ಕಬ್ಬಿನ ದರ ನಿಗದಿ, ಹಾಲಿನ ದರ ಹೆಚ್ಚಳಕ್ಕಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಇದನ್ನು ಖಂಡಿಸಿ ಡಿ.19ರಂದು ಮಂಡ್ಯ ನಗರ ಬಂದ್‌ಗೆ ಜಿಲ್ಲಾ ರೈತ ಸಂಘ ತೀರ್ಮಾನಿಸಿದೆ.

 ಮಂಡ್ಯ ( ಡಿ. 11) : ಕಬ್ಬಿನ ದರ ನಿಗದಿ, ಹಾಲಿನ ದರ ಹೆಚ್ಚಳಕ್ಕಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಇದನ್ನು ಖಂಡಿಸಿ ಡಿ.19ರಂದು ಮಂಡ್ಯ ನಗರ ಬಂದ್‌ಗೆ ಜಿಲ್ಲಾ ರೈತ ಸಂಘ ತೀರ್ಮಾನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ (Farmers) ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್‌.ಸಿ.ಮಧು ಚಂದನ್‌ ಹಾಗೂ ಜಿಲ್ಲಾಧ್ಯಕ್ಷ ಎ .ಕೆಂಪೂಗೌಡ, ಕಳೆದ ಒಂದು ತಿಂಗಳಿಂದ ನಗರದ ಸರ್‌ ಎಂ ವಿ ಪ್ರತಿಮೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ರೈತರ ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲವು ಬಾರಿ ವಿಭಿನ್ನ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದರೂ ಸರ್ಕಾರ (Karnataka Govt) ರೈತರ ಮನವಿಗೆ ಸ್ಪಂದಿಸುತ್ತಿಲ್ಲ. ಸಿಹಿ ಸುದ್ದಿ ಕೊಡುತ್ತೇವೆಂದು ಹೇಳಿ ಕಾಲ ದೂಡುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಮಂಡ್ಯ ನಗರ ಬಂದ್‌ಗೆ ತೀರ್ಮಾನಿಸಲಾಗಿದೆ. ಇದಕ್ಕೆ ನಗರದ ವ್ಯಾಪಾರಸ್ಥರು, ವಾಹನ ಚಾಲಕರು ಮತ್ತು ಮಾಲೀಕರು, ಹೋಟೆಲ್‌ ಮಾಲೀಕರು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.

ಎ.ಎಲ….ಕೆಂಪೂಗೌಡ ಮಾತನಾಡಿ, ಬೆಳಗ್ಗೆಯಿಂದ ಮಧ್ಯಾಹ್ನ 2ಗಂಟೆವರೆಗೆ ಮಂಡ್ಯ ನಗರ ಬಂದ್‌ ಮಾಡಲಾಗುವುದು. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಮಧ್ಯಾಹ್ನಕ್ಕೆ ಬಂದ್‌ ಸೀಮಿತಗೊಳಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಮೂರ್ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರ ಜಿಲ್ಲೆ ಹನೂರಿಗೆ ಬರಲಿದ್ದಾರೆ. ಅಲ್ಲಿ ಸುಮಾರು ಐದು ಸಾವಿರ ಜನರೊಂದಿಗೆ ರೈತ ಸಂಘ ಪ್ರತಿಭಟನೆ ನಡೆಸಲಿದೆ. ಇದಕ್ಕೆ ಜಿಲ್ಲೆಯಿಂದಲೂ ಸಾವಿರಾರು ಕಾರ್ಯಕರ್ತರು ತೆರಳಲಿದ್ದಾರೆ ಎಂದರು.

ಪ್ರತಿ ಲೀಟರ್‌ ಹಾಲಿಗೆ 40 ರು. ನಿಗದಿ ಮಾಡುವಂತೆ ಒತ್ತಾಯಿಸಿದ್ದೇವೆ. ಆದರೆ, ಕೇವಲ ಎರಡು ರು. ಹೆಚ್ಚಿಸಲಾಗಿದೆ. ಎಥೆನಾಲ್‌ ಲಾಭದಲ್ಲಿ ಪ್ರತಿ ಟನ್‌ಗೆ 50 ರು.ಗಳನ್ನು ರೈತರಿಗೆ ನೀಡಲಾಗುವುದೆಂದು ಹೇಳಲಾಗಿದೆ. ಸರ್ಕಾರ ರೈತರನ್ನು ಭಿಕ್ಷಕರಂತೆ ನೋಡುತ್ತಿದೆ. ರೈತರ ಕಡೆಗಣನೆ ಮಾಡುವುದು ಒಳ್ಳೆಯದಲ್ಲ. ಇಂದಿನ ದಿನದಲ್ಲಿ ಕೃಷಿಗೆ ತಗಲುತ್ತಿರುವ ವೆಚ್ಚಕ್ಕೆ ಸರಿಯಾದ ಆದಾಯವೂ ಬರುತ್ತಿಲ್ಲ ಎಂದರು.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಆ ವೇಳೆ ಸುವರ್ಣಸೌಧದ ಎದುರಿಗೆ ನಿಂತು ನಮಗೆ ನೀವು ಕೇಳಿದಷ್ಟುದರ ಕೊಡುವ ಯೋಗ್ಯತೆ ಇಲ್ಲ. ರೈತರ ನ್ಯಾಯಯುತ ಬೇಡಿಕೆ ಈಡೇರಿಸಲು ಆಗಲ್ಲ ಎಂದು ಕಹಿ ಸುದ್ದಿಯನ್ನಾದರೂ ಘೋಷಣೆ ಮಾಡಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಎಸ್‌.ಸಿ.ಮಧುಚಂದನ್‌ ಮಾತನಾಡಿ, ಕಬ್ಬಿನ ಉತ್ಪನ್ನಗಳಿಂದ ಮದ್ಯ ತಯಾರು ಮಾಡಲಾಗುತ್ತಿದೆ. ಪ್ರತಿ ಟನ್‌ ಕಬ್ಬಿನಿಂದ ಸುಮಾರು 60 ಲೀಟರ್‌ ಮದ್ಯವನ್ನು ಉತ್ಪಾದನೆ ಮಾಡಲಾಗುತ್ತಿದೆ. ವಾರ್ಷಿಕ ಅಂದಾಜು 30 ಸಾವಿರ ಕೋಟಿ ರು ಸರ್ಕಾರಕ್ಕೆ ಆದಾಯ ಬರುತ್ತಿದೆ. ಇದರಲ್ಲಿ ಶೇ.10ರಷ್ಟುಲಾಭವನ್ನು ಕೊಟ್ಟರೂ ರೈತರಿಗೆ ಅನುಕೂಲವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಟ್ರಸ್ವ್‌ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌, ಬಳ್ಳಾರಿ ರೈತ ಸಂಘದ ಅಧ್ಯಕ್ಷ ಎಂಎನ್‌ಕೆ ನಾಯ್ಡು, ಮಂಡ್ಯ ರೈತ ಸಂಘದ ಲಿಂಗಪ್ಪಾಜಿ, ಶಿವಳ್ಳಿ ಚಂದ್ರು, ರಾಮಕೃಷ್ಣ, ಪ್ರಕಾಶ್‌ ಹರವು, ಅಕ್ಕಿಗಿರಣಿ ಮಾಲೀಕರ ಸಂಘದ ಶಂಕರೇಗೌಡ ಇದ್ದರು.

19ಕ್ಕೆ ಮಂಡ್ಯ ನಗರ ಬಂದ್‌ಗೆ ಕರೆ - ರೈತ ಸಂಘದಿಂದ ತೀರ್ಮಾನ

- ಸರ್ಕಾರದ ವಿರುದ್ಧ ಆಕ್ರೋಶ -- ವಿವಿಧ ಬೇಡಿಕೆ ಈಡೇರಿಗೆ ಆಗ್ರಹ

-ಕಬ್ಬಿನ ದರ ನಿಗದಿ, ಹಾಲಿನ ದರ ಹೆಚ್ಚಳದ ಬಗ್ಗೆ ನಿರ್ಲಕ್ಷ್ಯ: ದೂರು

ಹಲವು ಬಾರಿ ವಿಭಿನ್ನ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದರೂ ಸರ್ಕಾರ ರೈತರ ಮನವಿಗೆ ಸ್ಪಂದಿಸುತ್ತಿಲ್ಲ