತವಾಗುತಿತ್ತೆಂದು ಸ್ಥಳೀಯರು ವಿಷಾಧ ವ್ಯಕ್ತಪಡಿಸಿದ್ದಾರೆ.

ಇದೊಂದು ಅವ್ಯವಹಾರದ ಪ್ರಕರಣ ಆಗಿರಲೂಬಹುದಾಗಿದ್ದು, ಈ ಬಗ್ಗೆ ಸರಿಯಾದ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಆಗ್ರಹಿಸಿದ್ದಾರೆ.