‘ಘರ್‌ ವಾಪ್ಸಿ ಅಲ್ಲ, ಕಾಂಗ್ರೆಸ್ಸಿನಲ್ಲಿ ಇದ್ದವರು ಬಿಜೆಪಿಗೆ ಬನ್ನಿ ಅಂತ ಹೇಳುತ್ತೇನೆ. ಕಾಂಗ್ರೆಸ್ಸಿನ ಯಾರೇ ಆಗಿದ್ದರೂ ಬಿಜೆಪಿಗೆ ಬರಬಹುದು  ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಹೇಳಿಕೆ

ದಾವಣಗೆರೆ(ಜು.14) : ‘ಘರ್‌ ವಾಪ್ಸಿ ಅಲ್ಲ, ಕಾಂಗ್ರೆಸ್ಸಿನಲ್ಲಿ ಇದ್ದವರು ಬಿಜೆಪಿಗೆ ಬನ್ನಿ ಅಂತ ಹೇಳುತ್ತೇನೆ. ತಾಪಂ, ಜಿಪಂ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ಸಿನ ಯಾರೇ ಆಗಿದ್ದರೂ ಬಿಜೆಪಿಗೆ ಬರಬಹುದು’ ​- ಇದು ಕಾಂಗ್ರೆಸಿಗೆ ಬರುವವರು ಅಪ್ಲಿಕೇಶನ್‌ ಹಾಕಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ನೀಡಿರುವ ತಿರುಗೇಟು.

ಜಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ನಾನು ಪ್ರವಾಸ ಮಾಡುತ್ತಿದ್ದೇನೆ. ತಾಲೂಕು ಪಂಚಾಯ್ತಿ ಜಿಲ್ಲಾ ಪಂಚಾಯ್ತಿ ಚುನಾವಣೆಗಳು ಸಮೀಪಿಸುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕರೆದಂತೆ ನಾನು ಸಹ ಕಾಂಗ್ರೆಸ್ಸಿನವರು ಯಾರೇ ಇದ್ದರೂ ಬಿಜೆಪಿಗೆ ಬರಬಹುದೆಂಬ ಆಹ್ವಾನ ನೀಡುತ್ತಿದ್ದೇನೆ ಎಂದರು.

'ಮುನಿ​ರತ್ನ ಸಚಿ​ವ​ರಾ​ಗೋದು ನಿಶ್ಚಿ​ತ, ಜಾರಕಿಹೊಳಿಗೆ ಅನುಕೂಲ'

ಇದೇವೇಳೆ ಕಾಂಗ್ರೆಸ್ಸಿನಲ್ಲಿ ಮಾಜಿ ಸಚಿವ ನೆಮ್ಮದಿಯಾಗಿದ್ದಾರಾ ಎಂಬ ಎಚ್‌.ಎಂ.ರೇವಣ್ಣ ಟೀಕೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ಸಿನಲ್ಲೇ ಮಾಜಿ ಸಚಿವ ಎಚ್‌.ಎಂ.ರೇವಣ್ಣ ನೆಮ್ಮದಿಯಾಗಿ ಇಲ್ಲದೇ ಇರಬಹುದು. ಬಿಜೆಪಿಯಲ್ಲಿ, ಸರ್ಕಾರದಲ್ಲಿ ನಾವೆಲ್ಲರೂ ನೆಮ್ಮದಿಯಾಗಿದ್ದೇವೆ ಎಂದು ಹೇಳಿದರು. ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಪಾಲಿಕೆ ಸದಸ್ಯನಾಗಿ, 3 ಸಲ ಶಾಸಕನಾಗಿ, ಇದೀಗ ಸಚಿವನಾದವನು ನಾನು. ಸ್ಥಳೀಯ ಮಟ್ಟದಿಂದ ರಾಜಕೀಯವಾಗಿ ಬೆಳೆದು ಬಂದವನು. ಕಾಂಗ್ರೆಸ್ಸಿನ ಯಾರೇ ಆಗಿದ್ದರೂ ಬಿಜೆಪಿಗೆ ಬರಲು ಅಹ್ವಾನ ನೀಡುತ್ತಿದ್ದೇನೆ. ವಲಸೆ ಬಂದ ನಾವು ಈಗ ಕಮಲ ಚಿಹ್ನೆಯಡಿ, ಬಿಜೆಪಿ ಪಕ್ಷದಲ್ಲಿ ನಾವು ಆರಾಮವಾಗಿ, ನೆಮ್ಮದಿಯಾಗಿದ್ದೇವೆ. ನಮಗೆ ಯಾವುದೇ ತೊಂದರೆ ಇಲ್ಲ ಎಂದು ಅಭಿಪ್ರಾಯಪಟ್ಟರು.