*  ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ಮಾರ್ಗದಲ್ಲಿ ಸಿಗುವ ಅಮೀನಳ್ಳಿಯಲ್ಲಿ ಬಸ್ ನಿಲ್ದಾಣ*  ಮೈಸೂರು ರಾಜ್ಯವಿದ್ದಾಗ ಸರಕಾರದ ನಿರ್ಮಾಣ ಎಷ್ಟು ಗುಣಮಟ್ಟದಿಂದಿತ್ತು ಎಂಬುದಕ್ಕೆ ಈ ಬಸ್ ನಿಲ್ದಾಣ ಸಾಕ್ಷಿ*  ಬಸ್ ನಿಲ್ದಾಣದ ಮೇಲ್ಭಾದಲ್ಲಿ ಸೀಲ್ ಹೊಡೆದಂತೆ ಎಂ.ಎಸ್‌.ಆರ್‌.ಟಿ.ಸಿ. ಎಂದು ಬರೆಯಲಾಗಿದೆ   

ಉತ್ತರ ಕನ್ನಡ(ಜು.04): ಕರ್ನಾಟಕ ರಾಜ್ಯ ನಿರ್ಮಾಣ‌ಗೊಳ್ಳೋ ಮೊದಲು ಮೈಸೂರು ರಾಜ್ಯ ಎಂದು ಗುರುತಿಸಲ್ಪಡುತ್ತಿತ್ತು. ಇತಿಹಾಸದ ಪುಟಗಳು ಹಾಗೂ ಕೆಲವೆಡೆ ಇದಕ್ಕೆ ಪುರಾವೆಗಳು ಕೂಡ ದೊರೆಯುತ್ತವೆ. ಇಂತದ್ದೇ ಒಂದು ಪುರಾವೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಕಾಣಸಿಗುತ್ತವೆ. ಅದು ಕೂಡಾ ಒಂದು ಬಸ್‌ಸ್ಟ್ಯಾಂಡ್ ಅಂದ್ರೆ ನೀವು ನಂಬ್ತೀರಾ..? ನಂಬಲೇಬೇಕು.‌ 

Add Asianetnews Kannada as a Preferred SourcegooglePreferred

ಹೌದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ಮಾರ್ಗದಲ್ಲಿ ಸಿಗುವ ಅಮೀನಳ್ಳಿಯಲ್ಲಿ ಈ ಬಸ್ ನಿಲ್ದಾಣವಿದ್ದು, ಇದರ ಮೇಲ್ಭಾದಲ್ಲಿ ಸೀಲ್ ಹೊಡೆದಂತೆ ಎಂ.ಎಸ್‌.ಆರ್‌.ಟಿ.ಸಿ. ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ಇದನ್ನು ನೋಡಿದ ಕೆಲವರು ಇದು ಮಹಾರಾಷ್ಟ್ರ ಸ್ಟೇಟ್ ರೋಡ್ ಟ್ರಾನ್ಸ್‌ಪೋರ್ಟ್ ಕಾರ್ಪೋರೇಷನ್ ಅಂದುಕೊಳ್ಳುತ್ತಾರೆ. ಇನ್ನು ಕೆಲವರಂತೂ ಇದು ರಾಜ್ಯದಲ್ಲಿ ಮಹಾರಾಷ್ಟ್ರದ ಪ್ರಭಾವವಾಗಿದ್ದು, ಇದನ್ನು ಬದಲಾಯಿಸದೆ ಸರಕಾರ ನಿರ್ಲಕ್ಷ್ಯ ವಹಿಸಿದೆ ಅಂತಾಲೂ ಆಡಿಕೊಳ್ಳುತ್ತಾರೆ. ಹಲವು ದಿನಗಳಿಂದ ‌ಜಿಲ್ಲೆಯಲ್ಲಿ ಭಾಷಾ ವಿವಾದ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಂತೂ ಶಿರಸಿ ತಾಲೂಕಿನ ಅಮ್ಮೀನಳ್ಳಿಯ ಬಸ್ ನಿಲ್ದಾಣದ ಫೋಟೋ ಕೂಡಾ ಹರಿದಾಡುತ್ತಿದೆ. 

ಮುಂಡಗೋಡ: ನರಭಕ್ಷಕ ನಾಯಿಗಳ ಕಾಟಕ್ಕೆ ಬೆಚ್ಚಿಬಿದ್ದ ಜನತೆ..!

ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ಇಂಗ್ಲೀಷ್‌ನಲ್ಲಿ ಎಂ.ಎಸ್.ಆರ್.ಟಿ.ಸಿ ಎಂದು ಬರೆದಿರುವುದೇ ಕಾರಣವಾಗಿದ್ದು, ಇದನ್ನು ಕೆದಕಿದಾಗ ತಿಳಿದುಬಂದ ಸತ್ಯ ವಿಚಾರವೇ ಬೇರೆ. ಈ ಹಿಂದೆ ನಮ್ಮ ರಾಜ್ಯದ ಹೆಸರು ಮೈಸೂರು ಎಂದು ಗುರುತಿಸಲ್ಪಟ್ಟಿದ್ದಾಗ ನಿರ್ಮಾಣವಾಗಿದ್ದ ಬಸ್‌ನಿಲ್ದಾಣ ಇದಾಗಿದೆ. ಇನ್ನೊಂದು ವಿಶೇಷತೆಯಂದ್ರೆ, ಇತ್ತೀಚಿನ ವರ್ಷಗಳಲ್ಲಿ ಸರಕಾರ ನಿರ್ಮಿಸಿದ ಕಟ್ಟಡಗಳ ಸ್ಥಿತಿ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಕಟ್ಟಿದ ಕೆಲವೇ ವರ್ಷಗಳಲ್ಲಿ ಶಿಥಿಲಗೊಳ್ಳುತ್ತದೆ. ಆದರೆ, ಹಿಂದೆ ಮೈಸೂರು ರಾಜ್ಯವಿದ್ದಾಗ ಸರಕಾರದ ನಿರ್ಮಾಣ ಎಷ್ಟು ಗುಣಮಟ್ಟದಿಂದಿತ್ತು ಎಂಬುದಕ್ಕೆ ಈ ಬಸ್ ನಿಲ್ದಾಣವೇ ಸಾಕ್ಷಿ. 

ಅಮ್ಮಿನಹಳ್ಳಿಯಲ್ಲಿರುವ ಈ ಬಸ್ ನಿಲ್ದಾಣ ಕರ್ನಾಟಕ ರಾಜ್ಯ ಉದಯವಾಗುವ ಮೊದಲು, ಮೈಸೂರು ರಾಜ್ಯ ಅಸ್ತಿತ್ವದಲ್ಲಿದ್ದಾಗ ನಿರ್ಮಾಣವಾಗಿದ್ರೂ, ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾದ ಬಸ್ ನಿಲ್ದಾಣಗಳನ್ನು ನಾಚಿಸುವಂತೆ ಈಗಲೂ ಗಟ್ಟಿಮುಟ್ಟಾಗಿ ನಿಂತಿದೆ. ಅಮೀನಳ್ಳಿಯಲ್ಲಿ ಮಾತ್ರವಲ್ಲದೇ, ಕತಗಾಲ್ ನಲ್ಲೂ ಅಂದಿನ ಬಸ್ ನಿಲ್ದಾಣ ಕಾಣಬಹುದಾಗಿದ್ದು, ಮಂಜುಗುಣಿಯಲ್ಲಿ ಮಾತ್ರ ಬಸ್ ನಿಲ್ದಾಣವನ್ನು ಸದ್ಯ ಹೊಸದಾಗಿ ನಿರ್ಮಿಸಲಾಗಿದೆ.