Asianet Suvarna News Asianet Suvarna News

Uttara Kannada: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆನ್ನುವ ಬೆನ್ನಲ್ಲೇ ಕ್ಯಾನ್ಸರ್ ರೋಗದ ಕಾಟ!

ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆನ್ನುವುದು ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಕೂಗು. ಈ ನಡುವೆ ಜಿಲ್ಲೆಯಲ್ಲಿ ಅಷ್ಟೇ ಪ್ರಮಾಣದಲ್ಲಿ ಮಾರಕ ಕ್ಯಾನ್ಸರ್ ರೋಗ ಕಾಣಿಸಿಕೊಳ್ಳುತ್ತಿರುವುದು ತೀವ್ರ ಕಳವಳಕಾರಿ ವಿಚಾರ. 

Cancer problem is more in Uttara Kannada district gvd
Author
First Published Dec 11, 2023, 10:23 PM IST

ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಉತ್ತರ ಕನ್ನಡ

ಉತ್ತರ ಕನ್ನಡ (ಡಿ.11): ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆನ್ನುವುದು ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಕೂಗು. ಈ ನಡುವೆ ಜಿಲ್ಲೆಯಲ್ಲಿ ಅಷ್ಟೇ ಪ್ರಮಾಣದಲ್ಲಿ ಮಾರಕ ಕ್ಯಾನ್ಸರ್ ರೋಗ ಕಾಣಿಸಿಕೊಳ್ಳುತ್ತಿರುವುದು ತೀವ್ರ ಕಳವಳಕಾರಿ ವಿಚಾರ. ಕಾರವಾರ, ಜೊಯಿಡಾ, ಯಲ್ಲಾಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿ ಮಾಡಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ‌ ಮಾಡಬೇಕೆಂದು ಹಲವು ವರ್ಷಗಳಿಂದ ಜನರು ಹೋರಾಟ ನಡೆಸುತ್ತಿದ್ದಾರೆ. 

ಅಪಘಾತಗಳು ಹಾಗೂ ಇತರ ಹಲವು ಕಾರಣಗಳಿಂದ ಜನರು ಜೀವ ಕಳೆದುಕೊಂಡರೂ ಸರಕಾರಕ್ಕೆ ಮಾತ್ರ ನಿದ್ರೆಯಿಂದೇಳಲು ಇನ್ನೂ ಪುರುಸೊತ್ತಾಗಿಲ್ಲ. ಈ ನಡುವೆ ಮಾರಕ ಖಾಯಿಲೇ ಎಂದೇ ಹೇಳಲಾಗುವ ಕ್ಯಾನ್ಸರ್ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡುವಂತಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತೀ ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಕಳೆದ ಜನವರಿಯಿಂದ ಈವರೆಗೆ 225ಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ. ಕಳೆದ ಜನವರಿಯಲ್ಲಿ 24 ಪ್ರಕರಣ ಪತ್ತೆಯಾದರೆ, ಫೆಬ್ರುವರಿಯಲ್ಲಿ 48, ಮಾರ್ಚ್ ನಲ್ಲಿ 17, ಏಪ್ರಿಲ್ ನಲ್ಲಿ 17, ಮೇ ನಲ್ಲಿ 25, ಜೂನ್ ನಲ್ಲಿ 25, ಜುಲೈನಲ್ಲಿ 18, ಆಗಸ್ಟ್ ನಲ್ಲಿ 20, ಸೆಪ್ಟೆಂಬರ್ ನಲ್ಲಿ 25, ಅಕ್ಟೋಬರ್ ನಲ್ಲಿ 11 ಹಾಗೂ ನವೆಂಬರ್ ನಲ್ಲಿ 17 ಪ್ರಕರಣಗಳು ಪತ್ತೆಯಾಗಿವೆ. 

ಜಾತಿ ಗಣತಿ ಬಗ್ಗೆ ಊಹಾಪೋಹ ಬೇಡ: ಸಚಿವ ಪರಮೇಶ್ವರ್‌

ಇವುಗಳಲ್ಲಿ ಹೆಚ್ಚಾಗಿ ಬ್ರೆಸ್ಟ್ ಕ್ಯಾನ್ಸರ್ ಪ್ರಕರಣಗಳು ಕಾಣಿಸಿಕೊಂಡಿದ್ದು, ಕಳೆದ ಜನವರಿಯಿಂದ ಸುಮಾರು 55 ಪ್ರಕರಣ ಬ್ರೆಸ್ಟ್ ಕ್ಯಾನ್ಸರ್ ಪ್ರಕರಣಗಳು ದೃಢಪಟ್ಟಿವೆ. ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣ ಇನ್ನೂ ನಿಗೂಢವಾಗಿದ್ರೆ,  ತಂಬಾಕು ಸೇವನೆ ಹಾಗೂ ಇತರ ಕಾರಣಗಳಿಂದಲೂ ಕೆಲವರಿಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್ ಸಂಖ್ಯೆ ಕಳೆದ ನಾಲ್ಕೈದು ವರ್ಷದಲ್ಲಿ ಸಾಕಷ್ಟು ವರದಿಯಾಗಿದ್ದು, ಕೈಗಾ ಅಣುಸ್ಥಾವರದ ಸುತ್ತಮುತ್ತಲಿನ ತಾಲೂಕುಗಳಲ್ಲಿ ಹೆಚ್ಚಾಗಿ ಈ ಪ್ರಕರಣಗಳು ದಾಖಲಾಗುತ್ತಿವೆ ಎಂದೆನ್ನಲಾಗಿದೆ. 

ಅಣು ಸ್ಥಾವರವಿರುವ ಸ್ಥಳದ ಸುತ್ತಮುತ್ತಲ ಪ್ರದೇಶವಾದ ಕಾರವಾರದ ಕದ್ರಾ, ಜೊಯಿಡಾ, ಯಲ್ಲಾಪುರ ಹಾಗೂ ಶಿರಸಿ, ಸಿದ್ದಾಪುರ, ಅಂಕೋಲಾದ ಅಚವೆ, ಅಗಸೂರು ಸುತ್ತಮುತ್ತಲಿನ ಭಾಗದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚು ಪತ್ತೆಯಾಗಿದೆ. ಕಾರವಾರದ ಕದ್ರಾ ಬಳಿಯಿರುವ ಕೈಗಾದಲ್ಲಿ ಅಣು ಸ್ಥಾವರವಿದ್ದು, ಇಲ್ಲಿಂದ ಹೊರಹೊಮ್ಮುವ ವಿಕಿರಣವೇ ಕ್ಯಾನ್ಸರ್ ಹೆಚ್ಚಾಗಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹಿಂದೆ ಟಾಟಾ ಇನ್ಸ್‌ಸ್ಟಿಟ್ಯೂಟ್ ಸಿದ್ಧಪಡಿಸಿದ್ದ ವರದಿಯನ್ನು ಜಿಲ್ಲಾಡಳಿತ ಬಹಿರಂಗ ಪಡಿಸಬೇಕಲ್ಲದೇ, ಸರ್ಕಾರ ಈ ಬಗ್ಗೆ ಗಮನ ಹರಿಸಿ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕೆನ್ನುವುದು ಜಿಲ್ಲೆಯ ಜನರ ಒತ್ತಾಯ.

ನಿವೃತ್ತ ಅಧಿಕಾರಿ ನೇತೃತ್ವದಲ್ಲಿ ಅರ್ಜುನ ಸಾವಿನ ತನಿಖೆ: ಸಚಿವ ಈಶ್ವರ ಖಂಡ್ರೆ

ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ರೋಗಿಗಳು ಯಾವುದೇ ಚಿಕಿತ್ಸೆಗೂ ನೆರೆಯ ಗೋವಾ ಅಥವಾ ಮಂಗಳೂರು, ಉಡುಪಿಗೆ ತೆರಳಬೇಕಾದ ಪರಿಸ್ಥಿತಿ ಹಲವು ವರ್ಷಗಳಿಂದ ಜಿಲ್ಲೆಯಲ್ಲಿದೆ. ಈ ನಡುವೆ ಜಿಲ್ಲೆಯಲ್ಲಿ ಮಾರಕ ರೋಗವಾಗಿರುವ ಕ್ಯಾನ್ಸರ್ ಹೆಚ್ಚಿ‌ನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸರ್ಕಾರ ಈಗಲಾದರೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕಲ್ಲದೇ, ಈಗಿರುವ ಜಿಲ್ಲಾಸ್ಪತ್ರೆಯಲ್ಲಿ ತಜ್ಞರನ್ನು ನೇಮಿಸಿ ಅತ್ಯುತ್ತಮ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಅನ್ನೋದು ಜನರ ಒತ್ತಾಯ.

Follow Us:
Download App:
  • android
  • ios